ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ‘ವಿಶ್ವ ಪರಿಸರ ದಿನಾಚರಣೆ’
ಬಳ್ಳಾರಿ 06: ಮಾನವನ ದುರಾಸೆಗೆ ಪರಿಸರವನ್ನು ನಿರಂತರವಾಗಿ ನಾಶ ಮಾಡುತ್ತಿದ್ದಾನೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜು ಹೇಳಿದರು. ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಪ್ಲಾಸ್ಟಿಕ್ ಮಾಲಿನ್ಯದಿಂದ ಮುಕ್ತವಾಗುವುದು” ಪ್ರಸಕ್ತ ವರ್ಷದ ಧ್ಯೇಯವ್ಯಾಖ್ಯವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರದ ದಿನಾಚರಣೆಯನ್ನು ಪರಿಸರದ ಜಾಗೃತಿ ಮತ್ತು ಪರಿಸರ ಸಂಕ್ಷಣೆಗಾಗಿ ಆಚರಿಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮೂಡಿಸಿ ಪರಿಸರ ಹಾಳಾಗದಂತೆ ಜಾಗೃತಿ ವಹಿಸುವುದು ಮುಖ್ಯವಾಗಿದ್ದು, ಪರಿಸರ ಸಂರಕ್ಷಣೆಗಾಗಿ ವಿವಿಯ ಆವರಣದಲ್ಲಿ 50 ಸಾವಿರ ಮರಗಳನ್ನು ನೆಡಲಾಗುವುದು ಎಂದು ಹೇಳಿದರು. ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಮ್. ಸಾಲಿ ಮಾತನಾಡಿ, ಪರಿಸರವು ನಮ್ಮ ಗುರುವಾಗಿದೆ. ಪರಿಸರವನ್ನು ನಿರ್ಮಾಣ ಮಾಡುವ ಜವ್ದಾರಿ ನಮ್ಮಲ್ಲಿದೆ. ಪರಿಸರ ಸಂರಕ್ಷಣೆ ನಮ್ಮಿಂದಲೇ ಪ್ರಾರಂಭವಾಗಬೇಕು. ಪ್ಲಾಸ್ಟಿಕ್ ನಿಭಾಯಿಸುವ ಪರ್ಯಾಯ ಯೋಜನೆಯನ್ನು ರೂಪಿಸಿಕೊಂಡು ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಿ ಆರೋಗ್ಯಕರ ಭವಿಷ್ಯವನ್ನು ರೂಪಿಸಬಹುದಾಗಿದೆ ಎಂದರು. ಶುದ್ಧ ವಿಜ್ಞಾನ ನಿಕಾಯದ ಡೀನರಾದ ಡಾ.ಶಶಿಕಾಂತ ಮಜಗಿ ಮಾತನಾಡಿ, ನಮ್ಮ ದೇಹದ ಕಣ ಕಣದಲ್ಲೂ ಪ್ಲಾಸ್ಟಿಕ್ ಅಂಶಗಳಿವೆ. ಮೈಕ್ರೋಪ್ಲಾಸ್ಟಿಕ್ಗಳ ನಿರ್ವಹಣೆಯು ಇಂದು ಸವಾಲಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಜ್ಞಾನದ ಜೊತೆಗೆ ಪರಿಸರದ ಕಾಳಜಿಯನ್ನು ವಹಿಸಿಸುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ತಿಳಿಸಿದರು. ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾದ ಡಾ. ನಾಗಭೂಷಣ್ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಹಾಗೂ ನಿರ್ವಹಣೆ ಕುರಿತು ಜಾಗೃತಿ ಹೊಂದುವು ಇಂದು ಅನಿವಾರ್ಯವಾಗಿದೆ. ಯಾವುದೆ ಪ್ಲಾಸ್ಟಿಕ್ ಬಳಸಬೇಕಾದರೆ ಹಲವು ಭಾರಿ ಯೋಚಿಸಿ ಬಳಸಿ ಎಂದರು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಜೀವ ವಿಜ್ಞಾನ ಕಟ್ಟಡ ಮುಂಭಾಗದಲ್ಲಿ ಸಸಿ ನೆಡಲಾಯಿತು. ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ವಾಚನ ಮಾಡಿದರು. ಈ ಸಂದರ್ಭದಲ್ಲಿ ವಿವಿಯ ಸಿಂಡಿಕೇಟ್ ಸದಸ್ಯರಾದ ರಮೇಶ ಸವದಿ, ಪ್ರಾಣಿಶಾಸ್ತ್ರ ವಿಭಾಗದ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.