36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆಯ ಕಾರ್ಯಕ್ರಮಕ್ಕೆ ಚಾಲನೆ

Launch of 36th National Road Safety Month programme

36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆಯ ಕಾರ್ಯಕ್ರಮಕ್ಕೆ ಚಾಲನೆ                               

ವಿಜಯಪುರ ಜ.23: ದೇಶದಲ್ಲಿ ಮಹಾಮಾರಿ ಕೊರೊನಾ ಬಂದಂತಹ ಸಂದರ್ಭದಲ್ಲಿ ಆದ ಸಾವು ನೋವುಗಳಿಗಿಂತ ರಸ್ತೆ ಅಪಘಾತಗಳಿಂದ ಸಂಬವಿಸುತ್ತಿರುವ ಸಾವು ನೋವುಗಳ ಪ್ರಮಾಣವು ಹೆಚ್ಚಾಗುತ್ತಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಕಳವಳ ವ್ಯಕ್ತಪಡಿಸಿದರು.  

ಗುರುವಾರ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆಯ ಕಾರ್ಯಕ್ರಮವನ್ನು ಸಸಿಗೆ ನೀರುನ್ನಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಕೋವಿಡ ಭಯದಿಂದ ಎರಡೆರಡು ಮಾಸ್ಕ್‌ ಧರಿಸುತ್ತಿದ್ದ ಜನರು; ರಸ್ತೆ ಅಪಘಾತದ ಭಯವಿಲ್ಲದೆ ಹೆಲ್ಮೇಟ್ ಧರಿಸದೆ ಬೈಕ್ ಸವಾರರು ತಮ್ಮ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ.  

ದೇಶ ಅಭಿವೃದ್ಧಿಯಾದಂತೆ ರಸ್ತೆಯಲ್ಲಿ ವಾಹನ ದಟ್ಟನೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ರಸ್ತೆ ಸುರಕ್ಷತೆಯನ್ನು ಅಳವಡಿಸಿಕೊಂಡು ವಾಹನ ಚಲಾಯಿಸಬೇಕು. ರಸ್ತೆ ಸುರಕ್ಷತೆಯಲ್ಲಿ ಇಲಾಖೆಗಳ ಜವಾಬ್ದಾರಿ ಅಷ್ಟೇ ಅಲ್ಲದೇ ಸಾರ್ವಜನಿಕರ ಜವಾಬ್ದಾರಿಗಳು ಸಹ ಅಷ್ಟೇ ಮಹತ್ವದಾಗಿದೆ ಎಂದು ರಸ್ತೆ ಸುರಕ್ಷತೆಯನ್ನು ಪಾಲನೆ ಮಾಡುವಂತೆ ಅವರು ಸಾರ್ವನಿಕರಿಗೆ ಕರೆ ನೀಡಿದರು.  

ಈ ಮೊದಲು ರಸ್ತೆ ಅಭಿವೃದ್ಧಿವಿಲ್ಲದೆ ಅಪಘಾತಗಳು ಸಂಬವಿಸುತ್ತಿದ್ದವು. ರಸ್ತೆ ಅಭಿವೃದ್ಧಿ ಹೊಂದಿದ ಮೇಲೆ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಂದ ಈಗ ಹಂಪ್ಸ್‌ ಗಳ ಬೇಡಿಕೆಗಳು ಕೂಡ ಹೆಚ್ಚಾಗಿವೆ.     

ರಸ್ತೆ ನಿಯಮ ಪಾಲನೆ ಮಾಡುವುದರಿಂದ ತಮ್ಮ ಹಾಗೂ ತಮ್ಮ ಕಟುಂಬದ ಜೀವವನ್ನು ಉಳಿಸಬಹುದು. 18 ವರ್ಷ ಒಳಗಿನ ಮಕ್ಕಳಿಗೆ ವಾಹನ ಚಾಲನೆ ಮಾಡದಂತೆ ಪಾಲಕರು ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು.  

ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ರಸ್ತೆ ಸಾರಿಗೆ ಸುರಕ್ಷತಾ ಸಮಿತಿಯ ಕಾರ್ಯದರ್ಶಿಗಳಾದ ಬಿ. ಬಿ. ಜಂಗಮಶೆಟ್ಟಿ ಮಾತನಾಡಿ ಲೋಕೊಪಯೋಗಿ ಇಲಾಖೆಯಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿಯಾದರೂ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.  

ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಸೀಂಬಾಬಾ ಮುದ್ದೇಬಿಹಾಳ ಮಾತನಾಡಿ, ರಸ್ತೆ ಅಪಘಾತಗಳಲ್ಲಿ ಶೇ 85ರಷ್ಟು ಅಪಘಾತಗಳು ಚಾಲಕನ ನಿರ್ಲಕ್ಷ್ಯದಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಚಾಲಕರು ತಾಳ್ಮೆ, ವಿಶ್ರಾಂತಿ, ಜಾಗೃಕತೆಗಳಿಂದ ವಾಹನ ಚಾಲನೆ ಮಾಡಿದಲ್ಲಿ ಅಪಘಾತಗಳು ಕಡಿಮೇ ಆಗುವುದಲ್ಲದೆ; ಆಮದು ಹಾಗೂ ರಫ್ತು ಸರಿಯಾಗಿ ಮಾಡುವುದರ ಮೂಲಕ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಬಹುದು.   

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಮಾತನಾಡಿ ನಮ್ಮ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕರಿಗೆ ಮೇಲಿಂದ ಮೇಲೆ ಅಪಘಾತಗಳ ಕುರಿತು ತರಬೇತಿ ನೀಡಲಾಗುತ್ತಿದೆ. ರಾತ್ರಿ ಚಾಲನೆ ಸಂಬಂದಿಸಿದಂತೆ ಕೂಡಾ ವಿಶೇಷ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಉತ್ತಮ ಸಾಧನೆ ಮಾಡಿದೆ ಎಂದು ಅವರು ಹೇಳಿದರು.  

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಸ್ತೆ ಸುರಕ್ಷತಾ ಸಮಿತಿಯ ಉಪಾಧ್ಯಕ್ಷರಾದ ಶಂಕರ ಮಾರಿಹಳ ಮಾತನಾಡಿ ಇಂದು ನಾವು ಆಧುನಿಕ ಯುಗದಲ್ಲಿ ಜೀವನ ಸಾಗಿಸುತ್ತಿದ್ದೇವೆ, ನಮ್ಮಲ್ಲಿ ತಾಳ್ಮೆ ಇಲ್ಲದೆ, ಅವಸರವಾಗಿ ಹೋಗಲು ಯತ್ನಿಸಿ ಅಪಘಾತಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ನಾವು ತಾಳ್ಮೆಯಿಂದ ನಾವು ತಲುಪಬೇಕಾದ ಸ್ಥಳಕ್ಕೆ ಸಮಾಧಾನದಿಂದ ಅರ್ಧಗಂಟೆ ಮುಂಚಿತವಾಗಿ ಹೋದಲ್ಲಿ ಅಪಘಾತವನ್ನು ತಡೆಗಟ್ಟಬಹುದು.  

ಒಂದು ಜೀವ ಉಳಿಸುವುದರಿಂದ ಒಂದು ಕುಟುಂಬ ಉಳಿಸಬಹುದು. ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಕರ್ತವ್ಯ ಹಾಗೂ ಹಕ್ಕಾಗಿದೆ ಎಂದು ಅವರು ಹೇಳಿದರು.  

ಈ ಸಂರ್ಭದಲ್ಲಿ ಸುರಕ್ಷತಾ ಭಿತ್ತಿ ಪತ್ರ ಪತ್ರ ಬಿಡುಗಡೆ ಹಾಗೂ ಚಾಲನಾ ಅನುಜ್ಞಾ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.  

ಮೋಟಾರ ವಾಹನ ನೀರೀಕ್ಷಕರಾದ ಪಂಚಾಕ್ಷರಿ ಅಳವಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ವಿಭಾಗೀಯ ಸಾರಿಗೆ ಅಧಿಕಾರಿಗಳಾದ ಡಿ.ಎ.ಬಿರಾದಾರ, ಘಟಕ ವ್ಯವಸ್ಥಾಪಕ ಆನಂದ ಹೂಗಾರ, ಅದೀಕ್ಷಕರಾದ ರಾಘವೇಂದ್ರ ಯಡಹಳ್ಳಿ, ವಿ.ಎ. ಬಿರಾದಾರ, ಆನಂದ ಹೂಗಾರ,   ಆಟೋ ಚಾಲಕರ ಸಂಘ, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ, ಲಾರಿ ಮಾಲೀಕರ ಸಂಘದ ಪದಾಧಿಕಾರಿ, ರೋಟರಿ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ, ವಿದ್ಯಾರ್ಥಿ, ವಿದ್ಯಾರ್ಥಿನೀಯರು ಹಾಗೂ ಇತರರು ಉಪಸ್ಥಿತರಿದ್ದರು.