ಬೆಳಗಾವಿ 16: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇಲ್ಲಿನ ಹಿಂಡಲಗಾ ಜೈಲಿನಲ್ಲಿ ಜೂನ್ 18ರಂದು ಕಾರಾಗೃಹವಾಸಿಗಳಿಗೆ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಿದೆ.
ಕಮ್ಮಟವನ್ನು ಮುಂಜಾನೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಉದ್ಘಾಟಿಸುವರು. ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಉತ್ತರ ವಲಯ, ಬೆಳಗಾವಿ ಕಾರಾಗೃಹಗಳ ಉಪಮಹಾನೀರೀಕ್ಷಕರಾದ ಟಿ.ಪಿ. ಶೇಷ ಮತ್ತು ಹಿರಿಯ ಲೇಖಕರಾದ ಡಾ.ಸರಜೂ ಕಾಟ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಕಾರಾಗೃಹ, ಹಿಂಡಲಗಾದ ಮುಖ್ಯ ಅಧೀಕ್ಷಕರಾದ ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅವರ ಉಪಸ್ಥಿತಿಯಿರಲಿದೆ. ಸಾಹಿತ್ಯ ಕಮ್ಮಟ ಸಂಚಾಲಕರಾದ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕರಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಕಾರ್ಯಕ್ರಮ ಸಂಯೋಜಕರಾಗಿದ್ದಾರೆ. ವಿಶೇಷವಾಗಿ ಕಾರಾಗೃಹವಾಸಿಗಳಿಗಳಿಂದ ಹಾಗೂ ನಿಯೋಜಿತ ಪೋಲಿಸ್ ಸಿಬ್ಬಂದಿಗಳಿಂದ ಕವಿಗೋಷ್ಠಿ ನಡೆಯಲಿದೆ.
ಶರಣರ ವಚನಗಳಲ್ಲಿ ಜೀವನ ಮೌಲ್ಯಗಳು, ಸಾಹಿತ್ಯ ಓದಿನ ಖುಷಿ, ಕಾವ್ಯ- ನಮಗೇಕೆ ಬೇಕು? ಈ ವಿಷಯಗಳ ಕುರಿತಾಗಿ ವಿಚಾರಗೋಷ್ಠಿ, ಸಂವಾದ ನಡೆಯಲಿದೆ.ಕಾರ್ಯಕ್ರಮ ನಿರ್ವಹಣೆಯನ್ನು ಕೇಂದ್ರ ಕಾರಾಗೃಹ, ಹಿಂಡಲಗಾದ ಉಪಾಧ್ಯಾಯರಾದ ಶಶಿಕಾಂತ ಯಾದಗುಡೆ ಮಾಡಲಿದ್ದಾರೆ.