ರಾಣೆಬೆನ್ನೂರ 11 :ಇಂದು ಮನುಜನ ಸ್ವಾರ್ಥ ಮನೋಭಾವನೆಯಿಂದಾಗಿ ಪರಿಸರ ವಿನಾಶವಾಗುತ್ತಿದ್ದು ಇದರಿಂದ ಓಝೇನ್ ಪರದೆ ಹಾಳಾಗಿ ಜಾಗತಿಕ ತಾಪಮಾನ ನೀರೀಕ್ಷೆಗೂ ಮೀರಿ ಹೆಚ್ಚಾಗಿ ಮನುಷ್ಯನಿಗೆ ನೂರೆಂಟು ಸಮಸ್ಯೆಗಳ ಜೊತೆಗೆ ರೋಗಗಳು ಉದ್ಭವವಾಗುತ್ತಿವೆ ಎಂದು ನಗರಸಭಾ ಪೌರಾಯುಕ್ತ ಎಫ್. ಐ. ಇಂಗಳಗಿ ಹೇಳಿದರು.
ಅವರು ಸೋಮವಾರ ಸ್ಥಳೀಯ ನಗರಸಭೆ, ಮುತ್ತೂಟ್ ಫೈನಾನ್ಸ್, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುತ್ತೂಟ್ ಹಸಿರು ಮಾರ್ಗ ಶೀರ್ಷಿಕೆಯಡಿ 300 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ನಗರದ ದೊಡ್ಡಕೆರೆ ಆವರಣದಲ್ಲಿ ಸಾಂಕೇತಿಕವಾಗಿಚಾಲನೆ ನೀಡಿ ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಮರ ಗಿಡಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಇದರಿಂದ ಸಮಸ್ತ ಜೀವ ಕುಲಕ್ಕೆ ಧಕ್ಕೆ ಉಂಟಾಗುತ್ತಿದೆ. ಮನುಜನು ಅನೇಕ ರೋಗಗಳಿಗೆ ತುತ್ತಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇದು ಹೀಗೆಯೇ ಮುಂದುವರೆದರೆ ಇಡೀ ಜೀವಕುಲಕ್ಕೆ ಸಂಕಷ್ಟ ಆಗುವುದರಲ್ಲಿ ಸಂದೇಹವೇ ಇಲ್ಲ ಎನ್ನಬಹುದು. ಮುಂದಿನ ದಿನಮಾನಗಳಲ್ಲಿ ರಾಣೆಬೆನ್ನೂರು ನಗರದಲ್ಲಿ ಹಸಿರು ಕಾರಣ ಮಾಡಬೇಕೆಂಬ ಶಾಸಕ ಪ್ರಕಾಶ್ ಕೋಳಿವಾಡರ ಕನಸನ್ನು ನನಸಾಗಿಸಲು ನಗರಸಭೆಯಿಂದ ಪರಿಸರ ಸಂರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಸದಸ್ಯರುಗಳ ಹಾಗೂ ನಗರದ ನಾಗರಿಕರ ಸಹಕಾರದಿಂದ ಅನುಷ್ಠಾನಕ್ಕೆ ತರಲು ಮುಂದಾಗುವುದಾಗಿ ಹೇಳಿದರು.
ನೀಡ್ಸ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್ಎಫ್ ಅಕ್ಕಿ ಮಾತನಾಡಿ ದೊಡ್ಡ ಕೆರೆಯನ್ನು ವಿಹಾರಧಾಮ ಮಾಡಲು ಸರಕಾರವು ಮುಂದಾಗಿರುವ ಹಿನ್ನೆಲೆಯಲ್ಲಿ ಅದರ ಸುತ್ತಲೂ ನೀಡ್ಸ್ ವತಿಯಿಂದ 600 ಸಸಿಗಳನ್ನು ನೀಡಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ 300 ಸಸಿಗಳನ್ನು ಹಿಂದೆ ನೀಡಲಾಗುವುದು. ಪರಿಸರ ಉಳಿದರೆ ಮಾತ್ರ ಮನುಜನು ಉಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಈಗಿನಿಂದಲೇ ಮನೆಗೊಂದು ಸಸಿಯನ್ನು ನೆಡಲು ಸರ್ವರೂ ಸಂಕಲ್ಪ ಮಾಡಬೇಕು. ಇದರಿಂದ ಪರಿಸರ ವೃದ್ಧಿಯಾಗಿ ಎಲ್ಲಡೆ ಉತ್ತಮ ವಾತಾವರಣ ಉಂಟಾಗುವುದು ಎಂದರು.ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೀರೇಶ್ (ರಾಜಣ್ಣ) ಮೋಟಗಿ, ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ವಿಜಯಕುಮಾರ, ಮುತ್ತೂಟ ಫೈನಾನ್ಸ್ ಪ್ರಾದೇಶಿಕ ವ್ಯವಸ್ಥಾಪಕ ಮುರಳೀಧರ, ಕ್ಲಸ್ಟರ್ ವ್ಯವಸ್ಥಾಪಕ ಹರೀಶ್ ಬಿ.ಎನ್., ಶಾಖಾ ವ್ಯವಸ್ಥಾಪಕ ಪ್ರವೀಣ್ ವಿಭೂತಿ, ಭರತ, ಪ್ರಸಾದ ಕುಮಾರ, ನಗರಸಭಾ ಸದಸ್ಯೆ ಕಸ್ತೂರಿ ಚಿಕ್ಕಬಿದರಿ, ಮಲ್ಲಿಕಾರ್ಜುನ ಅಂಗಡಿ, ಪುಟ್ಟಪ್ಪ ಮರಿಯಮ್ಮನವರ, ಸಿದ್ದಣ್ಣ ಚಿಕ್ಕಬಿದರಿ, ರೈತ ಮುಖಂಡ ರವೀಂದ್ರಗೌಡ ಪಾಟೀಲ, ಕನಸಿನ ರಾಣೇಬೆನ್ನೂರು ಸಂಚಾಲಕ ಡಾ.ನಾರಾಯಣ ಪವಾರ, ಗೋ-ಗ್ರೀನ್ ಸಂಚಾಲಕ ಡಾ.ಗೀರೀಶ ಕೆಂಚಪ್ಪನವರ, ಸ್ವಾಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಸಂಜೀವ ಶಿರಹಟ್ಟಿ ಸೇರಿದಂತೆ ನೀಡ್ಸ್ , ಮುತ್ತೂಟ್, ನಗರಸಭೆ ಸಿಬ್ಬಂದಿಗಳು ಇದ್ದರು .