ಹೂವಿನಹಡಗಲಿ 02- ’ಜೆಸಿಐ ಸಂಸ್ಥೆ ಯುವಜನರಿಗೆ ಸನ್ಮಾರ್ಗತೋರುವ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದೆ’ ಎಂದು ಶಾಸಕ ಕೃಷ್ಣನಾಯ್ಕ ಪ್ರಶಂಸಿಸಿದರು.
ಪಟ್ಟಣದ ಎಸ್ಆರ್ ಎಂಪಿಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಭಾನುವಾರ ಜೆಸಿಐ ಹೂವಿನ ಹಡಗಲಿ ರಾಯಲ್ ಅತಿಥ್ಯದಲ್ಲಿ ಹಮ್ಮಿಕೊಂಡಿದ್ದ ವಲಯ- 24ರ ಮಧ್ಯ ವಾರ್ಷಿಕ ವಲಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ’ಯುವಕರಿಗೆ ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಇದೆ. ಅವರಿಗೆ ಸೂಕ್ತ ಮಾರ್ಗದರ್ಶನ, ಅವಕಾಶಗಳನ್ನು ನೀಡಿದರೆ ಸಮಾಜದ ಚಿತ್ರಣ ಬದಲಾಗಲಿದೆ’ ಎಂದರು. ಅಳವುಂಡಿ ಮಠದ ಮರುಳಾ ರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಸಿಐ ವಲಯ ಅಧ್ಯಕ್ಷ ಗೌರೀಶ್ ಭಾರ್ಗವ ಉದ್ಘಾಟಿಸಿದರು.
ವಲಯ ಉಪಾಧ್ಯಕ್ಷ ಮಧುಸೂದನ ನಾವಡ ಅಧ್ಯಕ್ಷತೆ ವಹಿಸಿದ್ದರು. ವಲಯ ಪೂರ್ವಾಧ್ಯಕ್ಷ ಬಸವರಾಜ ದಿಂಡೂರ, ಜೆಸಿಐ ವಲಯ ಪದಾಧಿಕಾರಿಗಳಾದ ಪ್ರಭುಲಿಂಗಪ್ಪ ಹಲಗೇರಿ, ಚನ್ನವೀರೇಶ ಹಾವಣಗಿ, ಎಚ್.ಪಿ.ಸುದರ್ಶನ, ಅತಿಥ್ಯ ಘಟಕದ ಅಧ್ಯಕ್ಷ ವಿನಾಯಕ ಕೋಡಿಹಳ್ಳಿ ಹಾಗೂ ಪದಾಧಿಕಾರಿಗಳು, ಜೆಸಿಐ ಹಿರಿಯ ಸದಸ್ಯರುಇದ್ದರು.