ಅನುವಾದವು ದೇಶ ಮತ್ತು ಭಾವಗಳ ಜೋಡಿಸುವ ಕ್ರಿಯೆ : ಪ್ರೊ. ಕೇಶವ ಜಾಗೀರದಾರ
ಗದಗ 13: ಅನುವಾದವು ಭಾವ ಮತ್ತು ದೇಶಗಳನ್ನು ಜೋಡಿಸುವ ಸಾಧನವಾಗಿದೆ. ಅನುವಾದ ಕಾರ್ಯದಿಂದ ಕೊಡು ಕೊಳ್ಳುವಿಕೆ ನಡೆಯುತ್ತದೆ. ಇದರಿಂದ ಒಂದು ಭಾಷೆಯು ಶ್ರೀಮಂತವಾಗುತ್ತದೆ ಎಂದು ಗದುಗಿನ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಕೇಶವ ಜಾಗೀರದಾರ ತಿಳಿಸಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಂಗ್ಲ ವಿಭಾಗದ ವತಿಯಿಂದ ’ಅನುವಾದದ ಸಮಸ್ಯೆ ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಜರುಗಿತು.
ಮುಂದುವರೆದು ಮಾತನಾಡಿದ ಅವರು ಅನುವಾದ ಸಾಹಿತ್ಯದಿಂದ ವಿಶ್ವದ ಎಲ್ಲ ಸಾಹಿತ್ಯವನ್ನು ಅರಿಯಲು ಸಾಧ್ಯ. ಅನುವಾದವಿರದೆ ಹೋಗಿದ್ದರೆ ನಾವು ಬಾವಿ ಕಪ್ಪೆಯಂತಾಗಿರುತ್ತಿದ್ದೆವು. ಅನುವಾದದ ಮೂಲಕ ಸ್ಥಳೀಯ ಭಾಷೆಗಳು ಜಾಗತಿಕ ಮನ್ನಣೆಯನ್ನು ಗಳಿಸಿಕೊಳ್ಳುತ್ತವೆ. ಒಂದು ಭಾಷೆಯ ಸಾಹಿತ್ಯವನ್ನು ಇನ್ನೊಂದು ಭಾಷೆಗೆ ತರುವ ಕಷ್ಟ ಅನುಭವಿಸಿದವರಿಗಷ್ಟೆ? ಗೊತ್ತು ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಎ. ಕೆ. ಮಠ ಮಾತನಾಡಿ ಭಾಷಾಂತರ ಸೋಮಾರಿಗಳ ಕೆಲಸವಲ್ಲ, ಅದು ಪ್ರತಿಭಾವಂತರು ಕೈಗೊಳ್ಳಬೇಕಾದ ಕಾರ್ಯ. ಭಾಷಾಂತರ ಎಂಬುದು ಒಂದು ಕಲೆ ಸಾಹಿತಿಯ ಕಾರ್ಯ ‘ಸೃಷ್ಟಿ’ ಎಂದಾದರೆ ಭಾಷಾಂತರಕಾರನ ಕಾರ್ಯವನ್ನು ‘ಪುನಃಸೃಷ್ಟಿ’ ಎಂದು ಕರೆಯುವುದು ಉಚಿತ. ಸೃಷ್ಟಿಯಾದ ಸಾಹಿತ್ಯ ಮೂಲಕ ಓದುಗರ ಮನಸೆಳೆಯುವಂತೆ ಪುನಃಸೃಷ್ಟಿಯಾದ ಸಾಹಿತ್ಯ ಬೇರೊಂದು ಭಾಷೆಯ ಓದುಗರ ಮನಸೆಳೆಯಬೇಕು, ಇಲ್ಲವಾದಲ್ಲಿ ಭಾಷಾಂತರ ವಿಫಲವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕು. ಭೂಮಿಕಾ ಬೆಳದಡಿ ಎಲ್ಲರನ್ನೂ ಸ್ವಾಗತಿಸಿದರು. ಕು. ದೀಪಾ ಬಾಚನಹಳ್ಳಿ ಅತಿಥಿಗಳ ಪರಿಚಯಿಸಿದರು. ಕು. ಬಸವರಾಜ ಕಮತರ ಎಲ್ಲರಿಗೂ ವಂದಿಸಿದದರು. ಕು. ವತ್ಸಲಾ ನಿರೂಪಿಸಿದರು. ಪ್ರೊ. ವಿಶಾಲ ತೆಳಗಡೆ, ಪ್ರೊ. ಕವಿತಾ ರಬನಾಳ ಕಾರ್ಯಕ್ರಮ ಸಂಘಟಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಶ್ವಿಗೊಳಿಸಿದರು.