ಬೆಳಗಾವಿ 06: ನಗರದ ರಾಮಕೃಷ್ಣ ಮಿಷನ್ ಆಶ್ರಮವು ಜೂನ್ 2025ರಲ್ಲಿ ತನ್ನ ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿ ಒಂದು ಮಹತ್ವಪೂರ್ಣ ಮೈಲಿಗಲ್ಲು ತಲುಪುತ್ತಿದೆಯೆಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ. ಈ ಆಶ್ರಮವು ಉತ್ತರ ಕರ್ನಾಟಕದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ಸಾರುವ ಕೇಂದ್ರವಾಗಿದೆ. ಈ ಸ್ಥಳವು ಸ್ವಾಮಿ ವಿವೇಕಾನಂದರು 1892ರಲ್ಲಿ ಬೆಳಗಾವಿಗೆ ಭೇಟಿ ನೀಡಿದಾಗ 9 ದಿನಗಳ ಕಾಲ ತಂಗಿ ಪಾವನಗೊಳಿಸಿದ ಒಂದು ಐತಿಹಾಸಿಕ ತೀರ್ಥಕ್ಷೇತ್ರವಾಗಿದೆ.
ಈ ರಜತೋತ್ಸವದ ನೆನಪಿಗಾಗಿ, 2025ರ ಜೂನ್ 8, ಭಾನುವಾರದಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಆಶ್ರಮದ ಆವರಣದಲ್ಲಿ ಒಂದು ಸಂಸ್ಮರಣ ಸಭೆಯನ್ನು ಏರಿ್ಡಸಲಾಗಿದೆ.
ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ನಿನ ಪರಮಾಧ್ಯಕ್ಷರಾದ ಪರಮ ಪೂಜ್ಯ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅವರು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಭಕ್ತರನ್ನು ಆಶೀರ್ವದಿಸಲು ಸಮ್ಮತಿಸಿರುವುದು ನಮ್ಮೆಲ್ಲರಿಗೂ ಸೌಭಾಗ್ಯದ ಸಂಗತಿಯಾಗಿದೆ.
ಪರಮಪೂಜ್ಯ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಅಧ್ಯಕ್ಷರು, ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು ಮತ್ತು ಶ್ರೀ ಎಚ್. ಕೆ. ಪಾಟೀಲ, ಸನ್ಮಾನ್ಯ ಕಾನೂನು ಹಾಗೂ ಸಂಸತ್ತೀಯ ವ್ಯವಹಾರಗಳು, ಕಾನೂನು ರಚನೆ ಮತ್ತು ಪ್ರವಾಸೋದ್ಯಮ ಖಾತೆಗಳ ಸಚಿವರು, ಕರ್ನಾಟಕ ಸರ್ಕಾರ ಇವರು ಪ್ರಮುಖ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ಡಿ. ಆರ್. ಪಾಟೀಲ, ಮಾಜಿ ಶಾಸಕರು, ಗದಗ ಮತ್ತು ಶ್ರೀ ವಿ. ವಿ. ಭಾಸ್ಕರ್, ಐಪಿಎಸ್ (ನಿವೃತ್ತ), ಮಾಜಿ ಡಿಜಿಪಿ, ಕರ್ನಾಟಕ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತಾವು ತಮ್ಮ ಬಂಧು-ಮಿತ್ರರೊಂದಿಗೆ ಈ ಸಂಸ್ಮರಣ ಸಭೆಯಲ್ಲಿ ಪಾಲ್ಗೊಂಡು ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆಯಬೇಕೆಂದು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.