ಸದೃಢ ದೇಶ ನಿರ್ಮಾಣದಲ್ಲಿ ಗುರುಗಳ ಪಾತ್ರ ನಿರ್ಣಾಯಕ ಘಟ್ಟವಾಗಿದೆ

The role of teachers is crucial in building a strong nation.

ಸದೃಢ ದೇಶ ನಿರ್ಮಾಣದಲ್ಲಿ ಗುರುಗಳ ಪಾತ್ರ ನಿರ್ಣಾಯಕ ಘಟ್ಟವಾಗಿದೆ 

ಹಾವೇರಿ 03 : ಶಿಷ್ಯಂದಿರ ಭವಿಷ್ಯ ರೂಪಿಸುವಲ್ಲಿ ಗುರುಗಳ ಮೇಲೆ ಗುರುತರ ಜವಾಬ್ದಾರಿಗಳಿವೆ ಎಂದು ನಿವೃತ್ತ ಶಿಕ್ಷಕ ಎಸ್‌.ಜಿ. ಸಿದ್ದಮ್ಮನವರ ಹೇಳಿದರು.  ತಾಲೂಕಿನ ದೇವಗಿರಿ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಜರುಗಿದ 1993-94 ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಜ್ಜನರ ನಿರ್ಮಾಣದಲ್ಲಿ ತಾಯಿ ಮೊದಲ ಗುರುಗಳಾದರೆ ನಂತರದ ಸ್ಥಾನ ವಿದ್ಯೆ ಕಲಿಸಿದ ಗುರುಗಳದ್ದು. ಸದೃಢ ದೇಶ ನಿರ್ಮಾಣದಲ್ಲಿ ಗುರುಗಳು ಅತ್ಯಂತ ನಿರ್ಣಾಯಕ. ಈ ಹಿನ್ನೆಲೆಯಲ್ಲಿ ತಮ್ಮ ಗುರುಗಳನ್ನು ಮತ್ತು ಸಹಪಾಠಿಗಳನ್ನು ಮತ್ತೊಮ್ಮೆ ಕೂಡುವ ಇಂಥ ಕಾರ್ಯಕ್ರಮ ಪ್ರೇರಣಾದಾಯಕ ಎಂದರು.      

ನಿವೃತ್ತ ಶಿಕ್ಷಕ ಬಿ.ಹೆಚ್‌.ಬಾರ್ಕಿ ಮಾತನಾಡಿ, ಇದೊಂದು ಪವಿತ್ರ ದಿನ 32 ವರ್ಷಗಳ ಬಳಿಕ ಮತ್ತೆ ಸೇರಿರುವುದು ಧನ್ಯತೆಯ ಕ್ಷಣ, ಗುರುವಿನ ಬಗ್ಗೆ ಯಾವುದೇ ಭಾಷೆ, ಜಾತಿ ಪರಿಗಣಿಸದೇ ಎಲ್ಲರನ್ನೂ ಗೌರವಿಸಿರುವುದು ಅದರ್ಶ ವ್ಯಕ್ತಿತ್ವದ ಮಾದರಿ ಎಂದರು.   ಪ್ರಾಸ್ತಾವಿಕವಾಗಿ ಮಾತನಾಡಿದ ಸಣ್ಣಪ್ಪ ಮಾಳಿ ನಮ್ಮ ಸಹಪಾಠಿ ಸ್ನೇಹಿತರನ್ನು ಮತ್ತೊಮ್ಮೆ ಒಗ್ಗೂಡಿಸುವ ಪ್ರಯತ್ನವನ್ನು ಕಳೆದ ಐದು ತಿಂಗಳಿಂದ ಮಾಡಿದೆವು. ಅದಕ್ಕಾಗಿ ವಾಟ್ಸ್‌ ಆಪ್ ಗ್ರುಪ್ ರಚಿಸಿ, ಜವಾಬ್ದಾರಿ ಹಂಚಿದೆವು.ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ ಆದರೂ ನಮ್ಮ ಸೇವೆ ಮುಂದುವರೆಯುತ್ತದೆ ಎಂದರು.    

