ರಾಣೇಬೆನ್ನೂರು 13 : ಮುಂಗಾರು ಬಿತ್ತನೆಯ ಪೂರ್ವದಲ್ಲಿ ರೈತರಿಗೆ ಸೂಕ್ತ ಕೃಷಿ ಪದ್ಧತಿಗಳ ಬಗ್ಗೆ ಮತ್ತು ಆಯಾ ಪ್ರದೇಶಕ್ಕನುಸಾರವಾಗಿ ತಕ್ಕಂತೆ ಬೆಳೆಯುವ ಬೆಳೆಗಳ ಬಗ್ಗೆ ನುರಿತ ತಜ್ಞ ವಿಜ್ಞಾನಿಗಳು ತಿಳಿಸಿಕೊಡುವ ಹಾಗೂ ಆಧುನಿಕ ತಳಿಗಳನ್ನು ಅಳವಡಿಕೆ ಮಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಲು ರೈತರಗಿ ಸಾಕಷ್ಟು ಅನುಕೂವಾಗುವ ಕಾರ್ಯಕ್ರಮವೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಉದ್ದೇಶವಾಗಿದ್ದು, ಈ ಕಾರ್ಯಕ್ರಮವನ್ನು ಕೃಷಿ ಇಲಾಖೆಯವರು ಮುಂಗಾರು ಮಳೆ ಪ್ರಾರಂಭವಾಗುವ ಮೊದಲು ರೈತರು ಹೊಲವನ್ನು ಹದಮಾಡಿ ಮಳೆಗಾಗಿ ಕಾಯುವ ರೈತು ವಿರಾಮದಲ್ಲಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಹಳ್ಳಿ ಹಳ್ಳಿಗಳಲ್ಲಿ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾವಣೆಯಾಗಿ ಕೃಷಿ ವಿಜ್ಞಾನಿಗಳು ಹೇಳುವ ಮಹತ್ವದ ತಿಳುವಳಿಕೆಯನ್ನು ಬಿತ್ತನೆ ಸಂದರ್ಭದಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಅದನ್ನು ಬಿಟ್ಟು ರೈತರು ಬಿತ್ತನೆ ಮಾಡಿ ಮುಗಿಯುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡಲು ಬಂದರೆ ಈಗ ರೈತರು ಸಿಗುವುದಿಲ್ಲ ನೀವು ಹೇಳುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವೂ ಆಗುವುದಿಲ್ಲವೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು.
ಅವರು ಇತ್ತೀಚೆಗೆ ಮುಷ್ಟೂರು ಗ್ರಾಮದ ಶಾಲಾ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಕೃಷಿ ಇಲಾಖೆಯ ರಾಣೇಬೆನ್ನೂರು ಇವುಗಳ ಸಂಯುಕ್ತಾಶ್ರಯದಲ್ಲಿ ರಾಣೇಬೆನ್ನೂರು ತಾಲೂಕಿನ ಕುಪ್ಪೇಲೂರು, ಮೇಡ್ಲೇರಿ, ರಾಣೇಬೆನ್ನೂರು ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ತಜ್ಞರ ತಂಡದೊಂದಿಗೆ ಭರದಿಂದ ಹಮ್ಮಿಕೊಂಡ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಉದ್ಘಾಟಿಸಿ ನೆರೆವೇರಿಸಿ ಮಾತನಾಡಿದ ಅವರು ಕಾರ್ಯಕ್ರಮದ ಸದುದ್ದೇಶವನ್ನು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿಯ ಡಾ. ಮಹೇಶ ಬಿರಾದರ ಮಾತನಾಡಿ ಹವಮಾನ ವೈಪರಿತ್ಯದಿಂದ ಕೀಟಗಳ ಹಾವಳಿ ಹೆಚ್ಚುತ್ತಿದ್ದು ಸಮಗ್ರ ಕೀಟನಿರ್ವಹಣೆಗೆ ಕ್ರಮಗಳನ್ನು ಅನುಸರಿಸಿ ರೈತರು ನಿರ್ವಹಣೆ ಮಾಡಬೇಕೆಂದರು.
ಇನ್ನೊಬ್ಬ ಕೃಷಿ ವಿಜ್ಞಾನಿ ಡಾ. ಸಿ.ಎನ್. ರಾವ್ ಮಾತನಾಡಿ ರೈತರು ವಿಷಯುಕ್ತದಿಂದ ಕೂಡಿರುವ ಕೀಟನಾಶಗಳು ಹಾಗೂ ರಸಗೊಬ್ಬರಗಳನ್ನು ಬಳಸದೆಯೇ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಳ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಅಧಿಕಾರಿ ಅರವಿಂದ ಎಂ. ರವರು ಸೂಕ್ತ ಕೃಷಿ ಪದ್ಧತಿಗಳನ್ನು ಹಾಗೂ ಅಧಿಕ ಇಳುವರಿಗಳನ್ನು ಕೊಡುವ ತಳಿಗಳನ್ನು ರೈತರು ಆಯ್ಕೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸದೃಡರಾಗಬೇಕೆಂದರು. ಕೃಷಿ ಅಧಿಕಾರಿ ‘ ಡಾ. ಬಸಮ್ಮ ಹಾದಿಮನಿ ಇತರೆ ಅಧಿಕಾರಿಗಳು ಹಾಜರಿದ್ದರು.
ಪ್ರಗತಿಪರ ರೈತನಾದ ಹರಿಹರಗೌಡ ಪಾಟೀಲ, ಮುನಾಪಸಾಬ ಶೇತಸನದಿ, ವೆಂಕಟೇಶರಡ್ಡಿ ಬಳ್ಳಾರಿ, ಸುರೇಶಪ್ಪ ತಳವಾರ, ಮಲ್ಲಿಕಾರ್ಜುನ ಪೂಜಾರ, ಬಸಪ್ಪ ಜೆ. ಯಲ್ಲಕ್ಕನವರ, ಬಸವರಾಜ ಯಲ್ಲಕ್ಕನವರ, ಯಲ್ಲಪ್ಪ ಓಲೇಕಾರ, ಉಮೇಶಪ್ಪ ಮುಷ್ಟೂರುನಾಯ್ಕ ಹಾಗೂ ಚಂದ್ರಮ್ಮ ಹಿರೇಮರದ ಗ್ರಾ.ಪಂ. ಉಪಾಧ್ಯಕ್ಷರು ಸೇರಿದಂತೆ ಮುಂತಾದ ನೂರಾರು ರೈತರು ಭಾಗಹಿಸಿದ್ದರು.
ಕೃಷಿಸಖಿ ಶಾರದಾ ಸಾಲೀಮಠ ಕಾರ್ಯಕ್ರಮ ನಿರೂಪಿಸಿದರು.