ಗ್ರಾಮೀಣ ರಸ್ತೆಗಳಿಗೆ ಮೊದಲ ಆದ್ಯತೆ: ಶಾಸಕ ಪಠಾಣ
ಶಿಗ್ಗಾವಿ 04: ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಶಾಸಕ ಯಾಸೀರಖಾನ ಪಠಾಣ ಅವರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ತಾಲೂಕಿನ ಗಂಗಿಭಾವಿಯಲ್ಲಿ ಮಾತನಾಡಿದ ಅವರು ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರ ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾಗಬಾರದು ಎಂದು ಮೊದಲ ಪ್ರಾಶಸ್ಯೆದಡಿ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಗಂಗಿಭಾವಿ ರಸ್ತೆಯನ್ನು 50 ಲಕ್ಷ ರೂ, ವನಹಳ್ಳಿ ರಸ್ತೆಯನ್ನು 25 ಲಕ್ಷ ರೂ. ಮತ್ತು ಬಾಡ ಗ್ರಾಮದ ರಸ್ತೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ರಸ್ತೆಗಳು ತಾಲೂಕಿನ ಹಲವಾರು ಗ್ರಾಮಗಳಿಂದ ನೇರವಾಗಿ ಶಿಗ್ಗಾವಿ ಪಟ್ಟಣಕ್ಕೆ ಸಂಪರ್ಕ ಸಾಧಿಸುವ ರಸ್ತೆಗಳಾಗಿದ್ದು, ಶೀಘ್ರ ಕಾಮಗಾರಿಯನ್ನು ಮುಗಿಸುವಂತೆ ಸೂಚಿಸಲಾಗಿದೆ. ಹಂತ ಹಂತವಾಗಿ ತಾಲೂಕಿನ ಮತ್ತಷ್ಟು ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಗೌಸಖಾನ ಮುನಸಿ, ಎಂ.ಜೆ. ಮುಲ್ಲಾ, ಅಣ್ಣಪ್ಪ ಲಮಾಣಿ, ಮಂಜುನಾಥ ಹಿರೂರ, ಶಂಬಣ್ಣ ಸುರೇಶ, ಪರಶುರಾಮ, ಮಂಜುನಾಥ, ಗಿರಿಶ, ಸುಧೀರ ಲಮಾಣಿ, ಕರೀಂ ಮೊಗಲಲ್ಲಿ, ಮುನ್ನಾ ಲಕ್ಷ್ಮೇಶ್ವರ, ಸಾಧಿಕ ಸವಣೂರ ಸೇರಿದಂತೆ ಇತರರಿದ್ದರು.