ಪರಿಸರ ರಕ್ಷಣೆ ಮನೆ ಸಂರಕ್ಷಣೆಗಿಂತ ಮುಖ್ಯ: ಶ್ರೀಕಾಂತ ಕೆ.ಎಸ್

Environmental protection is more important than home protection: Srikanth K.S.

ಪರಿಸರ ರಕ್ಷಣೆ ಮನೆ ಸಂರಕ್ಷಣೆಗಿಂತ ಮುಖ್ಯ: ಶ್ರೀಕಾಂತ ಕೆ.ಎಸ್ 

ವಿಜಯಪುರ 05: ಮನೆಗೊಂದು ಮರ ನೀಗುವುದು ಬರ ಎನ್ನುವುದನ್ನು ಅರಿತುಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ಸಹ ಮರ ಬೆಳೆಸುವಲ್ಲಿ ನಿರತನಾಗಿದ್ದೇ ಆದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ ಶುದ್ಧವಾದ ಆಮ್ಲಜನಕ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಮನೆಯನ್ನು ರಕ್ಷಿಸುವುದು ಎಷ್ಟು ಮುಖ್ಯವಾಗುತ್ತದೆಯೋ ಪರಿಸರವನ್ನು ರಕ್ಷಣೆ ಮಾಡುವುದು ಅದಕ್ಕಿಂತಲೂ ಮುಖ್ಯವಾಗಿರುತ್ತದೆ. ಅದನ್ನು ನಾವೆಲ್ಲರೂ ತಪ್ಪದೇ ಪಾಲನೆ ಮಾಡೋಣ ಎಂದು ಪ್ರಾಂಶುಪಾಲ ಶ್ರೀಕಾಂತ ಕೆ.ಎಸ್ ಹೇಳಿದರು. 

ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಸಿ ನೆಟ್ಟು ಮಾತನಾಡಿದ ಅವರು; ಇಂದು ದೇಶದ ದೊಡ್ಡ ದೊಡ್ಡ ನಗರಗಳು ಕಾಂಕ್ರಿಟ್ ಕಾಡುಗಳಾಗಿ ಬೆಳೆಯುತ್ತಿವೆಯೇ ಹೊರತು ಆರೋಗ್ಯಕರ ನಗರಗಳಾಗಿ ನಿರ್ಮಾಣವಾಗುತ್ತಿಲ್ಲ. ದೆಹಲಿಯಂತಹ ರಾಷ್ಟ್ರ ರಾಜಧಾನಿಯೂ ಇಂದು ಕಲುಶಿತ ವಾತಾವರಣದ ಗೂಡಾಗಿ ಮಾರ​‍್ಪಟಟಿದೆ. ಶುದ್ಧ ಗಾಳಿಯನ್ನು ಉಸಿರಾಡುವುದು ಸಹ ಕಷ್ಟಕರವಾಗಿದೆ. ಹೀಗಾಗಿ ಅಲ್ಲಿನ ಜನಗಳು ಕಷ್ಟ ಪಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾದ ಅನಿವಾರ್ಯತೆ ನಮಗೆಲ್ಲ ಎದುರಾಗಿದ್ದು ಅದಕ್ಕನುಗುಣವಾಗಿ ಪರಿಸರ ಸಂರಕ್ಷಣೆಯ ಜೊತೆಗೆ ಅರಣ್ಯ ವರ್ಧನೆಗೂ ನೆರವಾಗಬೇಕಿದೆ ಎಂದು ಹೇಳಿದರು. 

ಈ ಬಾರಿ ನಡೆದ ಐಪಿಎಲ್ ಪಂದ್ಯಾವಳಿಗಳಲ್ಲಿ ಒಬ್ಬ ಬೌಲರ್ ರನ್ ರಹಿತವಾದ ಎಸೆತವನ್ನು ಹಾಕಿದರೆ ಅದಕ್ಕೆ ಪ್ರತಿಯಾಗಿ ಐಪಿಎಲ್ ಆಯೋಜಕರು ಹದಿನೆಂಟು ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಯೋಜನೆ ಮಾಡಿದ್ದು ಒಂದು ವಿಶೇಷ. ಇದು ಒಂದು ವಿನೂತನವಾದ ಪ್ರಯೋಗವಾಗಿದ್ದು ನಾವು ಸಹ ಇಂಥಹ ಐಡಿಯಾಗಳನ್ನು ಬಳಸಿಕೊಂಡು ನಮ್ಮ ಸುತ್ತ ಮುತ್ತಲು ಬಳಕೆಯಾಗದೇ ಉಳಿದಿರುವ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸುವ ಕಾಯಕ ಮಾಡಬೇಕು. ವಾತಾವರಣದಲ್ಲಿ ಅತಿಯಾಗಿ ದೊರೆಯುತ್ತಿರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸಿ ಶುದ್ಧ ಆಮ್ಲಜನಕ ಸಿಗುವಂತೆ ಹೆಚ್ಚು ಹೆಚ್ಚು ಹಸಿರುಮಯ ವಾತವರಣವನ್ನು ನಿರ್ಮಾಣ ಮಾಡಬೇಕು. ಅದರ ಜೊತೆಯಲ್ಲಿ ಪರಿಸರವನ್ನು ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಸಹ ಕಡಿಮೆ ಮಾಡಿ ಪರಿಸರದ ಜೊತೆಯಲ್ಲಿ ಪಶುಗಳ ಜೀವವನ್ನು ಉಳಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು. ಅದರಲ್ಲೂ ವಿದ್ಯಾರ್ಥಿಳು ಇದರ ಮಹತ್ವವನ್ನು ತಾವೂ ಅರಿತುಕೊಂಡು ಇನ್ನೊಬ್ಬರಿಗೂ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಇತ್ತೀಚಿನ ಸುದ್ದಿ