ಸಂಬರಗಿ, 18 : ಗ್ರಾಮದ ಗ್ರಾಮ ಪಂಚಾಯತಿಯ ಕಟ್ಟಡದ ಮೇಲೆ ದಿನವೂ ಹಾರಾಡುವ ತ್ರಿವರ್ಣ ಧ್ವಜದ ಬಣ್ಣ ಮಾಸಿದ್ದು ಅಷ್ಟೆ ಅಲ್ಲ, ದೇಶದ ಸಮೃದ್ಧಿಯ ಸಂಕೇತವಾಗಿ ಹಸಿರು ಬಣ್ಣದದ ಪಟ್ಟಿಯೂ ಹರಿದು ಹಾರಾಡುತ್ತಿದೆ. ಧ್ವಜ ಹರಿದ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ಇದ್ದರೂ ದಿನಾಲೂ ಇದೇ ಧ್ವಜವನ್ನು ಹಾರಿಸಲಾಗುತ್ತಿದ್ದು, ಪಿ.ಡಿ.ಓ ನೋಡಿಯೂ ನೋಡದ ಹಾಗೆ ವರ್ತಿಸುತ್ತಿದ್ದು, ಈ ಭಾಗದ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸರಕಾರದಿಂದ ಬರುವ ಕೋಟ್ಯಾಂತರ ರೂ.ಗಳ ಅನನುದಾನದಲ್ಲಿ ಅಲ್ಪ ಬೆಲೆಯ ಅಚ್ಚುಕಟ್ಟಾದ ಧ್ವಜ ವ್ಯವಸ್ಥೆ ಎತ್ತಿ ತೋರಿಸುವಂತಿದೆ. ಬೇಜವಾಬ್ದಾರಿ ಆಡಳಿತದ ಜೊತೆಗೆ ಧ್ವಜಕ್ಕೆ ಅಗೌರವ ತೋರುವ ಕೆಲಸ ನಡೆದಿದೆ. ಕರ್ತವ್ಯ ನಿರ್ವಹಿಸುವ ಪಿ.ಡಿ.ಓ ಹರಿದ ಹಾಗೂ ಮಾಸಿದ ಬಣ್ಣದ ಧ್ವಜದತ್ತ ಗಮನಹರಿಸದೇ ಇರುವುದು ದುರ್ದೈವದ ಸಂಗತಿಯಾಗಿದೆ.
ಗ್ರಾಮೀಣ ಭಾಗದ ಜನರಲ್ಲಿ ರಾಷ್ಟ್ರ ಧ್ವಜದ ಮಹತ್ವದ ಕುರಿತು ದಿನಾಲೂ ಅರಿವು ಮೂಡಲಿ ಎಂಬ ಉದ್ದೇಶದಿಂದ ರಾಜ್ಯ ಸರಕಾರ ಪ್ರತಿ ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಆದೇಶ ಮಾಡಿದೆ. ಆದರೆ ಸರಕಾರದ ಈ ನಿಯಮ ಪಾಲನೆಯಾಗುತ್ತಿಲ್ಲ, ಇತ್ತೀಚಿನ ದಿನಗಳಲ್ಲಿ ಅಥಣಿ ಮತ್ತು ಕಾಗವಾಡ ತಾಲೂಕಿನ ಕೆಲವು ಗ್ರಾ.ಪಂ ಕಚೇರಿಗಳ ಮೇಲೆ ಹರಿದ ಹಾಗೂ ಮಾಸಿದ ಬಣ್ಣದ ಧ್ವಜಗಳ ಹಾರಾಟ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ರಾಷ್ಟ್ರೀಯ ಭಾವೈಕ್ಯತೆ ಪ್ರತೀಕವಾಗಿ ಅಪಾರ ಗೌರವವುಳ್ಳ ತ್ರಿವರ್ಣ ಧ್ವಜಕ್ಕೆ ಆಗುವ ಅಪಮಾನ ತಡೆಯುವ ನಿಟ್ಟಿನಲ್ಲಿ ಹಾಗೂ ಧ್ವಜದ ಮಹತ್ವ ಕುರಿತು ಪಿ.ಡಿ.ಓ ಗಳಿಗೆ ಕಾರ್ಯಗಾರ ಮಾಡಬೇಕಿದೆ. ಇತ್ತೀಚಿಗೆ ದಿನಗಳಲ್ಲಿ ಸಾಮಾನ್ಯವಾಗಿ ಗ್ರಾ.ಪಂ ಕಟ್ಟಡಗಳ ಮೇಲೆ ಮಾಸಿದ ಹಾಗೂ ಅತೀ ಹಳೆಯದಾದ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದ್ದು, ಮೇಲಾಧಿಕಾರಿಗಳು ಇಂತಹ ಘಟನೆಗಳತ್ತ ಗಮನ ಹರಿಸಿ ಗ್ರಾ.ಪಂ ಸಿಬ್ಬಂದಿಗಳಿಗೆ ಹಾಗೂ ಪಿ.ಡಿ.ಓಗಳಿಗೆ ಎಚ್ಚರಗೊಳಿಸಲು ಮುಂದೆ ಬರುತ್ತಿಲ್ಲ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ.
ಸೋಮವಾರ ದಿನವೇ ಜಾನುವಾರು ಶೆಡ್ ನಿರ್ಮಿಸಿದ ಫಲಾನುಭವಿಗಳಿಗೆ ಬಿಲ್ ನೀಡದೇ ಸತಾಯಿಸಿದ ಹಿನ್ನೆಲೆಯಲ್ಲಿ ಮುಖಂಡನೋರ್ವ ಗ್ರಾ.ಪಂ ಕಚೇರಿಗೆ ಎಮ್ಮೆ ಕಟ್ಟಿ ಪ್ರತಿಭಟಿಸಿದ ಸುದ್ದಿ ಮಾಸುವ ಮುನ್ನವೇ ಈಗ ಪಿ.ಡಿ.ಓ ನಿರ್ಲಕ್ಷ್ಯದಿಂದ ಹರಿದ ಮತ್ತು ಮಾಸಿದ ರಾಷ್ಟ್ರಧ್ವಜ ಹಾರಿಸುತ್ತಿರುವ ಪ್ರಸಂಗದ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಎಸೆಗಿದ್ದಾರೆ.
ಈ ಕುರಿತು ಅಥಣಿ ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕರು ಶಿವಾನಂದ ಕಲ್ಲಾಪೂರ ಇವರನ್ನು ಸಂಪರ್ಕಿಸಿದಾಗ ಇದು ನನ್ನ ಗಮನಕ್ಕೆ ಬಂದಿದ್ದು, ಅವರಿಗೆ ನೋಟಿಸನ್ನು ಜಾರಿಗೆ ಮಾಡಿದ್ದೇನೆ. ಆ ನೋಟಿಸ್ಗೆ ಉತ್ತರ ಬಂದ ನಂತರ ಅದನ್ನು ಪರೀಶೀಲಣೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.