ಬೆಳಗಾವಿ 13: ವಿದ್ಯಾರ್ಥಿಗಳಲ್ಲಿ ಕೇಳುವ, ಆಲಿಸುವ, ಶೋಧಿಸುವ ಕುತೂಹಲವಿರಬೇಕು. ಅವರಲ್ಲಿರುವ ಕುತೂಹಲ ಜ್ಞಾನದ ಅಭಿರುಚಿಯನ್ನು ಬೆಳೆಸುತ್ತದೆ. ಜ್ಞಾನ ಮತ್ತು ಕುತೂಹಲವು ವಿದ್ಯಾರ್ಥಿಗಳನ್ನು ಆವಿಷ್ಕಾರದೆಡೆಗೆ ಕೊಂಡೊಯ್ಯುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಂ. ಉಷಾ ಮೇರು ಯೋಜನೆಯ ವತಿಯಿಂದ ಮೇ.13ರಂದು ರಾಚವಿ ವ್ಯಾಪ್ತಿಯಲ್ಲಿನ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಅಂತಃಶಕ್ತಿಯೇ ವಿಜ್ಞಾನ. ವಿಜ್ಞಾನದಿಂದಲೇ ಜಗತ್ತಿನ ಬದಲಾವಣೆ. ವಿಜ್ಞಾನಕ್ಕೆ ಅಪಾರವಾದ ಬೇಡಿಕೆ ಇದೆ. ವಿದ್ಯಾರ್ಥಿಗಳು ಮನಸ್ಸಿನಲ್ಲಿ ವಿಜ್ಞಾನವೇ ತುಂಬಿರಬೇಕು. ಸರಿಯಾದ ಮಾರ್ಗದಲ್ಲಿ ಸಾಗಿ, ಜ್ಞಾನ ಸಂಪಾದಿಸಿ ಜಗತ್ತಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ತುಡಿತ ವಿದ್ಯಾರ್ಥಿಗಳಲ್ಲಿ ಸದಾ ಜಾಗೃತವಾಗಿರಬೇಕು.
ಪ್ರತಿ ಶಿಕ್ಷಣ ಸಂಸ್ಥೆಗಳು ವಿಜ್ಞಾನ ವಿದ್ಯಾರ್ಥಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಸಿದ್ಧ ಮಾಡಿಕೊಡಬೇಕು. ವಿಜ್ಞಾನ ಲೋಕದ ಸಾಧಕರು ಮಾಡಿದ ಆವಿಷ್ಕಾರದ ರಥವನ್ನು ವಿದ್ಯಾರ್ಥಿಗಳು ಮುನ್ನಡೆಸಬೇಕು. ವಿಜ್ಞಾನದ ಶಕ್ತಿ ಸದಾ ನಿರಂತರವಾಗಿ ಹರಿಯುವಂತದ್ದು. ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಸುಸಜ್ಜಿತ ಲ್ಯಾಬ್ ಮತ್ತು ವಿಜ್ಞಾನಕ್ಕೆ ಪೂರಕವಾದ ವಾತಾವರಣವನ್ನು ಒದಗಿಸುತ್ತಿದ್ದೇವೆ ಎಂದರು.
ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ. ಅರ್ಜುನ ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿನಾಯಕ ಬಂಕಾಪುರ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವೇದಿಕೆಯಲ್ಲಿ ಪ್ರೊ. ಬಸವರಾಜ ಪದ್ಮಶಾಲಿ, ಡಾ. ವಿವೇಕ ರೆಡ್ಡಿ, ಡಾ. ಡೇವಿಡ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕರಾದ ಪ್ರೊ. ವಿಜಯಲಕ್ಷ್ಮಿ ಎಸ್. ಶೀಗಿಹಳ್ಳಿ ಸ್ವಾಗತಿಸಿದರು, ಪ್ರೊ. ಪರಶುರಾಮ ಬನ್ನಿಗಿಡದ ವಂದಿಸಿದರು, ಸಹಾಯಕ ಪ್ರಾಧ್ಯಾಪಕರಾದ ವಿದ್ಯಾಸಾಗರ ಮೈಸೂರಮಠ ನಿರೂಪಿಸಿದರು, ಉಪನ್ಯಾಸಕಿ ಲಾವಣ್ಯ ಗುಂಜಾಳ ಪ್ರಾರ್ಥಿಸಿದರು.