ಜೂನ್ 21 ರಂದು ಜಿಲ್ಲೆಯಲ್ಲಿ ಯೋಗ ದಿನಾಚರಣೆ ವ್ಯವಸ್ಥಿತವಾಗಿ ಆಚರಿಸಿ

Preparatory meeting for the 11th International Yoga Day

11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕುರಿತು ಪೂರ್ವ ಸಿದ್ಧತಾ ಸಭೆ 

ಗದಗ  12:  ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ನಗರದ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7 ಗಂಟೆಗೆ  ಆಚರಿಸಲಾಗುತ್ತಿದ್ದು  ಕಾರ್ಯಕ್ರಮವನ್ನು  ಅಚ್ಚುಕಟ್ಟಾಗಿ  ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಸೂಚಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಯೋಗವು  ಮನುಷ್ಯನ ದೈಹಿಕ ಹಾಗೂ ಮಾನಸಿಕ ಸದೃಢತೆಗೆ  ಸಹಕಾರಿಯಾಗಿದೆ. ಇದು ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.  ಯೋಗದ ನಂತರ ಧ್ಯಾನ, ಶಾಂತಿ ಮಂತ್ರಗಳು ಸಹ ಮನುಷ್ಯನಲ್ಲಿನ ತಾಳ್ಮೆ,  ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತವೆ,  ಹೀಗೆ ಅನೇಕ ರೀತಿ ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾದ ಯೋಗದ ಕುರಿತು ಅರಿವು ಮೂಡಿಸಿ ಮಕ್ಕಳು, ಹಿರಿಯ ನಾಗರಿಕರು ಯೋಗಾಭ್ಯಾಸ ಮಾಡುವಂತೆ ಪ್ರಚುರಪಡಿಸಬೇಕು.  ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು.  ಶಾಲೆ, ಕಾಲೇಜುಗಳಲ್ಲಿ ಯೋಗದ  ಮಹತ್ವದ ಕುರಿತು  ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು ಎಂದರು. 

ಯೋಗ ದಿನಾಚರಣೆ ವ್ಯವಸ್ಥಿತವಾಗಿ ಜರುಗಿಸಲು ಇಲಾಖಾವಾರು ಹೊಣೆಗಾರಿಕೆಗಳನ್ನು ಹಂಚಿಕೆ ಮಾಡಲಾಗಿದೆ.ಸಂಬಂಧಿತ ಇಲಾಖೆಗಳು ತಮಗೆ ಸೂಚಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಯೋಗ ದಿನಾಚರಣೆ ಯಶಸ್ವಿಯಾಗುವಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ನಿರ್ದೇಶಿಸಿದರು. 

ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಯಪಾಲ್ ಸಿಂಗ್ ಪಿ ಸಮೋರೇಕರ್ ಅವರು ಮಾತನಾಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಂಘ ಸಂಸ್ಥೆಯವರು, ಇಲಾಖೆ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಯೋಗಾಸಕ್ತರು ಬೆ 6.30 ಗಂಟೆಗೆ ಸರಿಯಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಿರಬೇಕು.  ಜಿಲ್ಲೆಯಲ್ಲಿ  11 ನೇ ಅಂತರಾಷ್ಟ್ರೀಯ  ಯೋಗ ದಿನಾಚರಣೆ ಪ್ರಯುಕ್ತ ಜೂನ್ 19 ರಂದು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು.  ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ  ಜಿಲ್ಲೆಯ  ತಾಲೂಕು ಹಾಗೂ ಗ್ರಾಮಗಳಲ್ಲಿ ಆಯುರ್ವೇದ ಓಷಧಿ ಸಸಿಗಳನ್ನು ನೆಡಲಾಗುವುದು. ಆಯುಷ್ ಇಲಾಖೆಯಿಂದ  ಜಿಲ್ಲೆಯ ಇಟಗಿ, ಸೊರಟೂರು, ಕೋಟುಮಚಗಿ, ಯಾವಗಲ್ , ಪೇಠಾಲೂರು, ಬಿದರಳ್ಳಿ, ಮೇವುಂಡಿ, ಅಂತೂರು ಬೆಂತೂರು ಈ ಗ್ರಾಮಗಳಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.  

ಸಭೆಯಲಿ ್ಲ ಯೋಗ ದಿನಾಚರಣೆಯ ದಿನದಂದು ಕುಡಿಯುವ ನೀರಿನ ವ್ಯವಸ್ಥೆ,  ಉಪಹಾರ ವ್ಯವಸ್ಥೆ, ಅಂಬುಲೆನ್ಸ್‌ ವ್ಯವಸ್ಥೆ  ಕುರಿತು ಚರ್ಚಿಸಲಾಯಿತು.   ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ನೀಲಗುಂದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಬಿ.ಮಸನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಯವರು , ಯೋಗಾಸಕ್ತರು ಹಾಜರಿದ್ದರು.