ಶಿಗ್ಗಾವಿ 02 : ಶಿಕ್ಷಕರೆಂದರೆ ಕೇವಲ ಪಾಠ ಹೇಳುವವರಲ್ಲ ಅವರು ಬದುಕಿಗೆ ದಿಕ್ಕು ತೋರುವವರು. ಅದಕ್ಕೆ ಉತ್ತಮ ಉದಾಹರಣೆ ನಮ್ಮ ಶ್ರೀಶೈಲ ಹುದ್ದಾರ ಗುರುಗಳು ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ ಹೇಳಿದರು.
ಪಟ್ಟಣದ ಹನುಮಂತ ಗೌಡ್ರ ಕಲ್ಯಾಣ ಮಂಟಪದಲ್ಲಿ ಶ್ರೀಶೈಲ ಹುದ್ದಾರ ಅಭಿನಂದನ ಸಮಿತಿಯ ಆಶ್ರಯದಲ್ಲಿ ಜರುಗಿದ ಶಿಕ್ಷಕ ಶ್ರೀಶೈಲ ಹುದ್ದಾರವರ ಸೇವಾ ನಿವೃತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀಶೈಲ ಹುದ್ದಾರ ಗುರುಗಳು ಕಳೆದ 38 ವರ್ಷಗಳ ಕಾಲ ನಮ್ಮ ಕ್ಷೇತ್ರದ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿ ಮತ್ತು ಸಾಮಾಜಿಕ ರಂಗದಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ. ಕೇವಲ ಅವರ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೆ ನಮ್ಮಂತ ಸಾಕಷ್ಟು ಜನರಿಗೆ ಮಾರ್ಗದರ್ಶನ ನೀಡಿ ಮಾದರಿ ಶಿಕ್ಷಕರಾಗಿ ತಮ್ಮ ಸೇವಾ ನಿವೃತ್ತಿ ಪಡೆಯುತ್ತಿದ್ದಾರೆ ಅವರ ನಿವೃತ್ತಿ ನಂತರದ ಜೀವನವು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಇನ್ನಷ್ಟು ಮುಂದುವರೆಯಲಿ ಎಂದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಯಾಸೀರ ಅಹ್ಮದಖಾನ ಪಠಾಣ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಪ್ರೇಮಾ ಪಾಟೀಲ, ಶಿಕ್ಷಕ ಶ್ರೇಶೈಲ ಹುದ್ದಾರ, ರಾಘವೇಂದ್ರ ದೇಶಪಾಂಡೆ, ಮಂಜುನಾಥ ದುಬೆ, ಮಂಜುನಾಥ ಬ್ಯಾಹಟ್ಟಿ, ಗೂಳಪ್ಪ ಅರಳಿಕಟ್ಟಿ, ದೀರೇಂದ್ರ ಕುಂದಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.