ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಕಚೇರಿ ಉದ್ಘಾಟನೆ

Tikota Taluk Guarantee Committee Office Inauguration

ಲೋಕದರ್ಶನ ವರದಿ 

ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಕಚೇರಿ ಉದ್ಘಾಟನೆ 

ವಿಜಯಪುರ, 01; ತಾಲೂಕು ಕೇಂದ್ರಗಳಲ್ಲಿ ನಾನಾ ಸರಕಾರಿ ಕಚೇರಿಗಳನ್ನು ಪ್ರಾರಂಭಿಸಿ ಜನರಿಗೆ ಸ್ಥಳೀಯವಾಗಿ ದಾಖಲೆಗಳು ಲಭ್ಯವಾಗಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಹಣ ಮತ್ತು ಸಮಯ ಉಳಿತಾಯವಾಗಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.  

ಇಂದು ಶನಿವಾರ ತಿಕೋಟಾದಲ್ಲಿ ಕಂದಾಯ ಇಲಾಖೆಯ ಭೂಮಾಪನ ಎ.ಡಿ.ಎಲ್‌.ಅರ್ ಕಚೇರಿ ಮತ್ತು ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಿಕೋಟಾ ತಾಲೂಕು ಗ್ಯಾರಂಟಿ ಸಮಿತಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.   

ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಬಬಲೇಶ್ವರ ಮತಕ್ಷೇತ್ರದಲ್ಲಿ ಎರಡೂ ತಾಲೂಕು ಕೇಂದ್ರಗಳಲ್ಲಿ ತಾಲೂಕು ಶಕ್ತಿ ಸೌಧ(ಮಿನಿ ವಿಧಾನಸೌದ) ನಿರ್ಮಿಸಲಾಗಿದೆ.  ಈ ಮೂಲಕ ನಾನಾ ಸರಕಾರಿ ಕಚೇರಿಗಳನ್ನು ಒಂದೇ ಸೂರಿನಲ್ಲಿ ಪ್ರಾರಂಭಿಸಲಾಗಿದೆ.  ಇದರಿಂದ ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳ ಜನರು ಪಹಣಿ, ಆಕಾರಬಂದ ಸೇರಿದಂತೆ ನಾನಾ ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ.  ಅಲ್ಲದೇ, ಸಮಯ ಮತ್ತು ಹಣದ ಉಳಿತಾಯವೂ ಆಗಲಿದ್ದು, ಅವ್ಯವಹಾರಗಳಿಗೆ ಕಡಿವಾಣ ಬೀಳಲಿದೆ.  ಅಧಿಕಾರಿಗಳು ಕೆಲಸಕ್ಕೆ ಬರುವ ರೈತರೊಂದಿಗೆ ಆತ್ಮೀಯವಾಗಿ ವರ್ತಿಸಿ ಅಗತ್ಯ ದಾಖಲೆಗಳನ್ನು ಸೂಕ್ತ ಸಮಯಕ್ಕೆ ನೀಡಬೇಕು ಎಂದು ಅವರು ಹೇಳಿದರು.  

ನಮ್ಮ ಸರಕಾರ ಬಡವರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.  ಈ ಯೋಜನೆಗಳನ್ನು ಟೀಕಿಸುತ್ತಿದ್ದವರೇ ಈಗ ಅವುಗಳನ್ನು ನಕಲು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.  

ಇದೇ ವೇಳೆ ಸಚಿವರು ನಾನಾ ರೈತರಿಗೆ ಭೂದಾಖಲೆ ಪ್ರತಿಗಳನ್ನು ವಿತರಿಸಿದರು.  

   ಈ ಸಂದರ್ಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಸೋಮನಾಥ ಬಾಗಲಕೋಟ, ವಿಜುಗೌಡ ಎಂ. ಪಾಟೀಲ, ಆರ್‌. ಜಿ. ಯರನಾಳ, ಸಂತೋಷ ಕೋಲಾರ, ಯಮನಪ್ಪ ಮಲಕನವರ, ಸಿದ್ದಾರ್ಥ ಪರನಾಕರ,  ಬಸಯ್ಯ ವಿಭೂತಿ, ಲೇಪು ಕೋಣ್ಣೂರ, ರಾಜುಗೌಡ ಪಾಟೀಲ, ಜಕ್ಕಪ್ಪ ಎಡವೆ, ಮಲಕು ಹಂಜಿಗೆ, ರುದ್ರಗೌಡ, ಶಿವಾನಂದ ಪಾಟೀಲ, ಡಾ. ಗಜಾನನ ಮಹಿಶ್ಯಾಳ, ಯಾಕೂಬ್ ಜತ್ತಿ, ಭಾಗೀರಥಿ ತೇಲಿ, ಪ್ರಭಾವತಿ  ನಾಟೀಕಾರ, ಮಹಾದೇವಿ ಗೋಕಾಕ, ಗೀತಾಂಜಲಿ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ತಾಲೂಕು ಅಧ್ಯಕ್ಷ ಗುರುಪಾದಗೌಡ ಸಿದ್ದನಗೌಡ ದಾಶ್ಯಾಳ, ಎಲ್ಲ ಸದಸ್ಯರು, ಜೆ.ಡಿ.ಎಲ್‌.ಆರ್ ನಜ್ಮಾ ಎಂ. ಪೀರಜಾದೆ, ಡಿ.ಡಿ.ಎಲ್‌.ಆರ್ ಮಹಾಂತೇಶ ಮುಳಗುಂದ, ಎ.ಡಿ.ಎಲ್‌.ಆರ್ ಮುರುಗೇಶ ರೂಡಗಿ, ತಹಸೀಲ್ದಾರ ಸುರೇಶ ಚವಲಾರ ಮುಂತಾದವರು ಉಪಸ್ಥಿತರಿದ್ದರು.