ಒಳ ಮೀಸಲಾತಿ ಸಮೀಕ್ಷೆ : ಮೇ 29ರ ವರೆಗೆ ವಿಸ್ತರಣೆ ವಿವಿಧೆಡೆ ಡಿಸಿ ಜಾನಕಿ ಭೇಟಿ, ಸಮೀಕ್ಷೆ ಕಾರ್ಯ ಪರೀಶೀಲನೆ
ಬಾಗಲಕೋಟೆ 25: ಜಮಖಂಡಿ ತಾಲೂಕಿನ ವಿವಿಧ ಮತಗಟ್ಟೆಗಳ ವ್ಯಾಪ್ತಿಯ ಮನೆಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಒಳ ಮೀಸಲಾತಿ ಸಮೀಕ್ಷೆ ಕಾರ್ಯವನ್ನು ಪರೀಶೀಲಿಸಿದರು. ಒಳಮೀಸಲಾತಿ ಜಾರಿಗಾಗಿ ನ್ಯಾ.ಎನ್.ನಾಗಮೋಹನ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ನೈತೃತ್ವದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಹಿನ್ನಲೆಯಲ್ಲಿ ಜಿಲ್ಲೆಯ ಜಮಖಂಡಿ ತಾಲೂಕಿನ ಮತಗಟ್ಟೆ ಸಂಖ್ಯೆ 175, 176, 177 ಮತ್ತು 191 ವ್ಯಾಪ್ತಿಗಳಲ್ಲಿ ಬರುವ ಪರಿಶಿಷ್ಟ ಜಾತಿಯ ಮನೆಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿ ಜನರ ಒಳಮೀಸಲಾತಿ ಸಮೀಕ್ಷೆ ನಡೆಸಿದ ಬಗ್ಗೆ ಪರೀಶೀಲನೆ ನಡೆಸಿದರು. ಒಳ ಮೀಸಲಾತಿ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಮೇ 5 ರಿಂದ ಪ್ರಾರಂಭಿಸಲಾಗಿದ್ದು, ಮನೆ ಮನೆ ಭೇಟಿ ನೀಡಿ ನಡೆಸಲಾಗುತ್ತಿರುವ ಸಮೀಕ್ಷೆಯ ಅವಧಿಯನ್ನು ಮೇ 26 ರಿಂದ 29ರವರೆಗೆ ಆಯೋಗ ವಿಸ್ತರಣೆ ಮಾಡಿದೆ. ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ 3 ದಿನಗಳ ಕಾಲ ಮೇ 30 ರಿಂದ ಜೂನ್ 1 ವರೆಗೆ ಮರು ನಿಗದಿಪಡಿಸಲಾಗಿದೆ. ಆನ್ಲೈನ್ ಮೂಲಕ ಸ್ವಯಂ ಘೋಷಣೆ ಜೂನ್ 1 ವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪರಿಶಿಷ್ಡ ಜಾತಿಯ ಮನೆಗಳು 80232, ಸದಸ್ಯರು 314369 ಮತ್ತು ಇತರೆ 390297 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ವೇಳಾ ಪಟ್ಟಿಯಂತೆ ಗಣತಿದಾರರು, ಮೇಲ್ವಿಚಾರಕರು ಗಣತಿ ಕಾರ್ಯವನ್ನು ಮುಂದುವರಿಸಲು ಸೂಚಿಸಲಾಗಿದೆ. ಸಮೀಕ್ಷೆಗೆ ಬೇಕಾದ ಅಗತ್ಯ ಮಾಹಿತಿಯನ್ನು ಒದಗಿಸಿ ಸಮೀಕ್ಷೆದಾರರಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಿದರು. ಸಮೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆ 08354-235526, 9480843021ಗೆ ಕರೆ ಮಾಡಿ ಮಾಹಿತ ಪಡೆಯುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಭೇಟಿ ಸಮಯದಲ್ಲಿ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.