ಮಾನವ ಹಕ್ಕುಗಳ ನಿಜವಾದ ರಕ್ಷಣೆ ಪುಣ್ಯಾಶ್ರಮ ಮಾಡುತ್ತಿದೆ : ಡಾ. ಎಚ್‌.ಕೆ.ಪಾಟೀಲ

Punyashram is doing real protection of human rights: Dr. H.K. Patil

ಉಭಯ ಶ್ರೀಗಳ ಜಾತ್ರಾ ಮಹೋತ್ಸವ  

ಗದಗ 16 : ಜಗತ್ತಿನಲ್ಲಿ ಮಾನವ ಹಕ್ಕುಗಳ ಬಗ್ಗೆ ನಿಜವಾಗಿ ಅರ್ಥೈಸಿಕೊಂಡು  ಅದನ್ನು ಜಾರಿಗೆ ತಂದ ಯಾವದಾದರೂ ಸಂಸ್ಥೆಯಾಗಿದ್ದರೆ  ಅದು ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ.ಪಾಟೀಲ ಅವರು ಹೇಳಿದರು.  

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ  ಜರುಗಿದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು   ಮಾತನಾಡಿ, ವಿಕಲಚೇತನರನ್ನು ರಕ್ಷಿಸಿ ಅವರಿಗೆ ಅನ್ನ, ಶಿಕ್ಷಣ ನೀಡಿ ಸ್ವಾವಲಂಭಿಯಾಗಿ ಮಾಡುವ ಮೂಲಕ ದೇಶದ ಆಸ್ತಿಯನ್ನಾಗಿ ಮಾಡಿರುವುದು ಉಭಯ ಶ್ರೀಗಳ ಮಹಾನ ಕೆಲಸವಾಗಿದೆ.   ನಾವುಗಳು ಬಸವಣ್ಣನವರ ಧಾರ್ಮಿಕ ಸಂದೇಶಗಳಿಗೆ ಮಾತ್ರ ಹೆಚ್ಚು ಒತ್ತು ಕೊಟ್ಟಿರುವದರಿಂದ ಅವರನ್ನು ರಾಜ್ಯಕ್ಕೆ ಮಾತ್ರ ಸೀಮಿತ ಮಾಡಲಾಗಿರುವದು ವಿಷಾಧನೀಯವಾಗಿದೆ. ಬಿ.ಆರ್‌. ಅಂಬೇಡ್ಕರ ಅವರು ಹೇಳಿದಂತೆ ಬಸವೇಶ್ವರರ ತತ್ವಗಳ ಬಗ್ಗೆ ಪೂರ್ಣವಾಗಿ ನಾನು ತಿಳಿದುಕೊಂಡಿದ್ದರೆ ನನ್ನ ಧಾರ್ಮಿಕ ನಿಲುವು ಬೇರೆ ಆಗಿರುತ್ತಿತ್ತು ಎಂದು ಹೇಳಿದ್ದಾರೆ. ಬಸವಣ್ಣವರ  ಆಲೋಚನೆಗಳು, ಸಂದೇಶಗಳು, ನೈಜ ವೈಕ್ತಿತ್ವವನ್ನು ವಿಶ್ವಮಟ್ಟಕ್ಕೆ  ಪರಿಚಯಿಸಬೇಕಿದೆ ಎಂದು ಹೇಳಿದ ಅವರು ಪಂ. ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನ ಪೂರ್ಣಗೊಳ್ಳಬೇಕು  ಇದಕ್ಕೆ ಎಲ್ಲ ಗುರುಗಳ ಆಶೀರ್ವಾದವು ಬೇಕಾಗಿದೆ. ಮುಂದಿನ ವರ್ಷ ಜಾತ್ರಾಮಹೋತ್ಸವದ ಕಾರ್ಯಕ್ರಮಗಳು ಸ್ಮಾರಕ ಭವನದಲ್ಲಿ ಜರುಗುತ್ತವೆ ಎಂದು ಹೇಳಿದರು.  

