ಶಿಕ್ಷಕ ರತ್ನ ಡಾ. ಜಗದೀಶ ಎಫ್ ಹೊಸಮನಿ ಸೇವಾ ನಿವೃತ್ತಿ: “ನುಡಿ ಮಂದಾರ” ಅಭಿನಂದನಾ ಗ್ರಂಥ ಬಿಡುಗಡೆ
ಹಾವೇರಿ 04 : ನಗರದ ಡಾ.ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಆಯೋಜನೆಗೊಂಡ ಡಾ.ಜಗದೀಶ್ ಎಫ್ ಹೊಸಮನೆಯವರ ಅಭಿನಂದನಾ ಸಮಾರಂಭ ಹಾಗೂ “ನುಡಿ ಮಂದಾರ” ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಬಹುಪಾಲು ವಸಂತಗಳನ್ನು ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಿಗೆ ಮುಡಿಪಾಗಿಟ್ಟಿರುವ ಅಪಾರ ಶಿಷ್ಯಬಳಗಕ್ಕೆ ಮಾದರಿಯಾಗಿದ್ದಾರೆ, ಸಮಾಜದ ಮತ್ತು ಶಿಕ್ಷಣದ ಸ್ವಾಸ್ಥ್ಯವನ್ನು ಕಾಪಿಟ್ಟುಕೊಂಡು “ಎಲೆಮರೆಯ ಕಾಯಿ”ಯಂತೆ ಸೂಕ್ಷ್ಮ ಸಂವೇಧನಾಶೀಲರಾಗಿ, ಕರ್ತವ್ಯ ನಿರ್ವಹಿಸಿ ಸರ್ವರಿಂದಲೂ ಸೈ ಎನಿಸಿಕೊಂಡವರು. ಇವರ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪೂಜ್ಯಶ್ರೀ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಶ್ರೀಗಳು ಹಾಗೂ ಇತರರಿಂದ ಲತಾಮಣಿ ಟಿ.ಎಂ ಸಂಪಾದಿಸಿದ “ನುಡಿ ಮಂದಾರ ಅಭಿನಂದನಾ ಗ್ರಂಥ” ಬಿಡುಗಡೆಗೊಳಿಸಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಕುಲಕರ್ಣಿ “ನುಡಿ ಮಂದಾರ” ಅಭಿನಂದನಾ ಗ್ರಂಥ ಪರಿಚಯಿಸಿದರು.
ವೇದಿಕೆ ಮೇಲಿನ ಪೂಜ್ಯರು ಹಾಗೂ ಗಣ್ಯ ಡಾ.ಜಗದೀಶ ಎಫ್ ಹೊಸಮನಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ ಅವರು ಪ್ರತ್ಯಕ್ಷ ಹಾಗೂ ಪರೋಕ್ಷ ಸಹಾಯ, ಸಹಕಾರ ನೀಡಿದ ಸರ್ವರನ್ನು ಅಭಿನಂದಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಅವರು ಮಾತನಾಡುತ್ತಾ - ಇದೊಂದು ಅದ್ಭುತ ಸಮಾರಂಭ, ಡಾ.ಜಗದೀಶ್ ನನ್ನ ತಮ್ಮನಂತೆ. ತೊಂಬತ್ತರ ದಶಕದಿಂದ ಸದಾ ನನ್ನ ಒಡನಾಟದಲ್ಲಿದ್ದವನು. ಅಪಾರ ವಿದ್ಯಾರ್ಥಿ ಸಮೂಹ, ಕನ್ನಡ ಅಭಿಮಾನಿ ಬಳಗ. ಬಂಧು-ಬಾಂಧವರು, ಹಿತೈಷಿಗಳಿಂದ ಆಯೋಜಿಸಿದ ಅಭಿನಂದನಾ ಸಮಾರಂಭ ಯಶಸ್ವಿಯಾಗಿದೆ. ಅವರ ಭಾವೀಜೀವನ ಸುಖಮಯವಾಗಿರಲೆಂದು ಹಾರೈಸಿದರು.
