ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವ ಸಭೆ
ಗದಗ 13: ರೋಣ ಪಟ್ಟಣದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಉದ್ಘಾಟನೆಗೊಳುವ ವಿವಿಧ ಅಭಿವೃದ್ಧಿ ಶಿಲನ್ಯಾಸ ಕಾಮಗಾರಿಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸೂಚಿಸಿದರು. ರೋಣ ತಾಲೂಕಿನ ತಹಶಿಲ್ದಾರ ಕಚೇರಿಯ ಕೋರ್ಟ್ ಹಾಲ್ ನಲ್ಲಿ ಶುಕ್ರವಾರ ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಪೂರ್ವ ಸಿದ್ಧತಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವ್ಯವಸ್ಥಿತವಾಗಿ ಯಾವುದೇ ಲೋಪಗಳಿಲ್ಲದಂತೆ ಕಾರ್ಯಕ್ರಮವನ್ನು ಆಯೋಜಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಮಿತಿಯವರು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು ಈಗಾಗಲೇ ಜಿಲ್ಲಾ ಹಾಗು ತಾಲೂಕ ಮಟ್ಟದ ಅಧಿಕಾರಿಗಳಿಗೆ ಕಾರ್ಯವನ್ನು ಹಂಚಿಕೆ ಮಾಡಲಾಗಿದೆ ಅದರಲ್ಲಿ ಯಾವುದಾದರು ತೊಂದರೆ ಇದ್ದರೆ ಅದನ್ನು ಈಗಲೇ ತಿಳಿಸಿ ಪರಿಹಾರ ಕಂಡುಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಯೋಜನೆಯ ಮಾಹಿತಿ ಒಳಗೊಂಡ ಸ್ಟಾಲ್ ಗಳನ್ನು ತೆರೆದು ಯೋಜನೆಗಳ ಜಾಗೃತಿ ಪ್ರದರ್ಶಿಸಿ ಸರ್ಕಾರದಿಂದ ನೀಡಿರುವ ಸವಲತ್ತುಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಲು ಪಿಡ್ಲ್ಯೂಡಿ ಅವರು ರಸ್ತೆಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ ಹಾಗೇ ವೇದಿಕೆ ನಿರ್ವಹಣೆ, ಹೆಲಿಪ್ಯಾಡ್ ನಿರ್ವಹಣೆ, ಅತಿಥಿಗಳನ್ನು ಸ್ವಾಗತಿಸುವ ಕಾರ್ಯ ಸರಿಯಾಗಿ ನಿರ್ವಹಣೆ ಆಗಬೇಕು ಎಂದರು.
ವೇದಿಕೆಯಲ್ಲಿ ಎಲ್ ಇ ಡಿ ಸ್ಕ್ರೀನ್, ಧ್ವನಿವರ್ಧಕ ಉಪಕರಣಗಳ ಸ್ಥಿತಿಗತಿಯನ್ನು ಈಗಲೇ ಪರೀಶೀಲಿಸಿಕೊಳ್ಳಬೇಕು ಮತ್ತು ಸಾರ್ವಜನಿಕರಿಗೆ ಗೊಂದಲವಾಗದಂತೆ ಕ್ರಮ ವಹಿಸಲು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಉತ್ತಮ ಊಟದ ವ್ಯವಸ್ಥೆ ಆಗಬೇಕು ಅದರಲ್ಲಿ ಮಹಿಳೆಯರಿಗೆ ಹಾಗು ಪುರುಷರಿಗೆ ಪ್ರತ್ಯೇಕ ಕೌಂಟರ್ ಗಳನ್ನು ಮಾಡಿ ಯಾವುದೇ ರೀತಿಯ ಅಸ್ತವ್ಯಸ್ತ ಆಗದಂತೆ ನೋಡಿಕೊಳ್ಳಬೇಕು ಹಾಗು ಅಧಿಕ ಸ್ಥಳಗಳಲ್ಲಿ ಕೈ ತೊಳೆಯುವ ಹಾಗು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ನಿಯೋಜಿತ ಅಧಿಕಾರಿಗಳಿಗೆ ಸೂಚಿಸಿದರು.
ಅಗ್ನಿಶಾಮಕ ದಳವು ಹರ್ಲಾಪುರ ಗ್ರಾಮ, ಹಾಗು ರೋಣದಲ್ಲಿ ಜರುಗುವ ಕಾರ್ಯಕ್ರಮದ ಹತ್ತಿರ ಅಗ್ನಿಶಾಮಕ ವಾಹನ ಸೇರಿದಂತೆ ಸಂಬಂಧಿಸಿದ ವ್ಯವಸ್ಥೆ ಯನ್ನು ನೋಡಿಕೊಳ್ಳಬೇಕು, ಪ್ರವಾಸಿ ಮಂದಿರಗಳನ್ನು ಸ್ವಚ್ಛ ಗೊಳಿಸಿ ಬಂದ ಅತಿಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ರೋಣ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಬೇಕಾದ ಸಕಲ ಸಿಧ್ಧತೆಯನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ತಯಾರಿ ಮಾಡಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಎಲ್ಲರು ಶ್ರಮಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ ಕಾರ್ಯಕ್ರಮದ ವಿವಿಧ ಸಮಿತಿಯಲ್ಲಿರುವ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳ ಸಹಕಾರದೊಂದಿಗೆ ತಮ್ಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು, ಹಾಗೂ ವಿವಿಧ ಇಲಾಖೆಯ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡುವವರಿಗೆ ಮುಂಚಿತವಾಗಿ ತಿಳಿಸಬೇಕು ಎಂದು ನುಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ಬಿ ಸಂಕದ ಮಾತನಾಡಿ ಕಾರ್ಯಕ್ರಮದಲ್ಲಿ ಬರುವ ಎಲ್ಲಾ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು, ಹಾಗು ಕಾರ್ಯಕ್ರದ ಬಂದುಬಸ್ತ ವ್ಯವಸ್ಥೆಯನ್ನು ಕಲ್ಪಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಮಿಥುನಗೌಡ ಪಾಟೀಲ, ಎಸಿ ಗಂಗಪ್ಪ, ತಹಶಿಲ್ದಾರಾದ ನಾಗರಾಜ ಕೆ, ಎರಿಸ್ವಾಮಿ, ಪುರಸಭೆ ಮುಖ್ಯಧಿಕಾರಿಗಳು, ಅಧಿಕಾರಿಗಳಾದ ಮಹೇಶ ಪೋತದಾರ ರವಿ ಗುಂಜಿಕರ, ಶರಣು ಗೋಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ತಾರಾಮಣಿ, ಕೊಟ್ರೇಶ್ ವಿಭೂತಿ, ರುದ್ರಗೌಡ ಸೇರಿದಂತೆ ಜಿಲ್ಲಾ, ತಾಲ್ಲೂಕುಗಳ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.