ಭಾರತೀಯ ರಿಸರ್ವ್‌ ಬ್ಯಾಂಕ್ ಜನ ಜಾಗೃತಿ ಕಾರ್ಯಕ್ರಮ

Reserve Bank of India public awareness program

ಬೆಳಗಾವಿ  11: ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ‘ವಿಷನ್ ಕರ್ನಾಟಕ 2025’ ಎಂಬ ಮೂರು ದಿನಗಳ ಮೆಗಾ  ಎಕ್ಸಿಬಿಷನ್ ಅಲ್ಲಿ ಸಾರ್ವಜನಿಕರಿಗೆ ಹಣಕಾಸು ಸಂಬಂಧಿತ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತೀಯ ರಿಸರ್ವ್‌ ಬ್ಯಾಂಕ್ ಒಂಬಡ್ಸ್‌ಮನ್ ಕಾರ್ಯಾಲಯ ಬೆಂಗಳೂರು ರವರ ವತಿಯಿಂದ ಒಂದು ಸ್ಟಾಲ್ ಅನ್ನು  ನಿಧಿ ಅಗರವಾಲ್, ಡೆಪ್ಯುಟಿ ಒಂಬಡ್ಸ್‌ಮನ್, ಆರ್ ಬಿ ಐ  ಬೆಂಗಳೂರು ಇವರು ಉದ್ಘಾಟಿಸಿದರು.

ನಂತರ ಮಾತನಾಡಿದ ಇವರು, ಭಾರತೀಯ ರಿಸರ್ವ್‌ ಬ್ಯಾಂಕ್ ಒಂಬಡ್ಸ್‌ಮನ್ ಯೋಜನೆ, 2021ರ ಕುರಿತು ಮಾಹಿತಿ ನೀಡಿದರು ಮತ್ತು ಗ್ರಾಹಕರ ದೂರುಗಳ ಪರಿಹಾರ ಸಂಬಂಧ ಬ್ಯಾಂಕುಗಳಿಗೆ ಆರ್ ಬಿ ಐ ನೀಡುವ ಸೂಚನೆಗಳು ಮತ್ತು ತಮ್ಮ ದೂರುಗಳನ್ನು ಕಾಲ ಮಿತಿಯಲ್ಲಿ ಪರಿಹರಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ವಿವರಿಸಿದರು. ನಾನಾ ವಿಧವಾದ ವಂಚನೆಗಳನ್ನು ತಡೆಯುವುದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ವಿವರಣೆ ನೀಡಿದರು ಮತ್ತು ಈ ಸ್ಟಾಲ್ ಜೂನ್ 13 ರ ವರೆಗೆ ತೆರೆದಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತಾ ಈ ಮೆಗಾ ಎಕ್ಸಿಬಿಷನ್ ಗೆ ಭಾಗವಹಿಸುವ ಎಲ್ಲರನ್ನೂ ಈ ತಮ್ಮ ಸ್ಟಾಲ್ ಗೆ ಭೇಟಿ ನೀಡುವಂತೆ ಕರೆ ನೀಡಿದರು. ಆರ್ ಬಿ ಐ ನ ವತಿಯಿಂದ ಹಲವಾರು ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಾರ್ವಜನಿಕರನ್ನು ಸೆಳೆಯುವ ಸಲುವಾಗಿ ಪ್ರದರ್ಶಿಸಲಾಗಿದ್ದ  ಒಡಿ. ಮನಿಕುಮಾರ್ ಮತ್ತು ಒ ಮನಿ ಎಂಬ ಎರಡು ಬಲೂನ್ ಮಸ್ಕಾಟ್ ಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.  

ಸಾರ್ವಜನಿಕರು ಮತ್ತು ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಆರ್ ಬಿ ಐ ನ ಸ್ಟಾಲ್ ಗೆ ಭೇಟಿ ಕೊಟ್ಟು ಆರ್ ಬಿ ಐ ಒಂಬಡ್ಸ್‌ಮನ್ ಯೋಜನೆಯ ಬಗ್ಗೆ ಮತ್ತು ಇನ್ನಿತರ ವಿಚಾರಗಳಾದ ಸುರಕ್ಷಿತ ಬ್ಯಾಂಕಿಂಗ್ ಅಭ್ಯಾಸಗಳು, ಬ್ಯಾಂಕ್ ನೋಟುಗಳ ಸಂಬಂಧಿತ ವಿಚಾರಗಳು, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ಸಂಬಂಧಿತ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಮತ್ತು ವಿಜೇತರಿಗೆ ಕಿರು ಕಾಣಿಕೆಗಳನ್ನು ನೀಡಲಾಯಿತು. ನಂತರ ಭೇಟಿ ನೀಡಿದ ಎಲ್ಲರಿಗೂ ಹಣಕಾಸು ಸಂಬಂಧಿತ ವಿಚಾರಗಳನ್ನೊಳಗೊಂಡ ಕರಪತ್ರಗಳು ಮತ್ತು ಕಿರು ಹೊತ್ತಿಗೆಗಳನ್ನು ನೀಡಲಾಯಿತು. ಬೆಳಿಗ್ಗೆಯಿಂದ ಸಂಜೆಯವರೆಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಪಾಲ್ಗೊಂಡು ಹಣಕಾಸು ಸಂಬಂಧಿತ ಮಾಹಿತಿಗಳನ್ನು ಪಡೆದುಕೊಂಡು ಆರ್ ಬಿ ಐ ನ ಈ ಉಪಕ್ರಮದ ಬಗ್ಗೆಮೆಚ್ಚುಗೆ ವ್ಯಕ್ತಪಡಿಸಿದರು.