ಮಕ್ಕಳಲ್ಲಿ ಅಧ್ಯಯನ ಹುಮ್ಮಸ್ಸು ಮೂಡಲಿ: ಜಾಲೋಜಿ
ಚಿಕ್ಕಪಡಸಲಗಿ 05: ಬುದ್ಧಿ ಮತ್ತೆ ಬೆಳವಣಿಗೆಗೆ ಪಠ್ಯಪುಸ್ತಕಗಳು ಸಹಕಾರಿಯಾಗಿವೆ. ಕಾರಣ ಪುಸ್ತಕಗಳ ನಂಟು ಶಾಲಾ ಮಕ್ಕಳು ಸರಿಯಾಗಿ ಇರಿಸಿಕೊಂಡರೆ ಶೈಕ್ಷಣಿಕ ಗಂಟು ಸಮರ್ಥವಾಗಿ ನಿಭಾಯಿಸಲು ಸಾಧ್ಯ ಎಂದು ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಅಭಿಪ್ರಾಯಿಸಿದರು.
ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಸರಕಾರ ಉಚಿತವಾಗಿ ಕೊಡಮಾಡಿದ ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಮಕ್ಕಳು ಪಠ್ಯ ಪುಸ್ತಕದ ಪುಟಗಳನ್ನು ಧ್ಯಾನಿಸುತ್ತಾ ಒಂದೊಂದಾಗಿ ತೆರೆದು ಪಾಠ ಪ್ರವಚನದೊಂದಿಗೆ ಸರಿಯಾಗಿ ಅಥೈ9ಸಿಕೊಂಡರೆ ಶೈಕ್ಷಣಿಕ ಪಯಣ ಸುಲಲಿತವಾಗಿ ಸಾಗುತ್ತದೆ.ಆ ನಿಟ್ಟಿನಲ್ಲಿ ಓದು,ಬರಹದ ಅಭ್ಯಾಸಕ್ಕೆ ಮಹತ್ವ ನೀಡಬೇಕು.ಹುಮ್ಮಸ್ಸದಿಂದ ಅಧ್ಯಯನ ಪ್ರವೃತ್ತಿ ಮೈಗೂಡಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.
ಪುಸ್ತಕ ಪ್ರಭಾವ ಹೊಂದಿದರೆ ಶೈಕ್ಷಣಿಕ ಜೀವನ ಸೌಗಂಧಿತವಾಗುತ್ತದೆ.ಮಸ್ತಕಕ್ಕೆ ಪುಸ್ತಕ ಚರಣ ತಾಗಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ. ಪುಸ್ತಕಗಳ ಜೊತೆ ಅಪ್ತ ಸಂಬಂಧ ಏಕಾಗ್ರತೆಯಿಂದ ಇಟ್ಟುಕೊಂಡು ಮೇರು ವ್ಯಕ್ತಿತ್ವದ ಚಹರೆಗಳು ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ನಿಮ್ಮ ಶೈಕ್ಷಣಿಕ ಜೀವನ ಮಟ್ಟವನ್ನು ಸುಧಾರಿಸಿ ಬದುಕಿನ ಆಶೋತ್ತರಗಳನ್ನು ಈಡೇರಿಸುವ ಶಕ್ತಿ ಈ ಪಠ್ಯ ಪುಸ್ತಕಗಳಲ್ಲಿದೆ.ಪುಸ್ತಕ ಸಾಧನಗಳು ಇಡೀ ಜೀವ ಚೈತ್ರದ ಸ್ವಾಸ್ಥ್ಯ ಕಾಪಾಡುತ್ತದೆ. ಆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಪುಸ್ತಕ ಸ್ನೇಹಿಗಳಾಗಿ ಶಿಕ್ಷಣ ಪ್ರಜ್ಞೆ ತಾಳಬೇಕು.ಮನುಕುಲಕ್ಕೆ ಇಂದು ಶಿಕ್ಷಣ ಅತ್ಯಗತ್ಯ. ಸ್ವಾಭಿಮಾನದ ನಡೆಗೆ ಪುಸ್ತಕಗಳ ಜ್ಞಾನ ರಸದ ಬಿಂಬಗಳು ನೆಮ್ಮದಿ ನೀಡುತ್ತವೆ ಎಂದರು.
ಮಕ್ಕಳು ದೈನಂದಿನ ಜೀವನದಲ್ಲಿ ವ್ಯಾಪಕ ಪುಸ್ತಕ ಪ್ರೀತಿಯುಳ್ಳ ಒಡನಾಟ ಬೆಳೆಸಿಕೊಳ್ಳಲು ಮನಸ್ಸು ತೋರಬೇಕು. ಪಠ್ಯ ಪುಸ್ತಕಗಳೇ ಜೀವನ ರೂಪಧಾರಣೆಯ ಆವಿಷ್ಕಾರವಾಗಿದ್ದು ನವೀನ ಮಾದರಿಯ ಜ್ಞಾನ ಸಂಪಾದನೆಗೆ ಸದಾ ಹಾತೋರುತ್ತಿರಬೇಕು. ಕಲಿಕೆಯಲ್ಲಿ ಕ್ರಿಯಾಶೀಲತೆಯ ಸೃಜನಶೀಲತೆ ಗುಣಸ್ವಭಾವ ಜೊತೆಗೆ ಪ್ರಬುದ್ಧತೆ ಮನಭಾವ ಹೊಂದಬೇಕು.ಉತ್ತಮ ವ್ಯಾಸಂಗದೊಂದಿಗೆ ವಿದ್ಯಾವಂತ ಮಕ್ಕಳಾಗಿ ಸಮಾಜದಲ್ಲಿ ಮಿನುಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಿಆರ್ ಪಿ ಆರ್.ಎಚ್.ಮುದ್ನೂರ,ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಗೌರವ ಶಿಕ್ಷಕ ಲೋಹಿತ ಮಿರ್ಜಿ, ಈರ್ಪ ದೇಸಾಯಿ, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿ ಸಹನಾ ಹತ್ತಳ್ಳಿ (ಕಲ್ಯಾಣಿ), ಶೃತಿ ಲಿಗಾಡೆ ಇತರರಿದ್ದರು.