ಶ್ರೀಗಂಧವನ್ನು ಪ್ರತಿಯೊಬ್ಬ ರೈತ ಬೆಳೆದಲ್ಲಿ ಆತನ ಬದುಕು ಬಂಗಾರ: ಕವಿತಾ ಮಿಶ್ರಾ

Every farmer who grows sandalwood will live a golden life: Kavita Mishra

ಶ್ರೀಗಂಧವನ್ನು ಪ್ರತಿಯೊಬ್ಬ ರೈತ ಬೆಳೆದಲ್ಲಿ ಆತನ ಬದುಕು ಬಂಗಾರ: ಕವಿತಾ ಮಿಶ್ರಾ 

ಮಹಾಲಿಂಗಪುರ 05: ವಿಶ್ವದಲ್ಲಿ ಅತಿ ಹೆಚ್ಚು ಎಣ್ಣೆ ಅಂಶವಿರುವ ನಾಡು ನಮ್ಮದು. ಆದ್ದರಿಂದ ಕರ್ನಾಟಕದ ಹೊನ್ನ ಕಳಸ ಶ್ರೀಗಂಧವನ್ನು ಪ್ರತಿಯೊಬ್ಬ ರೈತ ಬೆಳೆದಲ್ಲಿ ಆತನ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಬದುಕು ಬಂಗಾರವಾಗುತ್ತದೆ ಎಂದು ರಾಯಚೂರಿನ ಕವಿತಾಳದ ಶ್ರೀಗಂಧ ಕೃಷಿರಾದ ಕವಿತಾ ಮಿಶ್ರಾ ಹೇಳಿದರು. 

ಸ್ಥಳೀಯ ಪ್ರಗತಿಪರ ರೈತ ಅಶೋಕಗೌಡ ಪಾಟೀಲ್ ಅವರ ತೋಟದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ ಹಸಿರು ಹಬ್ಬ’ ಕೃಷಿ ಅರಣ್ಯ ವಿಚಾರ ಸಂಕೀರ್ಣದಲ್ಲಿ ಉಪನ್ಯಾಸ ನೀಡಿದ ಅವರು, ಶ್ರೀಗಂಧ ಮಳೆಯಾಧಾರಿತ ಬೆಳೆ, ಆಸುಪಾಸಿನಲ್ಲಿ ಬೆಳೆದ ಕಸವೇ ಅದಕ್ಕೆ ಗೊಬ್ಬರ, ಖರ್ಚು ವೆಚ್ಚ ಕಡಿಮೆ ಮತ್ತು ಕಾರ್ಮಿಕರ ಅವಶ್ಯಕತೆಯೇ ಇಲ್ಲ.ಕೇವಲ ಅದರ ಪಾಲನ ಪೋಷಣೆಗೆ ಕಣ್ಗಾವಲಿನ ಅಗತ್ಯತೆ ಮಾತ್ರ ಇದೆ. ಪ್ರಸ್ತುತ 1 ಕೆಜಿ ಶ್ರೀಗಂಧದ ಬೆಲೆ ಮಾರುಕಟ್ಟೆಯಲ್ಲಿ 15 ರಿಂದ 20 ಸಾವಿರ ಇದೆ. 

ಹೀಗೆ ಮಾಡಿದಲ್ಲಿ 10 ರಿಂದ 15 ವರ್ಷಗಳಲ್ಲಿ ರೈತರು 1 ಎಕ್ರೆ ಭೂಮಿಯಿಂದ ಕನಿಷ್ಠ 3 ರಿಂದ 4 ಕೋಟಿ ಹಣ ಗಳಿಸಬಹುದು. ಈ ರೀತಿ ಆಸ್ಟ್ರೇಲಿಯಾ ಜಗತ್ತಿಗೆ ವಿವಿಧ ತಳಿಯ ಶ್ರೀಗಂಧ ರು​‍್ತ ಮಾಡುತ್ತಿದೆ.ನಮ್ಮ ರೈತರು ಸಹಿತ ಕೆಂಪು ಚಂದನ, ಚೆಂದನ, ಸಾಗವಾನಿ, ಹೆಬ್ಬೇವು ಮತ್ತು ಇನ್ನಿತರ ಅರಣ್ಯ ಕೃಷಿ ಮರಗಳನ್ನು ಬೆಳೆದು ಕೋಟಿ ಕೋಟಿ ಹಣ ಗಳಿಸಬೇಕು ಎಂದರು. 

