ರಾಯಬಾಗ, 16 : ಪಟ್ಟಣದ ವಕೀಲರ ಸಂಘದ ಕಿರಿಯ ಸದಸ್ಯ ಸಂತೋಷ ಅಶೋಕ ಪಾಟೀಲ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಉನ್ನತ ತನಿಖೆಗಾಗಿ ಪ್ರಕರಣವನ್ನು ಎಸ್.ಐ.ಟಿ ಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಸೋಮವಾರ ಗ್ರೇಡ್-2 ತಹಶೀಲ್ದಾರ ಪರಮಾನಂದ ಮಂಗಸೂಳಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬೆಳಿಗ್ಗೆ ವಕೀಲರ ಸಂಘದ ಸಭಾಭವನದಲ್ಲಿ ತುರ್ತು ಸಭೆ ನಡೆಸಿ, ವಕೀಲ ಸಂತೋಷ ಪಾಟೀಲ ಹತ್ಯೆಯನ್ನು ಖಂಡಿಸಿ, ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗಳಿದು, ನ್ಯಾಯಾಲಯದ ಮುಂದಿರುವ ರಾಯಬಾಗ-ಕಂಕಣವಾಡಿ ರಸ್ತೆ ಬಂದ ಮಾಡಿ, ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು.
ಹಿರಿಯ ವಕೀಲರಾದ ಎಲ್.ಬಿ.ಚೌಗುಲೆ ಅವರು ಮಾತನಾಡಿ, ಏ.29 ರಂದು ತಾಲೂಕಿನ ಶಾಹುಪಾರ್ಕ ಹತ್ತಿರ ವಕೀಲ ಸಂತೋಷ ಪಾಟೀಲ ಅವರನ್ನು ಆರೋಪಿಗಳು ಅಪಹರಣಗೊಳಿಸಿದ್ದರು. ಆದರೆ ಪೊಲೀಸರ ವೈಫಲ್ಯತೆಯಿಂದ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ಜೂ.6 ರಂದು ವಕೀಲ ಸಂತೋಷ ಪಾಟೀಲ ಇವರು ಹತ್ಯೆಯಾಗಿರುವುದಾಗಿ ತಿಳಿದು ಬಂದಿದ್ದು, ಜೂ.11 ರಂದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿರುತ್ತದೆ. ಕಾರಣ ಹತ್ಯೆಯನ್ನು ಮಾಡಿರುವ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರನ್ನು ಕೂಡಲೇ ಪೊಲೀಸರು ಬಂಧಿಸಬೇಕು ಮತ್ತು ಈ ಪ್ರಕರಣದಲ್ಲಿ ವಕೀಲರೆ ಪ್ರಮುಖ ಆರೋಪಿಗಳಾಗಿದ್ದರಿಂದ ಉನ್ನತ ಮಟ್ಟದ ತನಿಖೆಗಾಗಿ ಈ ಪ್ರಕರಣವನ್ನು ಎಸ್.ಐ.ಟಿ ಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ವಕೀಲ ಆರ್.ಎಸ್.ಶಿರಗಾಂವೆ ಮಾತನಾಡಿ, ಹತ್ಯೆಯಾದ ವಕೀಲ ಸಂತೋಷ ಪಾಟೀಲ ಅವರ ಕುಟುಂಬಕ್ಕೆ ನ್ಯಾಯ ದೊರಕಬೇಕಾದರೆ ಈ ಪ್ರಕರಣವನ್ನು ಎಸ್.ಐ.ಟಿ ಗೆ ವಹಿಸಿ, ಸೂಕ್ತ ಮತ್ತು ನ್ಯಾಯಯುತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸುವವರೆಗೆ ಅನಿರ್ದಿಷ್ಟ ಕಾಲ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಉಪಾಧ್ಯಕ್ಷ ಎಸ್.ವಿ.ಪೂಜಾರಿ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಖಜಾಂಜಿ ಯು.ಎನ್.ಉಮ್ರಾಣಿ, ಹಿರಿಯ ವಕೀಲರಾದ ಎ.ಬಿ.ಮಂಗಸೂಳೆ, ಪಿ.ಎಮ್.ಪಾಟೀಲ, ಆರ್.ಜಿ.ಕುಲಕರ್ಣಿ, ಎಮ್.ಕೆ.ಖೊಂಬಾರೆ, ಎಸ್.ಜಿ.ಉಗಾರೆ, ಆರ್.ಎಚ್.ಗೊಂಡೆ, ಎಸ್.ಕೆ.ರೆಂಟೆ, ಆರ್.ಎಮ್.ಹೆಗಡೆ, ಎಸ್.ಎಸ್.ನಾಯಿಕ, ವಿ.ಎಸ್.ಪೂಜಾರಿ, ಎಸ್.ಬಿ.ಹೊಳ್ಕರ, ಬಿ.ಎನ್.ಬಂಡಗರ, ಎಮ್.ಎಮ್.ಚಿಂಚಲಿಕರ, ಎನ್.ಎಸ್.ಒಡಯರ, ಎಮ್.ಪಿ.ತೇಲಿ, ಎ.ಬಿ.ನಡೋಣಿ, ಬಿ.ಬಿ.ಈಟಿ, ಆರ್.ಬಿ.ಪವಾರ, ಜಿ.ಎಸ್.ಖಿಚಡೆ ಹಾಗೂ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿದ್ದರು.