ಧಾರವಾಡ 14: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಇಂದು ಬೆಳಿಗ್ಗೆ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೃಷಿಯಲ್ಲಿ ಕೃತಕ ಬುದ್ದಿಮತ್ತೆ ಕೇಂದ್ರದ ನೂತನ ಕಟ್ಟಡ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ನೂತನ ಕಟ್ಟಡ ಮತ್ತು ಜೈವಿಕ ಗೊಬ್ಬರ ಗುಣ ನಿಯಂತ್ರಣ ಪ್ರಯೋಗಾಲಯ ಕಟ್ಟಡವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಕೃಷಿ ಇಲಾಖೆ ಅಧಿಕಾರಿಗಳು, ರೈತ ಪ್ರಮುಖರು ಉಪಸ್ಥಿತರಿದ್ದರು.
ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರ: ಕೃತಕ ಬುದ್ಧಿಮತ್ತೆಯನ್ನು ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಬಳಸುವುದು ಯೋಜನೆ ಉದ್ದೇಶವಾಗಿದೆ. ಇದರಿಂದ ವಿವಿಧ ಕ್ಷೇತ್ರಗಳ ಜ್ಞಾನವನ್ನು ಬಳಸಿಕೊಳ್ಳಬಹುದು. ಇತ್ತೀಚಿನ ದಿನಮಾನಗಳಲ್ಲಿ ಈ ತಂತ್ರಜ್ಞಾನ ಬಳಸಿ ಉತ್ಪಾದನಾ ಪದ್ಧತಿ ಸುಧಾರಿಸಲಾಗಿದೆ, ಇಳುವರಿ ಹೆಚ್ಚಾಗಿದೆ, ಕೃಷಿ ಕ್ಷೇತ್ರವು ವೈವಿಧ್ಯಮಯವಾಗಿದೆ. ಯಥೇಚ್ಚ ಅಂಕಿ ಅಂಶ ಮತ್ತು ದೊಡ್ಡ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸುವುದು, ಬಳಸುವುದು, ಅವಶ್ಯವಾಗಿದೆ.
ಎಲ್ಲ ಕೆಲಸವನ್ನು ಸುಲಭವಾಗಿ ಹಾಗೂ ನಿಖರವಾಗಿ ಮಾಡಲು ಏಆಯ್ ಸಹಾಯಕವಾಗಿದೆ. ಕಾಲಕಾಲಕ್ಕೆ ಬದಲಾಗುತ್ತಿರುವ ಕೃಷಿ ವಲಯದ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೀತಿ ನಿರ್ಧಾರ ರೂಪಿಸುವಲ್ಲಿ ಪ್ರಸ್ತುತ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ.
ವಿವಿಧ ಬೇಸಾಯ ಕ್ರಮಗಳು, ಬಿತ್ತನೆ, ನೀರಾವರಿ, ಗೊಬ್ಬರ ಬಳಕೆ, ಕ್ರಿಮಿಕೀಟಗಳ ನಿರ್ವಹಣೆ ಮುಂತಾದವುಗಳಿಗೆ ಎಐಎಸಿ ನೆರವಿಗೆ ಬರುತ್ತದೆ. ದೂರಸಂವೇದಿ ತಂತ್ರಜ್ಞಾನದೊಂದಿಗೆ ವೈಜ್ಞಾನಿಕವಾಗಿ ಸಂಪನ್ಮೂಲಗಳ ನಿರ್ವಹಣೆಯನ್ನು ಮಾಡಬಹುದಾಗಿದೆ.ಕೃತಕ ಬುದ್ಧಿಮತ್ತೆ ಕೇಂದ್ರ ಕಟ್ಟಡವನ್ನು 3.75 ಕೋಟಿ ಮೊತ್ತದಲ್ಲಿ ಕರ್ನಾಟಕ ಗೃಹ ಮಂಡಳಿ ಇವರಿಂದ ನಿರ್ಮಿಸಲಾಗಿದೆ.
ಕಟ್ಟಡದಲ್ಲಿ ವರ್ಕ್ ಸ್ಪೇಸ್ ಕ್ಯೂಬಿಕಲ್ಸ್, ಸರ್ವರ್ ಕೊಠಡಿ, ಬ್ಯಾಟರಿ ಕೊಠಡಿ, ಯುಟಿಲಿಟಿ ಮತ್ತು ಟೂಲ್ ರೂಮ್, ಕಾನ್ಫರೆನ್ಸ್ ಹಾಲ್, ಹಾಡ್ ಕ್ಯಾಬಿನ್, ಊಟದ ಕೊಠಡಿ, ಲಿಫ್ಟ್ ಇನ್ನು ಹಲವಾರು ವ್ಯವಸ್ಥೆಗಳನ್ನು ಮಾಡಲಾಗಿದೆ.ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರ: ಕೃಷಿ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳಿಗೆ ಮತ್ತು ರೈತ ಸಮುದಾಯದವರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಬೆಳೆ ಸಂಗೋಪನೆ ಅಲ್ಲದೆ ಕೃಷಿ ಸಂಬಂಧಿ ಎಲ್ಲ ಉಪಕಸುಬಗಳು ಹಾಗೂ ಆದಾಯ ತರುವ ಚಟುವಟಿಕೆಗಳ ಕುರಿತಾಗಿ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ.
ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಧಾರವಾಡ ಇವರಿಂದ ನಿರ್ಮಿಸಲಾಗಿದೆ.
ಧಾರವಾಡ ಜೈವಿಕ ಗೊಬ್ಬರ ಗುಣ ನಿಯಂತ್ರಣ ಪ್ರಯೋಗಾಲಯ: ಜೈವಿಕ ಗೊಬ್ಬರ ಬಳಕೆಯಿಂದ ಕೃಷಿಯಲ್ಲಿ ರಸಗೊಬ್ಬರ ಪ್ರಮಾಣವನ್ನು ಕಡಿಮೆ ಮಾಡಬಹುದು, ಉತ್ಪಾದನಾ ವೆಚ್ಚವನ್ನು ತಗ್ಗಿಸುವುದು, ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದು. ಮಾರುಕಟ್ಟೆಯಲ್ಲಿ ವಿವಿಧ ಜೈವಿಕ ಗೊಬ್ಬರಗಳು ಲಭ್ಯವಿದ್ದು, ಅವುಗಳ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಜೈವಿಕ ಗೊಬ್ಬರ ಗುಣನಿಯಂತ್ರಣ ಪ್ರಯೋಗಾಲಯವು ಮಾದರಿ ವಿಶ್ಲೇಷಣೆ ಕೆಲಸವನ್ನು ಪೂರೈಸುತ್ತದೆ. 2019-20 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕಟ್ಟಡ ನವೀಕರಣ ಮತ್ತು ವಿಸ್ತರ್ಣೆ ಕಾಮಗಾರಿಯನ್ನು ಕೈಕೊಳ್ಳಲಾಗಿದೆ.