ದಿವ್ಯ ಸಾನಿಧ್ಯ ವಹಿಸಿದ ಪೂಜ್ಯಶ್ರೀ ಜಗದ್ಗುರು ಶಾಂತಭೀಷ್ಮಚೌಡಯ್ಯ ಸ್ವಾಮಿಗಳು, ನಿಜಶರಣ ಅಂಬಿಗರ ಚೌಡಯ್ಯನವರ ಪೀಠ, ನರಸೀಪುರ, ಹಾವೇರಿ ಜಿಲ್ಲೆ ಇವರು ಆಶೀರ್ವಚನ ನೀಡುತ್ತಾ, ಅಪ್ಪಟ ಗ್ರಾಮೀಣ ಪ್ರತಿಭೆಯಾದ ಪ್ರೊ.ಜಗದೀಶ್ರವರು ನಾಡಿನ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಾಗಿದ್ದಾರೆಂದರು.
ಜಿ.ಎಚ್ ಮಹಾವಿದ್ಯಾಲಯದಿಂದ ಡಾ.ಅಂಬೇಡ್ಕರ್ ಸಭಾ ಭವನದವರೆಗೆ ಪೂಜ್ಯ ಶ್ರೀಗಳು, ಅತಿಥಿ ಮಹೋದಯರೊಂದಿಗೆ ಪೂರ್ಣಕುಂಭ ಸಮೇತ ವಾದ್ಯ, ಕಲಾಮೇಳಗಳೊಂದಿಗೆ ಭವ್ಯ ಮೆರವಣಿಗೆಯು ಜರುಗಿತು. ನಂತರ ಶ್ರೀಗುರುನಂಜಪ್ಪ ಕುಂಬಾರಿ ಕಲಾ ತಂಡದವರಿಂದ “ವೀರಗಾಸೆ ಪ್ರದರ್ಶನ”, ಶ್ರೀನವರತ್ನಕುಮಾರ ಜೆ ಹೊಸಮನಿ ಅವರಿಂದ “ನೃತ್ಯ ಪ್ರದರ್ಶನ”, ಕುಮಾರಿ ನಿಕಿತಾ ವನಹಳ್ಳಿ ಅವರಿಂದ “ಭರತನಾಟ್ಯ ಪ್ರದರ್ಶನ” ಹಾಗೂ ವೈಷ್ಣವಿ ಹಾನಗಲ್, ತಲಕಾಡ್ ಸಂಗಡಿಗರಿಂದ “ಹಿಂದುಸ್ಥಾನಿ ಸಂಗೀತ ಸೌರಭ” ಜರುಗಿತು. ಪ್ರೀತಿಯ ಭೋಜನದ ತರುವಾಯ, ಯಕ್ಷಗಾನ ಮತ್ತು ಸಂಸ್ಕೃತಿ ಸಂಘ, ಉಡುಪಿ - ಧಾರವಾಡ ಕಲಾ ತಂಡದವರಿಂದ ಪ್ರದರ್ಶನಗೊಂಡಹಿ “ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನ” ಸಮಾರಂಭದ ಮೆರಗನ್ನು ಹೆಚ್ಚಿಸಿತು.
ಅಪಾರ ಸಂಖ್ಯೆಯ ಹಳೇಯ ವಿದ್ಯಾರ್ಥಿ ಅಭಿಮಾನ ಬಳಗದವರು ಕೆ.ಎಲ್.ಇ ಸಂಸ್ಥೆಯ ಸಮಸ್ತ ಪರಿವಾರದವರು, ಆತ್ಮೀಯ ಸ್ನೇಹಿತರು, ಬಂಧು-ಬಾಂಧವರು, ಹಿತೈಷಿಗಳು ಅಭಿನಂದನಾ ಸಮಾರಂಭ ಸಮಿತಿ ಸರ್ವಸದಸ್ಯರು, ಸಮಸ್ತ ಕನ್ನಡ ನಾಡಿನ ಮನಸ್ಸುಗಳು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಯವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸಮಾರಂಭದ ಆರಂಭದಲ್ಲಿ ವೈಷ್ಣವಿ ಹಾನಗಲ್, ತಲಕಾಡ್ ಸಂಗಡಿಗರು ಪ್ರಾರ್ಥಿಸಿದರು. ನಾಡಗೀತೆಯನ್ನು ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೆರವೇರಿಸಿದರು. ಪ್ರೊ.ಶಮಂತ್ಕುಮಾರ ಕೆ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು. ಶ್ರೀದೇವಿ ಪ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು.