ಕರಾವಳಿಯಲ್ಲಿ ಕಡಿಮೆಯಾದ ಮಳೆಯ ಅಬ್ಬರ : ರಸ್ತೆಗಳು ನಿರಾಳ

Rainfall eases on coast; roads clear

ಕಾರವಾರ 13: ಕರಾವಳಿಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಶುಕ್ರವಾರ ಬೆಳಗಿನ ಜಾವದಿಂದ ರಭಸದ ಮಳೆ ನಿಂತಿದ್ದು, ಕಾರವಾರ ನಗರದಲ್ಲಿ ಹದಿನಾರು ತಾಸಿಗೂ ಹೆಚ್ಚು ಸಮಯ ರಸ್ತೆ ಯಲ್ಲಿ ನಿಂತಿದ್ದ ನೀರು ಇದೀಗ ಇಳಿದು ಹೋಗಿದೆ. 

 ನಂತರರಸ್ತೆಗಳು ನಿರಾಳತೆಯನ್ನು ಅನುಭವಿಸಿದರೆ, ಜನರು ನಿಟ್ಟುಸಿರು ಬಿಟ್ಟಿದ್ದಾರೆ. 2009 ಅಕ್ಟೋಬರ್ 2 ರಂದು ಬಿದ್ದಿದ್ದ ಮಳೆಯನ್ನು ನೆನಪಿಸಿದ ನಿನ್ನೆಯ ಮಳೆ , ಈಗ ಕೊಂಚ ಬಿಡುವು ನೀಡಿದೆ. ಮೋಡ ಕವಿದ ವಾತಾವರಣ ಹಾಗೂ ಆಗಾಗ ಸಣ್ಣ ತುಂತುರು ಮಳೆ ಅಗಾಗ ಬೀಳುತ್ತಿದೆ. ಕುಮಟಾ,ಅಂಕೋಲಾದಲ್ಲಿ , ಹೊನ್ನಾವರದಲ್ಲಿ ರಭಸದ ಮಳೆ ಹತ್ತು ಹದಿನೈದು ನಿಮಿಷಗಳ ಕಾಲ ಬಿದ್ದು ನಂತರ ಬಿಡುವು ಕೊಡುತ್ತಿದೆ. ಗ್ರಾಮಾಂತರ ಭಾಗದಲ್ಲಿ ಕೃಷಿಕರಿಗೆ ಮಳೆ ಅನುಕೂಲಕರ ವಾಗಿದೆ. 

ನಗರದಲ್ಲಿ ಮಯಗಿಯದ ರಗಳೆ :ನಗರದಲ್ಲಿ ಭಾರೀ ಮಳೆ ಕಾರಣ ತಗ್ಗು ಪ್ರದೇಶಗಳಲ್ಲಿ ಇದ್ದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆ ಬಳಕೆಯ ವಸ್ತುಗಳು ಹಾನಿಗೆ ತುತ್ತಾಗಿವೆ. ರಸ್ತೆ ಬದಿಯ ತಗ್ಗಿನ ಮನೆಗಳಿಗೆ ಕೆಸರು ತುಂಬಿದ ನೀರು ನುಗ್ಗಿದ ಪರಿಣಾಮಜನರು ಮನೆ ಸ್ವಚ್ಚತೆ ಕೆಲಸ ಆರಂಭಿಸಿದ್ದಾರೆ. ನಾಳೆ ತನಕ ರೆಡ್ ಅಲರ್ಟ ಇರುವ ಕಾರಣ ಮುಂಜಾಗ್ರತೆಗಾಗಿ ಜನ ಸಂಬಂಧಿಕರ ಮನೆಗೆ ತೆರಳಿದ್ದಾರೆ . ಪ್ರತಿ ವರ್ಷದ ಮಳೆಗಾಲದ ಕಷ್ಟಗಳಿಗೆ ಜನ ಸಹ ಹೊಂದಿಕೊಂಡಿದ್ದಾರೆ. 

ಗುಡ್ಡ ಕುಸಿದ ಕಡೆ ಕಟ್ಟೆಚ್ಚರ :ಹಬ್ಬುವಾಡ,ದೋಬಿಘಾಟ್ ಸಾಯಿ ಮಂದಿರ,ಗುಡ್ಡದ ಬದಿಯ ಬೈತಖೋಲ ಕಡೆ ಅಲ್ಪ ಪ್ರಮಾಣದ ಗುಡ್ಡ ಕುಸಿತದ ಕಡೆ ಕಟ್ಟೆಚ್ಚರ ವಹಿಸಲಾಗಿದೆ. ಗುಡ್ಡದ ಪಕ್ಕ ಹತ್ತಿರದ ಮನೆಯವರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಕಾರವಾರ ಹೆದ್ದಾರಿ ಟನಲ್ ಪ್ರವೇಶ ದ್ವಾರದ ಬಳಿ ಕಲ್ಲೊಂದು ಉರುಳಿದ್ದು, ಆ ಸುರಂಗ ಮಾರ್ಗ ಬಂದ್ ಮಾಡಿ,ಪಕ್ಕದ ಸುರಂಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಂಭವನೀಯ ಅಪಘಾತ ತಪ್ಪಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಂಡಿದೆ. 

ಅತೀ ಹೆಚ್ಚು ಮಳೆಯಾದ ಗ್ರಾಮೀಣ ಪ್ರದೇಶಗಳು:ಜಿಲ್ಲೆಯಲ್ಲಿ ಶುಕ್ರವಾರ ಬೆಳಿನ ಎಂಟು ಗಂಟೆಗೆ ಕಳೆದ 24 ತಾಸಿನಲ್ಲಿ ಅತೀ ಹೆಚ್ಚು ಮಳೆ ಬಿದ್ದ ಗ್ರಾಮಗಳು ಇಂತಿವೆ.ಕಾರವಾರದ ಅಸ್ನೋಟಿಯಲ್ಲಿ 239.5 ಮಿಲಿ ಮೀಟರ್, ವೈಲವಾಡದಲ್ಲಿ 197, ಮುಡಗೇರಿ 205, ಮಾಜಾಳಿ 199, ಕಡವಾಡದಲ್ಲಿ 174, ಭಟ್ಕಳದ ಮುಂಡಳ್ಳಿಯಲ್ಲಿ 299, ಬೆಳ್ಕೆ 277, ಮುಟ್ಟಳ್ಳಿ 262, ಮಾವಿನ ಕುರ್ವಾ 268.5, ಜಾಲಿಯಲ್ಲಿ 237, ಹೊನ್ನಾವರದ ಇಡಗುಂಜಿಯಲ್ಲಿ 104 ಮಿಲಿ ಮೀಟರ್ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.