ಹಾವೇರಿ 16: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ. ನಿರಂತರ ಕ್ರಿಯಾಶೀಲತೆಯ ಕಾರ್ಯನಡೆಯಿಂದ ಭದ್ರ ಭಾರತದ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮಹತ್ವ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಜರುಗಿದ 2024-25 ನೇ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬದುಕಿನ ಅವಿಭಾಜ್ಯ ಅಂಗವಾಗಿ ಶಿಕ್ಷಣ ಒಂದೆಡೆ ಇದ್ದರೆ,ಮತ್ತೊಂದೆಡೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿಕಾಸಕ್ಕೆ ನಾಂದಿಯಾಗುತ್ತವೆ. ಪ್ರಬಲ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ. ಶಿಕ್ಷಣದಿಂದ ಮಾನಸಿಕ ಪ್ರೌಢಿಮೆ ಬೆಳೆದರೆ, ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಾದವರು ಸತತ ಅಧ್ಯಯನ ಮತ್ತು ಪರಿಶ್ರಮದಿಂದ ಸಾಧನೆಯ ಹಾದಿ ಹಿಡಿಯಬೇಕಿದೆ. ಯಾವುದೇ ವೃತ್ತಿ ಕ್ಷೇತ್ರವಿರಲಿ ಆಯ್ಕೆಯ ವಿಷಯ ಬಂದಾಗ ಜಾಗೃತಿಯ ಹೆಜ್ಜೆ ಹಾಕುವ ಅಗತ್ಯತೆ ಇದೆ. ಪ್ರತಿ ವಿದ್ಯಾರ್ಥಿಯಲ್ಲೂ ವಿಶೇಷ ಪ್ರತಿಭೆ ಇರುತ್ತದೆ.ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದರೆ ಅಸಾಧ್ಯವೂ ಸಹ ಸಾಧ್ಯವಾಗಿ, ಸಾಧನೆಯಾಗಿ ಪರಿಣಮಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಗದಗ ಕೆ.ಎಲ್.ಇ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎ.ಕೆ.ಮಠ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರ ಪ್ರತಿನಿಧಿ ಎಂ.ಸಿ. ಕೊಳ್ಳಿ ವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಸಿ. ಬಿ. ಹಿರೇಮಠ, ಎಸ್. ಎಂ. ಹುರಳಿಕುಪ್ಪಿ, ಎಸ್. ಜೆ. ಹೆರೂರ, ಜೆ. ಎಸ್. ಅರಣಿ, ಬಸವರಾಜ ಮಾಸೂರ ಉಪಸ್ಥಿತರಿದ್ದರು.ರೇಣುಕಾ ಶೇತಸನದಿ ಸಂಗಡಿಗರು ಪ್ರಾರ್ಥಿಸಿದರು.ಪ್ರಾಚಾರ್ಯ ಪ್ರೊ. ಎಂ. ಎಂ. ಹೊಳ್ಳಿಯವರ ಸ್ವಾಗತಿಸಿದರು. ಕ್ರೀಡಾ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಎಸ್. ಆರ್. ನಾಯಕ ಪರಿಚಯಿಸಿದರು.ಸಾಂಸ್ಕೃತಿಕ ಒಕ್ಕೂಟದ ಕಾರ್ಯಾಧ್ಯಕ್ಷೆ ಪ್ರೊ. ಜಿ. ಕೆ. ಮಂಕಣಿ ವರದಿ ವಾಚಿಸಿದರು. ಡಾ. ಂ. ಪಿ. ಕಣವಿ, ಪ್ರೊ. ಪೂಜಾ ಎಂ. ಪ್ರೊ. ಶ್ರೀದೇವಿ ದೊಡ್ಡಮನಿ ನಿರ್ವಹಿಸಿದರು. ಐ.ಕ್ಯು.ಎ.ಸಿ. ಸಂಯೋಜಕಿ ಪ್ರೊ. ರೂಪಾ ಕೋರೆ ವಂದಿಸಿದರು. ಈ ಸಂದರ್ಭದಲ್ಲಿ ಸಾಧನೆ ತೋರಿದ ಪ್ರಾಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ರಾಜ್ಯ-ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಮಾಣ ಪತ್ರ, ಪಾರಿತೋಷಕ ವಿತರಿಸಲಾಯಿತು.