ಹಂಪಿ 05: ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲ ಒಂದೇ. ನಾವೆಲ್ಲ ಒಂದೇ ಎಂಬ ಭಾವನೆಯಿಂದ ವಿದ್ಯಾರ್ಥಿಗಳಿರಬೇಕು. ಯಾವುದೇ ಪ್ರತ್ಯೇಕತೆಯ ಭಾವ ನಿಮ್ಮಲ್ಲಿರಬಾರದು ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು.
ಅವರು ಕನ್ನಡ ವಿಶ್ವವಿದ್ಯಾಲಯ, ಹಂಪಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ, ಬಾಲಕರ ವಸತಿ ನಿಲಯವನ್ನು 4ನೇ ಮಾರ್ಚ್ 2025ರಂದು ಉದ್ಘಾಟಿಸಿ, ಮಾತನಾಡುತ್ತಾ, ದೇಶದಲ್ಲಿ ಅಲ್ಪಸಂಖ್ಯಾತರಿಗೆ ಗಾಬರಿ ಬೆದರಿಕೆಯ ವಿಷಮ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ, ನಿಜ ಎಷ್ಟೋ, ಸುಳ್ಳು ಎಷ್ಟೋ, ಗೊಂದಲವೆಷ್ಟೋ ಗೊತ್ತಿಲ್ಲ. ಇವುಗಳಿಗೆ ಕನ್ನಡ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಗಮನ ಕೊಡದೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರ ಸಂವಿಧಾನದ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಅನುದಾನದ ಅಡಿಯಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡುತ್ತದೆ. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ವಿಶ್ವವಿದ್ಯಾಲಯವು ತನ್ನ ಆರ್ಥಿಕ ಇತಿ ಮಿತಿಯಲ್ಲಿ ಕಲ್ಪಿಸಿದೆ. ಕಾಲಕಾಲಕ್ಕೆ ಸರ್ಕಾರದಿಂದ ಇನ್ನು ಬೇಕಾದ ಸೌಲಭ್ಯಗಳನ್ನು ಹಾಸ್ಟೆಲಗೆ ಲಭಿಸಲು ವಿಶ್ವವಿದ್ಯಾಲಯವು ಕೆಲಸ ಮಾಡಲು ಬದ್ಧವಾಗಿದೆ. ಇದಕ್ಕೆಲ್ಲ ಕಾರಣವಾಗಿರುವ ಸರ್ಕಾರದ ಎಲ್ಲ ಅಧಿಕಾರಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿಗಳು ಹಾಗೂ ಹಾಸ್ಟೆಲಿನ ವಿದ್ಯಾರ್ಥಿಗಳು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕ್ಷೇಮಪಾಲನಾಧಿಕಾರಿಗಳಾದ ಡಾ. ವೆಂಕಟಗಿರಿ ದಳವಾಯಿ ಅವರು ಮಾತನಾಡುತ್ತಾ, ಅಲ್ಪಸಂಖ್ಯಾತ ಸಮುದಾಯಗಳು ಉನ್ನತ ಶಿಕ್ಷಣದಲ್ಲಿ ಬಾಳ ಹಿಂದೆ ಉಳಿದಿವೆ. ಒಬ್ಬ ಅಲ್ಪಸಂಖ್ಯಾತ ವಿದ್ಯಾರ್ಥಿ ಪರಿಶ್ರಮ ನಿಷ್ಠೆಯಿಂದ ಶಿಕ್ಷಣ ಪಡೆದು ಯಶಸ್ವಿಯಾದರೇ ಅವನಿಂದ ಇಡೀ ಅವನ ಮನೆತನ ಅಲ್ಲದೇ ಅವನ ಮುಂದಿನ ಪೀಳಿಗೆಯೂ ಉನ್ನತವಾದ ಬದುಕು ಪಡೆಯುತ್ತದೆ. ಈ ಎಚ್ಚರಿಕೆ ಸದಾ ವಿದ್ಯಾರ್ಥಿಗಳಿಗೆ ಇರಬೇಕೆಂದು ಎಂದರು.
ಕನ್ನಡ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ವಿಶೇಷ ಘಟಕದ ಸಂಯೋಜನಾಧಿಕಾರಿಗಳಾದ ಡಾ.ಎಸ್.ಆರ್. ಚನ್ನವೀರ್ಪ, ವಿಜಯನಗರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕ ಅಧಿಕಾರಿಗಳಾದ ಎಸ್.ಸುದೀಪಕುಮಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.