ಕುಡಿಯುವ ನೀರು ಯೋಜನೆಗೆ ಶಾಸಕ ರಾಜು ಕಾಗೆ ಭೂಮಿ ಪೂಜೆ
ಅಥಣಿ, 05 : ಕಾಗವಾಡ ಮತಕ್ಷೇತ್ರದ 33.72 ಕೋಟಿ ರೂ. ಅನುದಾನದ ಬಳ್ಳಿಗೇರಿ ಮತ್ತು ಇತರ 15 ಗ್ರಾಮಗಳ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಹಾಗೂ 19.70 ಕೋಟಿ ಅನುದಾನದ ಮದಭಾವಿ ಹಾಗೂ ಇತರ 18 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗೆ ಶಾಸಕ ರಾಜು ಕಾಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜು ಕಾಗೆ, ಈ ಎರಡೂ ಯೋಜನೆಗಳಿಗೆ ಸುಮಾರು 15 ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು ಆಗಿನ ಜನಸಂಖ್ಯೆಗೆ ಅನಗುಣವಾಗಿ ಯೋಜನೆ ರೂಪಿಸಲಾಗಿತ್ತು ಆದರೆ ಈಗ ಈ ಎರಡೂ ಯೋಜನೆಗಳು ಶಿಥಿಲಗೊಂಡ ಪರಿಣಾಮ ಕುಡಿಯುವ ನೀರು ಪೂರೈಕೆಯಲ್ಲಿ ಅಡತಡೆಯಾಗುತ್ತಿತ್ತು ಹೀಗಾಗಿ ಈ ಎರಡೂ ಯೋಜನೆಗಳ ಪುನಶ್ಚೇತನ ಮಾಡಬೇಕಿದ್ದ ಹಿನ್ನಲೆಯಲ್ಲಿ ಪುನಶ್ಚೇತ ಯೋಜನೆ ಮಂಜೂರು ಮಾಡಿಸಿದೆ ಎಂದರು. ಬಳ್ಳಿಗೇರಿ ಸುತ್ತಮುತ್ತಲಿನ ಪಾರ್ಥನಹಳ್ಳಿ, ಗುಂಡೇವಾಡಿ, ಮಾಯನಟ್ಟಿ, ಅಬ್ಬಿಹಾಳ, ಅಗ್ರಾಣಿ ಇಂಗಳಗಾಂವ, ಕಿರಣಗಿ, ಅನಂತಪುರ, ನಾಗನೂರ.ಪಿ.ಎ, ತಾಂವಶಿ, ಚಮಕೇರಿ, ಬೇಡರಹಟ್ಟಿ, ಬಳ್ಳಿಗೇರಿ, ಅಥಣಿ ಗ್ರಾಮೀಣ ಹೊಸಟ್ಟಿ, ಬೆವನೂರ ಗ್ರಾಮಗಳಿಗೆ ಹಾಗೂ ಮದಭಾವಿ ಸುತ್ತಮುತ್ತಲಿನ ಮದಭಾವಿ, ತೆವರಟ್ಟಿ, ಸಿದ್ದೇವಾಡಿ, ಆಜೂರ, ಖಿಳೇಗಾಂವ, ಜಕಾರಟ್ಟಿ, ವಿಷ್ಣುವಾಡಿ, ಅರಳಿಹಟ್ಟಿ, ಬೊಮ್ಮನಾಳ, ಮುರಗುಂಡಿ, ಶಿರೂರ, ಜಂಬಗಿ, ಪಾಂಡೇಗಾಂವ, ಶಿವನೂರ, ಕಲೂತಿ, ಹಣಮಾಪುರ, ಸಂಬರಗಿ, ದೇವರಡ್ಡೇರಹಟ್ಟಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರು.
ಯೋಜನೆ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಜವಾಬ್ದಾರಿ ಇದೆ ಆದರೂ ಸಾರ್ವಜನಿಕರ ಸಹ ಭಾಗಿತ್ವ ಮಹತ್ವದ್ದಾಗಿದ್ದು, ಯೋಜನೆ ಪ್ರಾರಂಭಗೊಂಡು ಮುಕ್ತಾಯ ಆಗುವವರೆಗೂ ಗುಣಮಟ್ಟದ ಬಗೆಗೆ ಕಾಳಜಿ ವಹಿಸಿ ಎಂದರು.
ಗ್ರಾಮೀಣ ಕುಡಿಯುವ ನೀರು ಇಲಾಖೆಯ ರವೀಂದ್ರ ಮೂರಗಾಲಿ ಮಾತನಾಡಿ, ಪ್ರತಿ ಒಬ್ಬ ವ್ಯಕ್ತಿಗೆ ದಿನನಿತ್ಯ 55 ಲೀಟರ್ ನೀರು ಕೊಡುವುದೇ ಈ ಯೋಜನೆಯ ಉದ್ದೇಶವಾಗಿದ್ದು, ಶಾಸಕ ರಾಜು ಕಾಗೆಯವರ ಸತತ ಪ್ರಯತ್ನದ ಫಲವಾಗಿ ಈ ಎರಡೂ ಯೋಜನೆಗಳ ಪುನಶ್ಚೇತನಕ್ಕೆ ಅನುದಾನ ಮಂಜೂರಾಗಿದೆ ಎಂದರು.
ಈ ಸಂದರ್ಭದಲ್ಲಿ ಧುರೀಣರಾದ ಮಹದೇವ ಕೋರೆ,ಬಸನಗೌಡ ಪಾಟೀಲ, ಅಪ್ಪಾಸಾಬ ಚೌಗಲಾ, ರಫೀಕ್ ಪಟೇಲ, ಸಿದರಾಯ ತೇಲಿ, ರಫಿಕ ಮುಲ್ಲಾ, ಶಿವಾನಂದ ಗೊಲಬಾವಿ, ಗೂಳಪ್ಪ ಜತ್ತಿ, ನಿಜಗುಣಿ ಮಗದುಮ್, ಬಸವರಾಜ ಪಾಟೀಲ್, ಮಲ್ಲಿಕಾರ್ಜುನ ದಳವಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕುಡಿಯುವ ನೀರು ಇಲಾಖೆಯ ಅಕ್ಷಯ ಚುನಮುರಿ, ಕಿರಣ ಮಾಳಿ, ಬಸವರಾಜ ಪಾಟೀಲ, ಮಂಜುನಾಥ ನಾಗೂರ, ಗಣೇಶ ಸುಣಗಾರ, ಮಾಲು ಕನ್ಸಟ್ರಕ್ಷನ್ಸನ ನವೀನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.