ಶಾಲಾ ಆವರಣ ಸ್ವಚ್ಛವಾಗಿಟ್ಟುಕೊಳ್ಳಲು ಡಿಹೆಚ್ಓ ಡಾ.ಯಲ್ಲಾ ರಮೇಶ್ ಬಾಬು ಸಲಹೆ
ಬಳ್ಳಾರಿ 13: ರೋಗ ಲಕ್ಷಣಗಳಾಧರಿಸಿ ಚಿಕಿತ್ಸೆ ನೀಡಲ್ಪಡುವ ಡೆಂಗ್ಯು ರೋಗ ನಿಯಂತ್ರಣಕ್ಕೆ ಶಿಕ್ಷಕರ ಪಾತ್ರವು ಮುಖ್ಯವಾಗಿದ್ದು, ತಮ್ಮ ಶಾಲೆ ಆವರಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಶಾಲೆಗಳ ಆರಂಭವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಾದ್ಯಂತ ಶಾಲಾ ಶಿಕ್ಷಕರುಗಳಿಗೆ ಡೆಂಗ್ಯು ನಿಯಂತ್ರಣ ಕುರಿತು ತರಬೇತಿ ನೀಡಲಾಗುತ್ತಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 41 ಶಾಲೆಗಳ ವಿಜ್ಞಾನ ನೋಡಲ್ ಶಿಕ್ಷಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಬಾರಿ ಮುಂಚಿತವಾಗಿಯೇ ಮಳೆಗಾಲ ಆರಂಭಗೊಂಡಿದೆ. ಅದೇರೀತಿಯಾಗಿ ಶಾಲೆಗಳು ಸಹ ಪ್ರಾರಂಭವಾಗಿದ್ದು, ಈ ಹಿನ್ನಲೆಯಲ್ಲಿ ಶಾಲಾ ಆವರಣಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಎಲ್ಲಾ ಶಾಲೆಗಳಲ್ಲಿಯ ನೀರು ಸಂಗ್ರಹಕ ಸಿಂಟೆಕ್ಸ್ಗಳನ್ನು ಶುಚಿಗೊಳಿಸಿ, ಸರಿಯಾಗಿ ಮುಚ್ಚಬೇಕು ಹಾಗೂ ಖಾಸಗಿ ವಸತಿ ಶಾಲೆಗಳಲ್ಲಿ ಬಸ್ಗಳ ಟೈರ್ಗಳನ್ನು ಸೂಕ್ತ ವೀಲೆವಾರಿ ಮಾಡಬೇಕು. ಶಾಲೆಗಳಲ್ಲಿ ಆರೋಗ್ಯ ಇಲಾಖೆಯಿಂದ ಸಿದ್ಧಪಡಿಸಿರುವ ವಿಡಿಯೋಗಳನ್ನು ಸ್ಮಾರ್ಟ್ ಕ್ಲಾಸ್ ಮೂಲಕ ಪ್ರದರ್ಶಿಸಿ ಹೆಚ್ಚಿನ ಜಾಗೃತಿಗೆ ಕೈ ಜೋಡಿಸಬೇಕು ಎಂದರು.
ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವುದರ ಮೂಲಕ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಚಿಕುನ್ಗುನ್ಯಾ, ಮಲೇರಿಯಾ, ಆನೇಕಾಲು ರೋಗ, ಮೆದುಳು ಜ್ವರ ಮುಂತಾದವುಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಶಾಲೆಗಳಿಗೆ ಆಗಮಿಸುವ ವೈದ್ಯಕೀಯ ತಂಡ ನೀಡುವ ಸಲಹೆಗಳನ್ನು ತಪ್ಪದೇ ಅನುಸರಿಸಿ ರೋಗ ತಡೆಗೆ ಸಹಕರಿಸಬೇಕು ಎಂದು ತಿಳಿಸಿದರು.
ನಿರಂತರವಾಗಿ ನೀರು ನಿಲ್ಲುವ ಸ್ಥಳಗಳಲ್ಲಿ ಸುಟ್ಟ ಆಯಿಲ್ ಹಾಕಲು ಮತ್ತು ಮಕ್ಕಳು ಉದ್ದ ತೋಳಿನ ಶರ್ಟ್ ಹಾಗೂ ಪಾದದವರೆಗೆ ರಕ್ಷಿಸುವ ಪ್ಯಾಂಟ್ ಧರಿಸುವಂತೆ ಸೂಚಿಸಬೇಕು ಎಂದರು.
*ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆಗೆ ವ್ಯವಸ್ಥೆ:*
ಜಿಲ್ಲೆಯ ಎಲ್ಲ ಆರೋಗ್ಯ ಕೆಂದ್ರಗಳಲ್ಲಿ ರಕ್ತ ಪರೀಕ್ಷೆ ಮೂಲಕ ಮಲೇರಿಯಾ, ಡೆಂಗ್ಯು ರೋಗ ಪತ್ತೆ ಹಚ್ಚುವ ಹಾಗೂ ಪ್ಲೆಟ್ಲೇಟ್ಸ್, ಸಿಬಿಸಿ, ಹೆಚ್ಬಿ ಮುಂತಾದವುಗಳ ಪರೀಕ್ಷೆ ಹಾಗೂ ಬೆಳಗಿನ ಅವಧಿಯಲ್ಲಿ ಉಪಹಾರ ಪೂರ್ವ ರಕ್ತ ಪರೀಕ್ಷೆ ಮಾಡಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರಿಗೆ ಇದರ ಸದುಪಯೋಗಕ್ಕಾಗಿ ವ್ಯಾಪಕ ಪ್ರಚಾರ ನೀಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸುನೀಲ್, ಡಾ.ಬಾಲಾಜಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ, ಆರೋಗ್ಯ ನೀರೀಕ್ಷಣಾಧಿಕಾರಿ ವೆಂಕಪ್ಪ ಸೇರಿದಂತೆ ಶಾಲಾ ಗುರುಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.