ಅಭಿವ್ಯಕ್ತಿಯಲ್ಲಿ ಮಾತೃಭಾಷೆ ಪ್ರಮುಖ ಪಾತ್ರ ವಹಿಸುತ್ತದೆ: ಅರವಿಂದ್ ಪಟೇಲ್
ಬಳ್ಳಾರಿ 09: ಗಡಿಭಾಗದಲ್ಲಿ ಕನ್ನಡ ಚಟುವಟಿಕೆಗಳು ನಿರಂತರವಾಗಿ ನಡೆಯಲು ದತ್ತಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಟೇಲ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಲಿಂ. ಸಿರಿಗೇರಿ ಬಸವರಾಜ್ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೃಜನಶೀಲ ಅಭಿವ್ಯಕ್ತಿಯಲ್ಲಿ ಮಾತೃಭಾಷೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅರವಿಂದ ಪಟೇಲ ತಿಳಿಸಿದರು. ತ್ರಿಭಾಷಾ ಸೂತ್ರವು ಸ್ಥಳೀಯ ನೆಲದ ಭಾಷಾಗಳ ಬೆಳವಣಿಗೆಗೆ ಮಾರಕವಾಗುತ್ತಿದೆ ಎಂದು ಡಾ. ಗಾದೆಪ್ಪ ತಮ್ಮ ವಿಶೇಷ ಉಪನ್ಯಾಸದಲ್ಲಿ ಅಭಿಪ್ರಾಯ ತಿಳಿಸಿದರು.ದತ್ತಿದಾನಿಗಳು ಹಾಗೂ ಖ್ಯಾತ ಲೆಕ್ಕ ಪರಿಶೋಧರಾದ ಸಿರಿಗೇರಿ ಪನ್ನಾರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜಾಗತೀಕರಣ ಸಂದರ್ಭದಲ್ಲಿ ನೆಲದ ಭಾಷೆಗಳ ಮೇಲೆ ಅನ್ಯ ಭಾಷೆಗಳ ದಬ್ಬಾಳಿಕೆ ನಡೆಯುತ್ತಿದೆ, ಈ ದಬ್ಬಾಳಿಕೆ ನಿವಾರಿಸಿ ಕೊಂಡು ನಾವು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಅಸ್ಮಿತೆಯನ್ನು ಕಾಯ್ದುಕೊಳ್ಳುವುದು ಅವಶ್ಯವಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸಿರಿಗೇರಿ ಜಯಣ್ಣ, ಅ.ಭಾ.ವೀ. ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಗಂಗಾವತಿ ವೀರೇಶ, ಪ್ರಾಂಶುಪಾಲರಾದ ಡಾ. ಸತೀಶ ಎ. ಹಿರೇಮಠ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಡಾ. ಜಯಣ್ಣ ಕಾರ್ಯಕ್ರಮ ನಿರೂಪಿಸಿದರು. ಡಾ. ಬಸವರಾಜ ಗದಗಿನ ಸ್ವಾಗತಿಸಿದರು.