11ಜನ ಅಭಿಮಾನಿಗಳ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಶ್ರೀಶೈಲಗೌಡ
ಸಿಂದಗಿ 06: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ನಡೆದ ಕಾಲ್ತುಳಿತದಲ್ಲಿ ಸುಮಾರು 11ಜನ ಅಭಿಮಾನಿಗಳು ಮೃತಪಟ್ಟಿದ್ದು, ಇದಕ್ಕೆಲ್ಲ ಸರ್ಕಾರದ ಬೇಜವಾಬ್ದಾರಿ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಪಾಲ್ಗಾಂವನಲ್ಲಿ ನಡೆದ ದಾಳಿಯ ಕುರಿತು ಭದ್ರತೆ ವೈಫಲ್ಯ ಮತ್ತು ಗುಪ್ತಚರದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಎತ್ತಿತ್ತು. ಈಗ ಜನರೇ ಸ್ಥಾಪಿತ ಸರ್ಕಾರದಲ್ಲಿ ಇಂಟೆಲಿಜೆನ್ಸ್ ಎನ್ನುವ ಪಡೆ ಕೆಲಸ ಮಾಡುವ ಹಾಗೆ ಕಾಣುತ್ತಿಲ್ಲ. 18ವರ್ಷದ ಬಳಿಕ ಸಿಕ್ಕ ಆರ್ಸಿಬಿ ಗೆಲುವಿನ ಸಂಭ್ರಮವನ್ನು ಕಸಿದುಕೊಂಡ ಅಜ್ಞಾನ ಸರ್ಕಾರ ಮತ್ತು ಅಸಡ್ಡೆ ಕ್ರಿಕೆಟ್ ಕಂಪನಿ. ಆರ್ಸಿಬಿ ತಂಡಕ್ಕಿರುವ ಅಭಿಮಾನಿಗಳ ತೀವ್ರತೆ ಗೊತ್ತಿದ್ದರೂ ಸಹ ಗೃಹ ಸಚಿವರಿಗೆ ಗುಪ್ತಚರದ ಮಾಹಿತಿ ದೊರೆತ್ತಿಲ್ಲವೇ, ಇದು ಭದ್ರತೆ ವೈಫಲ್ಯ ಅಲ್ಲವೇ, ಆತುರದಲ್ಲಿ ವಿಜಯೋತ್ಸವ ಮಾಡಿದ ಸರ್ಕಾರ ಮತ್ತು ಆರ್ಸಿಬಿ ಕ್ರಿಕೆಟ್ ವ್ಯವಸ್ಥಾಪಕರು ನೇರ ಹೊಣೆಗಾರರು. ರಾಜ್ಯ ಸರ್ಕಾರ ಸೂಕ್ತ ಬಂದೋಬಸ್ತ್ ಮಾಡದೇ ಸಂಭ್ರಮಾಚರಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೇ ಇಂತಹ ಕಾರ್ಯಕ್ರಮ ಕೈಗೆತ್ತಿಕೊಂಡು ಅನುಮತಿ ನೀಡಿದ್ದು ದೊಡ್ಡ ತಪ್ಪು. ಕ್ರಿಕೆಟ್ ಅಭಿಮಾನಿಗಳ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊರಬೇಕು. ಸರ್ಕಾರ ಎಲ್ಲ ಕುಟುಂಬಗಳಿಗೆ ತಲಾ ರೂ.25ಲಕ್ಷ ಪರಿಹಾರ ಬಿಡುಗಡೆಗೊಳಿಸಬೇಕು. ಹಾಗೆಯೇ ಗಾಯಗೊಂಡವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.