ಆಶೀರ್ವಾದ: ದ್ವಿತೀಯ ಪಿ.ಯುಸಿ ವಿದ್ಯಾರ್ಥಿಗಳಿಗೆ ಪಾದಪೂಜಾ ಕಾರ್ಯಕ್ರಮ
ಶ್ರೀರಾಮನಗರ: 12: ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಿ ಯು ಕಾಲೇಜಿನಲ್ಲಿ 2024-25ನೆಯ ಸಾಲಿನ 11ನೆಯ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಾಗೂ 12ನೆಯ ತರಗತಿಯ 529 ವಿದ್ಯಾರ್ಥಿಗಳಿಂದ ಅವರ ತಂದೆ ತಾಯಿಗಳಿಗೆ ‘ಪಾದಪೂಜಾ’ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅವರು ಸ್ವಾವಲಂಬಿ ವಿದ್ಯಾರ್ಥಿ- ಜವಾಬ್ದಾರಿಯುತ ಶಿಕ್ಷಣ ಎಂಬ ಧ್ಯೇಯದೊಂದಿಗೆ ನಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, ಜಾಗತಿಕ ಮಟ್ಟಕ್ಕೆ ಸರಿ ಸಮಾನವಾದ ಎಲ್ಲಾ ಶೈಕ್ಷಣಿಕ ಸೌಲಭ್ಯ ಮತ್ತು ಸಂಪನ್ಮೂಲಗಳನ್ನು ಶಾಲೆಯಲ್ಲಿ ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ಉನ್ನತವಾದ ಸಾಧನೆಯನ್ನು ಗೈಯಬೇಕು. ಅದೇ ರೀತಿ ನಮ್ಮ ನಾಡು ಉತ್ತಮ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದು, ವಿದ್ಯಾರ್ಥಿಗಳೆಲ್ಲರೂ ಈ ಹಂತದಿಂದಲೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿ, ಮಕ್ಕಳಲ್ಲಿ “ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ” ಎಂಬ ಸಂಸ್ಕಾರವನ್ನು ನಾವೆಲ್ಲರೂ ಬೆಳೆಸಬೇಕಾಗಿದ್ದು, ತಂದೆ ತಾಯಿಗಳನ್ನು ಪೂಜಿಸುವ, ಗೌರವಿಸುವ ಮನೋಭಾವವನ್ನು ಮೂಡಿಸಲು ಈ ಪಾದಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ತಂದೆ ತಾಯಿಗಳನ್ನು, ಗುರುಹಿರಿಯರನ್ನು ಗೌರವಿಸುವ ಮೂಲಕ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅದ್ಯಕ್ಷರು, ಹಾಗೂ ಮಾಜಿ ಸಚಿವ ಅಮರೆಗೌಡ ಪಾಟೀಲ್ ಬಯ್ಯಾಪುರ ಅವರು ಮಾತನಾಡಿ, ಶಿಕ್ಷಣದ ಮಹತ್ವವನ್ನು ತಿಳಿಸಿ, ಶಿಕ್ಷಣ ಕ್ಷೇತ್ರಕ್ಕೆ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರೇಷ್ಠ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು, ಇದಕ್ಕಾಗಿ ಸತತವಾದ ಪರಿಶ್ರಮವನ್ನು ಪಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಪ್ರಮುಖ ಪಾತ್ರವನ್ನು ವಹಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಹಾಗೂ ಸೇವೆಯನ್ನು ಸಲ್ಲಿಸುತ್ತಿರುವ ಸಂಸ್ಥೆಯನ್ನು ಹಾಗೂ ಸಂಸ್ಥೆಯ ಅಧ್ಯಕ್ಷರ ಕಾರ್ಯವನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಎಂಬುವುದು ಇಂದಲ್ಲ ನಾಳೆ ಫಲಕೊಡುವ ಅಂಶವಾಗಿದೆ ಹಾಗೂ ಶಿಕ್ಷಣವು ಜಗತ್ತನ್ನು ಬದಲಿಸಲು ಬಳಸಬಹುದಾದ ಅತ್ಯಂತ ಶಕ್ತಿಯುತ ಏಕೈಕ ಅಸ್ತ್ರ ಎಂಬ ನೆಲ್ಸನ್ ಮಂಡೆಲಾ ಅವರ ನುಡಿಯನ್ನು ಸ್ಮರಿಸುತ್ತ ಇಂತಹ ಶಿಕ್ಷಣವನ್ನು ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಭಕ್ತಿಯಿಂದ ಪಡೆದು ಸಾಧನೆ ಮಾಡಬೇಕೆಂದು ತಿಳಿಸಿದರು.
