ಬೆಳಗಾವಿ 18: ಹೆಣ್ಮಕ್ಕಳ ಒಡಪುಗಳೆಂದರೆ ಹಾಲು ಜೇನು ಇದ್ದಂತೆ. ಅದರಂತೆ ಪುರಷರು ಹೇಳುವ ಒಡಪುಗಳೆಂದರೆ ಕಲ್ಲು ಸಕ್ಕರೆ ಇದ್ದಂತೆ. ಪುರುಷರು ಹೇಳುವ ಒಡಪುಗಳು ಸ್ವಲ್ಪ ಒರಟೆಂದು ಅನ್ನಿಸಿದರೂ ಇಲ್ಲಿ ಸಕ್ಕರೆ ಸಿಹಿಯಿರುತ್ತದೆ. ಒಗಟು ಮತ್ತು ಒಡಪು ಹೀಗೆ ಎರಡು ಪ್ರಕಾರಗಳಿದ್ದು ಒಗಟು ಅಂದರೆ ಪದ್ಯ ಅಥವಾ ಗದ್ಯ ಎರಡೂ ರೂಪಗಳಲ್ಲಿಯೂ ಇರುತ್ತವೆ. ಒಡಪುಗಳು ಅಲಂಕಾರಿಕವಾದಂತಹ ವರ್ಣಾತ್ಮಕದಿಂದ ಕೂಡಿರುತ್ತವೆ ಎಂದು ಹಿರಿಯ ಕವಿ ಪ್ರೊ. ಎಂ. ಎಸ್. ಇಂಚಲ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮದುವೆ ವಿನೋದ ಒಡಪುಗಳು ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣ ಜನರ ಒಡಪುಗಳಲ್ಲಿ ಕನ್ನಡ ಭಾಷೆಯ ಅಭಿಮಾನವನ್ನು ನಾವು ಕಾಣುತ್ತೇವೆ ಎಂಬುದನ್ನು ಉದಾಹರಣೆ ಸಮೇತವಾಗಿ ತಮ್ಮ ಮಾತುಗಳಲ್ಲಿ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಉಪನ್ಯಾಸಕ ಪ್ರೊ. ಅ.ಬ. ಇಟಗಿಯವರು, ದಾಂಪತ್ಯ ಜೀವನದಲ್ಲಿ ಕಾಲಿಡುತ್ತಿದ್ದ ಮದುಮಗ ಮತ್ತು ಮದುವಣಗಿತ್ತಿ ಮಧ್ಯ ನಾಚಿಕೆ ಸ್ವಭಾವವಿರುವುದು ಸಹಜ. ಹುಡುಗಿಯ ಬಾಯಿಯಿಂದ ಒಡಪನ್ನು ಹಾಕಿ ಹುಡುಗನ ಹೆಸರನ್ನು ಅದರಂತೆ ಹುಡುಗನ ಬಾಯಿಯಿಂದ ಒಡಪನ್ನು ಹಾಕಿ ಹುಡುಗಿಯ ಹೆಸರನ್ನು ಕೇಳುವುದರ ಮೂಲಕ ನಗೆ ವಾತಾವರಣ ನಿರ್ಮಿಸುತ್ತಿದ್ದರು. ಸಂತೋಷಪಡುತ್ತಿದ್ದರು ಎಂದು ಹೇಳಿ ಕೆಲ ವಿನೋದ ಒಡಪುಗಳನ್ನು ಹೇಳುವುದರ ಮೂಲಕ ರಂಜಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ನಗೆಮಾತುಗಾರ ಜಿ. ಎಸ್. ಸೋನಾರ ಒಗಟು ಮೆದುಳಿಗೆ ಕಸರತ್ತನ್ನು ಕೊಟ್ಟರೆ ಮದುವೆ ಸಂಭ್ರಮದಲ್ಲಿ ಹೇಳುವ ಒಡಪು ಮನರಂಜನೆಯನ್ನು ನೀಡುತ್ತವೆ. ಗಂಡ ಹೆಂಡಿರ ನಡುವಿನ ಸಾಮರಸ್ಯವನ್ನು ಈ ಒಡಪುಗಳು ಹೆಚ್ಚಿಸುತ್ತವೆ. ಇತ್ತೀಚೆಗೆ ಇವು ಮರೆಯಾಗುತ್ತಿದ್ದು. ಇವುಗಳನ್ನು ನೆನಪಿಸುವುದಕ್ಕಾಗಿಯೇ ಹಾಸ್ಯಕೂಟ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಕೇಂದ್ರ ಉಗ್ರಾಣ ನಿವೃತ್ತ ಅಧಿಕಾರಿ ಕೀರ್ತಿನಾಥ ಮುಳಗುಂದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು. ಲೇಖಕಿ ಸುನಂದಾ ಹಾಲಭಾವಿ, ಸಾಹಿತಿ ಎ.ಎ. ಸನದಿ, ಶೈಲಜಾ ಕುಲಕರ್ಣಿ, ಬರೆಹಗಾರ್ತಿ ರಾಜೇಶ್ವರಿ ಹಿರೇಮಠ, ಪಾಂಡುರಂಗ ಮಾರಿಹಾಳ ಮದುವೆಯಲ್ಲಿ ವಿನೋದ ಒಗಟುಗಳನ್ನು ಹಂಚಿಕೊಂಡು ಜನರನ್ನು ರಂಜಿಸಿದರು. ತಾನಾಜಿ ನಿರೂಪಿಸಿದರು.