ಮಾಂಜರಿ 12 ; ಚಿಕ್ಕೋಡಿ ತಾಲೂಕಿನ ಮಾಂಜರಿ ಯೆಡೂರ ಚೆಂದೂರ ಇಂಗಳಿ ಅಂಕಲಿ ಗ್ರಾಮಗಳ ಜೊತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಹೋರಿಗಳನ್ನು ಶೃಂಗರಿಸಿ ಓಡಿಸುವ ಮೂಲಕ ರೈತರು ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಚಿಕ್ಕೋಡಿ ತಾಲೂಕಿನ ಗ್ರಾಮೀಣ ಭಾಗದ ರೈತರು ಗುರುವಾರ ಬೆಳಗ್ಗೆಯಿಂದಲೇ ತಮ್ಮ ಮನೆಗಳಲ್ಲಿರುವ ಎತ್ತು ಹಾಗೂಹೋರಿಗಳ ಮೈತೊಳೆದು, ಬಣ್ಣ ಹಚ್ಚಿ, ವಿವಿಧ ಬಣ್ಣದ ರಿಬ್ಬನ್, ಜೂಲಾ ಕಟ್ಟಿ, ಕೊಂಬಡುಸು ಹಾಕಿ, ಗೆಜ್ಜೆಸರ, ಕಾಲೆಜ್ಜೆ, ಒಣಕೊಬ್ಬರಿ, ಚಕ್ಕುಲಿ, ಕೊಡುಬಳಿ ಹಾರ ಹಾಕಿ ಸಿಂಗಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಶೃಂಗರಿಸಲಾಗಿದ್ದ ಹೋರಿಗಳನ್ನು ಗ್ರಾಮದ ಅಗಸಿಗಳಲ್ಲಿ ಅಖಾಡಕ್ಕೆ ಕರೆತಂದು ಸಾಲು ಸಾಲಾಗಿ ಓಡಿಸಿ, ಸಿಳ್ಳೆ, ಕೇಕೆಹಾಕಿ ಸಂಭ್ರಮಿಸಿದರು. ಅಖಾಡಗಳಲ್ಲಿಗಟ್ಟಿತನ ಪ್ರದರ್ಶಿಸುವ ಕೆಲ ಯುವಕರು, ಪಡ್ಡೆ ಹುಡುಗರು ತಲೆಗೆ ಟವೆಲ್ ಕಟ್ಟಿ ಜಟ್ಟಿಯಾಗಿ ನಿಂತು, ಹೋರಿ ಜತೆಗೆ ಭರ್ಜರಿಯಾಗಿ ಫೋಸ್ ಕೊಟ್ಟು ಕರಿ ಹರಿಯುವಂತಹ ಸಾಹಸಮಯ ದೃಶ್ಯಗಳು ಎಲ್ಲೆಡೆ ಕಂಡುಬಂದವು. ಬಳಿಕ ಅಖಾಡದಲ್ಲಿ ಓಟ ಪ್ರದರ್ಶಿಸಿ ಮನೆಗೆ ಬಂದ ಹೋರಿಗಳಿಗೆ ರೈತ ಮಹಿಳೆಯರು ಆರತಿ ಎತ್ತಿ ಖುಷಿಪಟ್ಟರು. ಹಬ್ಬದ ಅಂಗವಾಗಿ ರೈತಾಪಿ ಕುಟುಂಬದವರು ಮನೆಯಲ್ಲಿ ಕಡಬು, ಕರ್ಚಿಕಾಯಿ, ಅಕ್ಕಿಹುಗ್ಗಿ, ರೊಟ್ಟಿ, ಹೆಸರುಕಾಳು, ಮಡಿಕೆ ಕಾಳಿನಪಲ್ಲೆ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ, ಚಕ್ಕುಲಿ, ಸ್ಯಾಂಡಿಗೆ, ಹಪ್ಪಳ, ಮಾವಿನಹಣ್ಣಿನ ಸೀಕರಣೆ, ಹೋಳಿಗೆ ಸೇರಿದಂತೆ ಮತ್ತಿತರ ವಿಶೇಷ ಸಿಹಿ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡಿದರು.
ಬಳಿಕ ಶೃಂಗರಿಸಲಾಗಿದ್ದ ಹೋರಿಗಳನ್ನು ಗ್ರಾಮದ ಅಗಸಿಗಳಲ್ಲಿ ಅಖಾಡಕ್ಕೆ ಕರೆತಂದು ಸಾಲು ಸಾಲಾಗಿ ಓಡಿಸಿ, ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು ಅಖಾಡದಲ್ಲಿ ಓಟ ಪ್ರದರ್ಶಿಸಿ ಮನೆಗೆ ಬಂದ ಹೋರಿಗಳಿಗೆ ರೈತ ಮಹಿಳೆಯರು ಆರತಿ ಎತ್ತಿ ಖುಷಿಪಟ್ಟರು.