ಗದುಗಿನ ತೋಂಟದಾರ್ಯ ಶ್ರೀ ಮಠದ ಡಾ.ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಉಭಯ ಶ್ರೀಗಳು ಲೋಕಕಂಡ ಅದ್ಬುತ ಮಹಾಪುರುಷರು. ಪ್ರಯತ್ನ ಮಾಡಿದ ಪ್ರತಿಯೊಬ್ಬರು ಸಾಧನೆ ಮಾಡಲು ಸಾಧ್ಯವಾಗುವದಿಲ್ಲ,   ಸಾಧನೆ ಮಾಡಿದ ಅತ್ಯಂತ ವಿರಳ ವ್ಯಕ್ತಿಗಳಲ್ಲಿ ಉಭಯ ಶ್ರೀಗಳು ಮುಂಚೂಣಿಯಲ್ಲಿದ್ದಾರೆ. ಯಾವ ಮಕ್ಕಳು ತಂದೆ-ತಾಯಿ ಹಾಗೂ ಸಮಾಜಕ್ಕೆ ಹೊರೆಯಾಗಬೇಕಾಗಿರುತ್ತಾರೆ ಅಂತಹ ಮಕ್ಕಳಿಗೆ ಸ್ವಾವಲಂಭಿ ಬದುಕನ್ನು ನೀಡಿ ಪವಾಡ ಪುರುಷರೆನಿಸಿಕೊಂಡವರು ಉಭಯ ಶ್ರೀಗಳು  ಎಂದು ಹೇಳಿದರು.   

ಈ ಕಾರ್ಯಕ್ರಮದಲ್ಲಿ ಹೂವಿನಶಿಗ್ಲಿ ವಿರಕ್ತಮಠದ ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳು, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಷ್ಟಗಿ ನಿಜಲಿಂಗ ಶಿವಾಚಾರ್ಯರು, ಬೊಮ್ಮನಹಳ್ಳಿ ವಿರಕ್ತಮಠದ ಪೂಜ್ಯಶ್ರೀ ಶಿವಯೋಗೇಶ್ವರ ಮಹಾಸ್ವಾಮಿಗಳು,  ಕೂಡಲ ಗುರುನಂಜೇಶ್ವರ ಮಠದ ಪೂಜ್ಯಶ್ರೀ ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಲಿಂಗಸೂರಿನ ಮಾಣಿಕೇಶ್ವರಿ  ಆಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸಮ್ಮುಖ ವಹಿಸಿದ್ದರು.  

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಸ್‌. ವಿ. ಸಂಕನೂರ,  ಪೀರಸಾಬ ಕೌತಾಳ, ಪ್ರಕಾಶ ಕರಿ, ಡಾ. ಆನಂದ ಪಾಂಡುರಂಗಿ, ಸದು ಮದರಿಮಠ,    ಸಂಗಮೇಶ ದುಂದೂರ,  ಪರಶುರಾಮ ಕಟ್ಟಿಮನಿ, ರುದ್ರಗೌಡ ರಬ್ಬನಗೌಡ್ರ, ಅರುಣ ಕಟ್ಟಿಮನಿ,  ವಿಶ್ವನಾಥ ಹೂಗಾರ, ಮಹಾಂತಯ್ಯ ಸಾಲಿಮಠ  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ಕಲಬುರಗಿಯ  ಬಲವಂತ ಉದನೂರ  ಹಾಗೂ ಕುಟನೂರ (ಡಿ) ಶಿವಶಂಕರ ಬಿರಾದಾರ ಅವರಿಂದ ಪುಣ್ಯಾಶ್ರಮದ ಪೀಠಾಧಿಪತಿ   ಪೂಜ್ಯಶ್ರೀ ಕಲ್ಲಯ್ಯಜ್ಜನವರಿಗೆ ತುಲಾಬಾರ ಸೇವೆ ಜರುಗಿತು. ನಂತರ  ಧ್ವನಿ ಸುರಳಿ ಹಾಗೂ ಸಪ್ತಸ್ವರದೀಪ  ಗ್ರಂಥ ಬಿಡುಗಡೆಯಾಯಿತು.  ನಂತರ ಸಂಗೀತ ಸಭೆ ಸ್ವರ ಶೃದ್ದಾಂಜಲಿ ಸಮಗೀತ ಸಮಾರಾಧನೆ ಕಾರ್ಯಕ್ರಮ ಜರುಗಿತು.