ಕಾರವಾರ 02 : ಶಿರೂರು ಹೆದ್ದಾರಿ ನಸನಿಹದ ಗಂಗಾವಳಿ ಸೇತುವೆ ಮೇಲೆ ಮಗು ಸಹಿತ ಅಪಾಯಕಾರಿಯಾಗಿ ನಿಂತ ಪ್ರವಾಸಿಗ ದಂಪತಿಗಳನ್ನು ಸಿಸಿ ಟಿವಿ ಕ್ಯಾಮರಾದಲ್ಲಿ ಗಮನಿಸಿದ ಪೊಲೀಸರು, ದಂಪತಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನಿನ್ನ ಮಧ್ಯಾಹ್ನ 1.20 ರ ಸುಮಾರಿಗೆ ನಡೆದಿದೆ.
ಗಂಗಾವಳಿ ನದಿ ವೀಕ್ಷಿಸಲು ದಂಪತಿಗಳು ಕಾರ್ ನಿಂದ ಇಳಿದು, ಸೇತುವೆ ಬಳಿ ಬರುತ್ತಾರೆ. ಪತಿ ಮಗುವನ್ನು ಸೇತುವೆ ಕಟ್ಟೆ ಮೇಲೆ ನಿಲ್ಲಿಸಿಕೊಂಡಿರುತ್ತಾನೆ. ಪತ್ನಿ ಸೇತುವೆ ಬಳಿ ಸೆಲ್ಪಿ ತೆಗೆಯಲು ಮೊಬೈಲ್ ಹಿಡಿಯುವ ಸಮಯಕ್ಕೆ ಸರಿಯಾಗಿ ಪೊಲೀಸ್ ಧ್ವನಿ ಹಾಗೂ ಅಪಾಯಕಾರಿ ಸೈರನ್ ಕೇಳಿಸುತ್ತದೆ.
ನೀವು ಅಪಾಯಕಾರಿ ಸ್ಥಳದಲ್ಲಿ ನಿಂತಿದ್ದೀರಿ ಎಂದು ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡುತ್ತಾರೆ. ತಕ್ಷಣ ದಂಪತಿಗಳು ಅಲ್ಲಿಂದ ವಾಪಾಸ್ ಕಾರ್ ಬಳಿ ಬರುತ್ತಾರೆ. ಸೇತುವೆ ಮೇಲೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಅದರ ದೃಶ್ಯ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಕಾಣುವ ವ್ಯವಸ್ಥೆ ಮಾಡಲಾಗಿದೆ.
ಈ ತಂತ್ರಜ್ಞಾನದ ಫಲವಾಗಿ ಆಗಬಹುದಾದ ಅಪಾಯದ ಮುನ್ನೆಚ್ಚರಿಕೆ ಪ್ರವಾಸಿಗರಿಗೆ ಹೋಗಿದೆ.ಈ ವ್ಯವಸ್ಥೆ ಅಳವಡಿಸಿ ಕೊಂಡ ಜಿಲ್ಲಾ ಪೊಲೀಸ್ ಆಡಳಿತ ಮತ್ತು ಗೋಕರ್ಣ ಪೋಲೀಸರ ಸಮಯ ಪ್ರಜ್ಞೆ ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ.