ಬೆಳಗಾವಿ 11: ತಾಲೂಕುಗಳಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕಟ್ಟಡಗಳು ಪೂರ್ಣಗೊಳಿಸದೇ ಹಾಗೇ ಉಳಿದಿರುತ್ತವೆ. ಸಂಬಂಧಿಸಿದ ಆಯಾ ತಾಲ್ಲೂಕಿನ ಸಿಡಿಪಿಒ ಅವರು ನಿರ್ಮಾಣವಾಗುತ್ತಿರುವ ಅಂಗನವಾಡಿಗಳಿಗೆ ಭೇಟಿ ನೀಡಿ ಪ್ರಗತಿ ಪರೀಶೀಲನೆ ಮಾಡಿ ವಾರದ ಒಳಗಾಗಿ ವರದಿ ನೀಡಲು ಸೂಚಿಸಲಾಯಿತು ಅಲ್ಲದೇ ಕೂಡಲೇ ಕಟ್ಟಡಗಳನ್ನು ಪೂರ್ಣಗೊಳಿಸಲು ಜಿ.ಪಂ. ಯೋಜನಾ ನಿರ್ದೇಶಕರಾದ ರವಿ ಎನ್. ಬಂಗಾರೆಪ್ಪನವರ ನಿರ್ದೇಶನ ನೀಡಿದರು.
ನಗರದ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕಚೇರಿಯಲ್ಲಿ ಬುಧವಾರ ಜೂನ್ 10 ರಂದು ಅಂಗನವಾಡಿ ಕಟ್ಟಡ ಮತ್ತ ಮೂಲಭೂತ ಸೌಕರ್ಯಗಳ ಕುರಿತು ನಡೆದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ ಆ ಕಾಮಗಾರಿಗಳನ್ನು ಬೇಗನೆ ಪ್ರಾರಂಭಿಸಲು ತಿಳಿಸಿದರು. ಮಳೆಗಾಲ ಪ್ರಾರಂಭವಾದ್ದರಿಂದ ಪ್ರತಿ ಅಂಗನವಾಡಿಗಳಿಗೆ ಮೇಲ್ವಿಚಾರಕರು ಭೇಟಿ ನೀಡಿ ಪರೀಶೀಲಿಸಿ ಸಿ.ಡಿ.ಪಿ.ಒ ಅವರಿಗೆ ವರದಿಯನ್ನು ನೀಡಬೇಕೆಂದು ತಿಳಿಸಿದರು. ಆರು ವರ್ಷ ತುಂಬಿದ ಮಕ್ಕಳು ಶಾಲೆಗೆ ದಾಖಲಾದ ಬಗ್ಗೆ ವರದಿ ನೀಡುವುದು. ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರ ಇರುವ ಸೌಲಭ್ಯಗಳನ್ನು ಒದಗಿಸುವುದು, ಪ್ರತಿ ತಿಂಗಳು 3ನೇ ಶನಿವಾರ ಪಾಲಕರ/ಪೋಷಕರ ಸಭೆ ಮಾಡಬೇಕು ಸಭೆಯ ಕುರಿತು ರಜಿಸ್ಟರ್ ನಲ್ಲಿ ಬರೆದು ಛಾಯಾಚಿತ್ರದೊಂದಿಗೆ ವರದಿ ಸಲ್ಲಿಸಲು ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ತೆ ಇರತಕ್ಕದ್ದು ಅಲ್ಲದೇ ಮಕ್ಕಳಿಗೆ ಕುಡಿಯುವ ನೀರು ಕುದಿಸಿ ಆರಿಸಿ ಕೊಡಬೇಕು. ಸ್ವಚ್ಛವಾದ ವಾತಾವರಣದಿಂದ ಕೂಡಿರಬೇಕು. ಮಕ್ಕಳಿಗೆ ಕೆಮ್ಮು, ಜ್ವರ, ನೆಗಡಿ, ಬಂದರೆ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳುವುದು. ಕೇಂದ್ರಗಳಲ್ಲಿ ಕರೆಂಟ್ ವಾಯರ್ ಡಿಸ್ಕನೆಕ್ಟ ಆಗಿದ್ದರೆ ಅದನ್ನು ಸರಿ ಪಡಿಸಿಕೊಳ್ಳಲು ನಿರ್ದೇಶನ ನೀಡಿದರು. ಮಾತೃ ವಂದನಾ, ಭಾಗ್ಯಲಕ್ಷ್ಮೀ ಗೃಹಲಕ್ಷ್ಮಿ ಫಲಾನುಭವಿಗಳ ಆಯ್ಕೆ ಮಾಡಿ ವರದಿ ಸಲ್ಲಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್ ಆರ್. ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ ಜಿಲ್ಲೆಯ ಎಲ್ಲ ತಾಲ್ಲೂಕಿನ ಸಿ.ಡಿ.ಪಿ.ಒ ಹಾಗೂ ಸಿಬ್ಬಂದಿಗಳು ಹಾಜರಿದ್ದರು.