ರಾಣೇಬೆನ್ನೂರು 13: ಕನ್ನಡ ನಾಡು,ನುಡಿ,ನೆಲ, ಜಲ, ಭಾಷೆ ರಕ್ಷಣೆ ಮತ್ತು ಸಂರಕ್ಷಣೆ ಮಾಡುವ ಏಕೈಕ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು ಅದರ ಮೂಲಕ ಇಂದು ಸಮಗ್ರ ಕನ್ನಡಿಗರ ಸ್ವಾಯತ್ಯ ಸಂಸ್ಥೆಯಾಗಿ ಬೆಳವಣಿಗೆ ಕಂಡಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ್ ಶಿಗ್ಲಿ ಹೇಳಿದರು. ಅವರು ಇತ್ತೀಚೆಗೆ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಲಾಗಿದ್ದ ಮೈಸೂರು ಸಂಸ್ಥಾನದ ಒಡೆಯರ್ ರಾಜ ಸಂತತಿಯ 24ನೇ ಮಹಾ ರಾಜರಾಗಿದ್ದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಕನ್ನಡಿಗರು ನಾವೆಲ್ಲರೂ ಒಂದೇ ಎನ್ನುವ ಭಾವದೊಂದಿಗೆ ಅಂದು ಮಹಾರಾಜರು ತಮ್ಮ ದೂರ ದೃಷ್ಟಿಯಿಂದ ಸಾಹಿತ್ಯ ಪರಿಷತ್ತಿನ ಅನೇಕ ಧ್ಯೇಯ ವಾಕ್ಯಗಳನ್ನು ಅಳವಡಿಸಿಕೊಂಡು, ತಮ್ಮದೇ ಆದ ರೀತಿಯಲ್ಲಿ ಪರಿಷತ್ತನ್ನು ಬೆಳೆಸಲು ಸಹಕಾರಿಯಾಗಿದ್ದಾರೆ ಎಂದರು. 1884, ಜೂನ್ 4 ರಂದು ಜನ್ಮ ತಾಳಿದ ಅವರು ಸುಧೀರ್ಘ 38 ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನಡೆಸಿ ಪ್ರಜೆಗಳಿಗೆ ಪ್ರೀತಿ ಪಾತ್ರರಾಗಿದ್ದರು ಅಲ್ಲದೆ, ಅಂದೇ " ರಾಜರ್ಷಿ " ಬಿರುದನ್ನು ಗಳಿಸಿ ತಮ್ಮ ಸಂಸ್ಥಾನದ ಏಳಿಗೆಗಾಗಿ ಮತ್ತು ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸಾಮಾಜಿಕ ಪರಿವರ್ತನೆ ಹರಿಕಾರಾಗಿದ್ದರು ಎಂದರು.
ಕನ್ನಡಿಗರ ಬಹು ಉದ್ದೇಶ ಮತ್ತು ಏಕತೆ ಸಮಗ್ರತೆಗೆ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ತನ್ನದೇ ಆದ ರೀತಿಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ಕನ್ನಡ ಮತ್ತು ಕನ್ನಡಿಗರು ಉಳಿವು ಮತ್ತು ಬೆಳವಣಿಗೆಗೆ ಇಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಮುಖ ಕಾರಣವಾಗಿದೆ ಎಂದರು. ಕಸಾಪ ಗೌರವ ಕಾರ್ಯದರ್ಶಿ ಜಗದೀಶ ಮಳಿಮಠ, ಸ್ವಾಕರವೇ ರಾಜ್ಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಸದಸ್ಯ ಚಂದ್ರಶೇಖರ ಮಡಿವಾಳರ, ಪರಶುರಾಮ ಸವಣೂರ, ಪರಶುರಾಮ ಕುರವತ್ತಿ, ರಿಯಾಜ್ ಅಹ್ಮದ್ ದೊಡ್ಮನಿ, ಮೃತ್ಯುಂಜಯ ಕರಿಯಜ್ಜಿ, ಕು: ರವಿ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.