ತದನಂತರ ಕಳೆದ ವರ್ಷ 12ನೆಯ ತರಗತಿಯಲ್ಲಿ ಪಿ.ಯು ವಿಜ್ಞಾನ ವಿಭಾಗದಲ್ಲಿ 590 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ 8 ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿಗಳ ಬಹುಮಾನ ಮತ್ತು 580ಕ್ಕೂ ಹೆಚ್ಚು ಅಂಕಗಳನ್ನು ಪಡೆದ 98 ವಿದ್ಯಾರ್ಥೀಗಳಿಗೆ ತಲಾ 50 ಸಾವಿರ ರೂಪಾಯಿಗಳ ಬಹುಮಾನವನ್ನು ವಿತರಿಸಿ ಅವರ ತಂದೆ ತಾಯಿಗಳನ್ನು ಸನ್ಮಾನಿಸಲಾಯಿತು. ಅದೇರೀತಿ 2024ನೆಯ ಸಾಲಿನಲ್ಲಿ ಎಮ್ಬಿಬಿಎಸ್, ಜೆಇಇ ಮತ್ತು ಸಿಇಟಿ ಯಲ್ಲಿ ಉನ್ನತ ಶ್ರೇಣಿಯನ್ನು ಪಡೆದ ನಮ್ಮ ಕಾಲೇಜಿನವಿದ್ಯಾರ್ಥಿಗಳು ಮತ್ತು ಅವರ ಪಾಲಕರನ್ನೂ ಕೂಡ ಸನ್ಮಾನಿಸಲಾಯಿತು.
ವಾಣಿಜ್ಯೋದ್ಯಮಿ ಡಿ. ವೆಂಕಟಪತಿ ರಾಜು, ರೈತ ಮುಖಂಡರಾದ ದೊಣ್ಣೆಪುಡಿ ರವೀಂದ್ರ ಪ್ರಸಾದ್, ಶೇಖರ್, ಶ್ರೀರಾಮನಗರದ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಕರಟೂರಿ ಶ್ರೀನಿವಾಸ್, ಶಾಲೆಯ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ, ಶಾಲೆಯ ಆಡಳಿತ ನಿರ್ದೇಶಕ ಹೆಚ್. ಕೆ ಚಂದ್ರಮೋಹನ್, ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರೇಶ್. ವೈ, ಕಾಲೇಜ್ಗಳ ನಿರ್ದೇಶಕರು ಹಾಗೂ ಪ್ರಾಂಶುಪಾಲ ಕೆ.ಎಸ್. ಮಲ್ಲಿಕಾರ್ಜುನ್, ಎ. ಉಮಾಶಂಕರ್ ರಾವ್, ಟಿ. ಜಗನ್ನಾಥ್ ರಾವ್, ಪದವಿ ಕಾಲೇಜಿನ ಪ್ರಾಂಶುಪಾಲ ಡಿ. ಎಮ್. ಅಭಿಷೇಕ್, ಶೈಕ್ಷಣಿಕ ಮುಖ್ಯಸ್ಥ ಕೃಷ್ಣವೇಣಿ, ಕ್ಯಾಂಪಸ್ ಮ್ಯಾನೇಜರ್ ಜಿ. ನಾಗೇಶ್ವರ್ರಾವ್, ಶಾಲೆಯ ಪ್ರಾಂಶುಪಾಲ ಸುಭದ್ರಾ ದೇವಿ, ಎಲ್ಲಾ ಪಾಲಕರು, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.