ರಾಯಬಾಗ, 07 : ಒಳ ಮೀಸಲಾತಿ ಜಾರಿ ಸಂಬಂಧ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸುತ್ತಿದ್ದು, ಮಾದಿಗ ಸಮುದಾಯದ ಬಾಂಧವರು ಉಪಜಾತಿ ಕಾಲಂನಲ್ಲಿ ‘ಮಾದಿಗ’ ಎಂದು ಮಾತ್ರ ಬರೆಸಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯವು ಅತ್ಯಂತ ಹಿಂದುಳಿದಿದ್ದು, ಸರ್ಕಾರಿ ಸವಲತ್ತು ಪಡೆಯುವಲ್ಲಿ ವಿಫಲವಾಗಿದೆ. ಮಾದಿಗ ಸಮುದಾಯದವರು ಸತತ ಹೋರಾಟ ನಡೆಸಿದರ ಫಲವಾಗಿ ಒಳ ಮೀಸಲಾತಿ ಜಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆ ಬಳಿಕ ಸಿಗುವ ಅಂಕಿ ಅಂಶ ಆಧರಿಸಿ ಮೀಸಲಾತಿ ಪ್ರಮಾಣ ಸಿಗುವುದರಿಂದ, ಮಾದಿಗ ಸಮುದಾಯದ ಬಾಂಧವರು ಜಾತಿ ಕಾಲಂ ನಂ.61 ರಲ್ಲಿ ಮಾದಿಗ ಎಂದು ಮಾತ್ರ ಬರೆಸಬೇಕೆಂದರು.
ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ ಅವರ ಏಕಸದಸ್ಯ ವಿಚರಣಾ ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಉಪವರ್ಗೀಕರಣ ಸಮೀಕ್ಷಾ ಕಾರ್ಯ ಮೇ.17 ರವರೆಗೆ ಮನೆ ಮನೆಗೆ ನಡೆಯುವ ಜಾತಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬ ಮಾದಿಗ, ಮಾದರ ಸಮುದಾಯದ ಬಾಂಧವರು ಭಾಗವಹಿಸಬೇಕು. ಮಾದಿಗ ಬಾಂಧವರು ಯಾವುದೇ ಗೊಂದಲ ಮಾಡಿಕೊಳ್ಳದೇ, ದಾಖಲೆಯಲ್ಲಿ ಏನೇ ಇದ್ದರೂ ಮತ್ತು ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ ಇದ್ದವರು, ಕಡ್ಡಾಯವಾಗಿ ಜಾತಿ ಕಾಲಂ ನಂ.61 ರಲ್ಲಿ “ಮಾದಿಗ” ಎಂದೇ ನಮೂದಿಸಬೇಕು. ನಮ್ಮ ಜನಾಂಗದ ನಿಜವಾದ ದತ್ತಾಂಶ ತಿಳಿಯುವುದರಿಂದ ಹಕ್ಕು ಮತ್ತು ಸಾಮಾಜಿಕ ನ್ಯಾಯ ದೊರಕುತ್ತದೆ ಎಂದರು. ಮೇ.19 ರಿಂದ 21ರವರೆಗೆ ವಿಶೇಷ ಶಿಬಿರ ಮತ್ತು 23 ರವರೆಗೆ ಸ್ವಯಂ ಘೋಷಣೆ ಆನ್ಲೈನ್ ಮೂಲಕ ಜಾತಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ ಸನದಿ, ದೇವಾನಂದ ಸನದಿ, ಅಪ್ಪಾಸಾಬ ಕೆಂಗನ್ನವರ, ನೀಲಪ್ಪ ಐಹೊಳೆ, ರಾಜು ಮೈಶಾಳೆ, ಮಾದೇವ ಐಹೊಳೆ, ರಾವಸಾಬ ಮೆಗಾಡೆ, ಲವಪ್ಪ ಐಹೊಳೆ, ಸಂಜು ಮೈಶಾಳೆ, ಸುರೇಶ ಐಹೊಳೆ, ಸತ್ಯಪ್ಪ ದಾವನೆ, ಉಮೇಶ ಪೂಜೇರಿ, ಅಮರ ಸನದಿ, ರಾಜು ಐಹೊಳೆ, ರಘು ಅವಳೆ, ಮಾರುತಿ ದೊಡ್ಡಮನಿ, ರಾಕೇಶ ಅವಳೆ, ಮಾರುತಿ ಜಂಬಗಿ, ಮಾರುತಿ ಮಾಂಗ ಸೇರಿ ಅನೇಕರು ಇದ್ದರು.