ತಮ್ಮ 8 ಎಕ್ರೆ 10 ಗುಂಟೆ ಹೊಲಕ್ಕೆ 1 ಇಂಚು ನೀರು ಪೂರೈಕೆಯಲ್ಲಿ 2.5 ಸಾವಿರ ಶ್ರೀಗಂಧ, 1200 ಮಾವು, 600 ಪೇರಲ ಮತ್ತು ಸೀತಾಫಲ, 100 ಬೆಟ್ಟದ ನೆಲ್ಲಿ, ಹುಣಸೆ, ಕರಿಬೇವು ಮರಗಳ ಕೃಷಿಯೊಂದಿಗೆ ಕುರಿ, ಕೋಳಿ, ಜೇನು ಮತ್ತು ಹೈನುಗಾರಿಕೆ ಮಾಡುತ್ತ ನಾವು ಸಾಕಷ್ಟು ಆರ್ಥಿಕ ಲಾಭ ಪಡೆಯುತ್ತಿದ್ದೇವೆ ತಾವು ಪಡೆದುಕ್ಕೊಳ್ಳಬೇಕು ಎಂದು ತಮ್ಮ ಕೃಷಿ ಯಶೋಗಾಥೆಯನ್ನು ತಿಳಿಸಿದರು.  

ಈ ವಿಶ್ವ ಪರಿಸರ ದಿನಾಚರಣೆ ಎಲ್ಲರಿಗೂ ಶುಭ ತರಲಿ ಮತ್ತು ಸಮಗ್ರ ಬೇಸಾಯ ದೊಂದಿಗೆ ಅರಣ್ಯ ಕೃಷಿ ಪದ್ಧತಿಯು ಎಲ್ಲರ ಉಸಿರಾಗಲಿ ಎಂದು ಹೇಳುತ್ತಾ, ಸ್ಥಳೀಯ ಪ್ರಗತಿಪರ ರೈತ ಅಶೋಕಗೌಡ ಪಾಟೀಲ್ ಅವರ ಶ್ರೀಗಂಧ ಕೃಷಿಯು ಲಾಭ ತರಲಿ ಎಂದು ಶುಭ ಹಾರೈಸಿದರು. 

ಇನ್ನೋರ್ವ ಅತಿಥಿ ಶ್ರೀಗಂಧ ಕೃಷಿಕರಾದ ಕುಷ್ಟಗಿಯ ರಮೇಶ ಬಲ್ಲುಟಗಿ ಮಾತನಾಡಿ, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು. ಈ ವಿದ್ಯೆಯನ್ನು ವೈಜ್ಞಾನಿಕವಾಗಿ ಒರೆ ಹಚ್ಚಿ ರೈತರು ಬೆಳೆ ತೆಗೆಯುವ ಮುನ್ನ ಲಾಭದಾಯಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.ಜಗತ್ತಿನಲ್ಲಿ ಉತ್ತಮ ಆರ್ಥಿಕ ಸಾಂಪ್ರದಾಯಿಕ ಬೆಳೆ ಯಾವುದಾದರೂ ಇದ್ದರೆ ಅದು ಶ್ರೀಗಂಧ ಮರಗಳ ಕೃಷಿ ಎಂದು ನುಡಿದರು. 

ನಂತರ ಶಾಸಕ ಸಿದ್ದು ಸವದಿ ಮಾತನಾಡಿದರು. ಕವಿತಾ ಮಿಶ್ರಾ ಮತ್ತು ರಮೇಶ್ ಬಲ್ಲುಟಗಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ರೈತ ಅಶೋಕಗೌಡ ಪಾಟೀಲ್ ವಹಿಸಿದ್ದರು. ವೇದಿಕೆ ಮೇಲೆ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷರಾದ ಬಸನಗೌಡ ಪಾಟೀಲ್, ಮಹಾಂತೇಶ ಹಿಟ್ಟಿನಮಠ, ಶಂಕರಗೌಡ ಪಾಟೀಲ, ಗಿರಿಶಗೌಡ ಪಾಟೀಲ್, ನಾಗಪ್ಪ ಅಂಬಿ, ಶ್ರೀಕಾಂತ ಗುಜ್ಜನ್ನವರ,ಮಲ್ಲನ್ನಗೌಡ ಪಾಟೀಲ್, ರಾಮಣ್ಣ ಸಂಕ್ರಟ್ಟಿ, ಈರಣ್ಣ ದಿನ್ನಿಮನಿ, ಬಸವರಾಜ ಹಿಟ್ಟಿನಮಠ, ಶಿವನಗೌಡ ಪಾಟೀಲ, ಜಿ ಎಸ್‌. ಗೊಂಬಿ, ಬಾಲಚಂದ್ರ ರೂಗಿ, ಮಹಾಲಿಂಗಪ್ಪ ಕೌಜಲಗಿ, ಪ್ರಕಾಶ ಅರಳಿಕಟ್ಟಿ ಇನ್ನೂ ಅನೇಕರಿದ್ದರು. ಪತ್ರಕರ್ತರಾದ ನಾರನಗೌಡ ಉತ್ತಂಗಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.