ಹೈಸ್ಕೂಲ್ ದಿನಗಳಲ್ಲಿ ನಮ್ಮ ಗುರುಗಳು ಸಾಧನೆಗೆ ಪ್ರೇರೇಪಿಸುತ್ತಿದ್ದರು. ಅವರೆ ಒತ್ತಾಸೆ ಹಾಗೂ ನಮ್ಮ ಪ್ರಯತ್ನದ ಫಲವಾಗಿ ನಾವು ಉನ್ನತ ಸ್ಥಾನ ಅಲಂಕರಿಸಿರುವುದಕ್ಕೆ ಹೆಮ್ಮೆ ಇದೆ ಹಳೆಯ ವಿದ್ಯಾರ್ಥಿಗಳ ಪೈಕಿ ರಾಜಶೇಖರ ಹಿರೇಮಠ, ರಾಮನಗೌಡ ಪಾಟೀಲ, ಗೀತಾ ಹುಲಿಕಟ್ಟಿ, ಬೀರ​‍್ಪ ಬಡ್ಡಿ, ಮಂಜುನಾಥ ಕನ್ನನಾಯಕನವರ ಸೇರಿದಂತೆ ಇತರರು ಆನಿಸಿಕೆ ವ್ಯಕ್ತಪಡಿಸಿದರು.    

ಗುರುವಂದನೆಯನ್ನು ನಿವೃತ್ತ ಶಿಕ್ಷಕರಾದ ಎಸ್‌.ಜಿ. ಸಿದ್ದಮ್ಮನವರ, ಬಿ.ಹೆಚ್‌.ಬಾರ್ಕಿ, ಡಿ.ವೀ.ಹಳ್ಳಿಕೇರಿ, ಎಸ್‌.ಎನ್‌. ಕುಲಕರ್ಣಿ, ಎಸ್‌.ಎಚ್‌.ಕಾರದ,ಎಮ್‌.ಜಿ.ತೇಲ್ಡರ್, ಪಿ.ಬಿ.ಮುದ್ದಿ,ಡಿ.ಎಸ್‌.ಪರಡ್ಡಿ, ಡಿ.ಸಿ.ಪುರದ,ಎಸ್‌.ಎಸ್‌.ಬಡ್ಡಿ, ಬಿ.ಎಸ್‌. ಮುಗದೂರ, ಪಿ.ಎಸ್‌. ತಿರಕಣ್ಣನವರ, ಬಿ.ಬಿ.ಕಟ್ಟಿಮನಿ ಸೇರಿದಂತೆ ಮಾಜಿ ಯೋಧರಾದ ಸಚೀನ ಬೂಗಳಿ, ಜಗದೀಶ ಸುರುಳಿ, ಗಿರಿಮಲ್ಲಪ್ಪ ಶಾಡಗುಪ್ಪಿ, ಲಕ್ಷ್ಮಣ ದೇವಗೇರ, ಹಾಗೂ 2024-25 ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ. ಯಲ್ಲಿ ಮಹಾತ್ಮಗಾಂಧಿ ಶಿಕ್ಷಣ ಸಂಸ್ಥೆಗೆ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.  ಅಧ್ಯಕ್ಷತೆಯನ್ನು ಸಮಾಜಸೇವಕ ಪ್ರಭಾಕರ ಮಂಗಳೂರು, ಅತಿಥಿಗಳಾಗಿ ಶಾಂತಮ್ಮ ರಾಮನಗೌಡ್ರ ಪಾಟೀಲ ಸೇರಿದಂತೆ ಮಹಾತ್ಮಾಗಾಂಧಿ ಪ್ರೌಢಶಾಲೆ ದೇವಗಿರಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.