ನೆಮ್ಮದಿಯ ಭವಿಷ್ಯಕ್ಕಾಗಿ ಪರಿಸರ ಉಳಿಸಿ, ಬೆಳಿಸಿ, ಸಂರಕ್ಷಿಸಿ- ಧಡೆಸೂರಮಠ
ನರೇಗಲ್ 05 : ಪರಿಸರ ಉಳಿಸಿ, ಬೆಳೆಸಿ ಸಂರಕ್ಷಿಸಬೇಕು ಎಂಬ ಸಂಕಲ್ಪ ಮಾಡಬೇಕು. ಪರಿಸರ ರಕ್ಷ ಣೆ ನಮ್ಮ ಮನೆಯಿಂದ ಅಲ್ಲ ನಮ್ಮ ಮನಸ್ಸಿನಿಂದಲೇ ಪ್ರಾರಂಭವಾಗಲಿ. ಪರಿಸರ ಅವಸಾನದ ಅಂಚಿನಲ್ಲಿದ್ದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬಹಳ ಕಷ್ಟ ಎದುರಿಸಬೇಕಾಗುತ್ತದೆ ಎಂದು ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಎಂ. ಎಸ್. ಧಡೆಸೂರಮಠ ಹೇಳಿದರು.
ನರೇಗಲ್ ಪಟ್ಟಣ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪರಿಸರವು ಎರಡು ಮುಖದ ನಾಣ್ಯದ ಹಾಗೆ. ಪ್ರೀತಿ, ಮಮತೆ, ವಾತ್ಸಲ್ಯವು ಒಂದು ಶಾಂತತೆಯ ಮುಖವಾದರೆ. ಸುನಾಮಿ, ಭೂಕಂಪ, ಚಂಡಮಾರುತ ಹೀಗೆ ಮುಂತಾದ ಪ್ರಕೃತಿವಿಕೋಪಗಳು ಹಾನಿ ಮಾಡಿದ ಮನುಕುಲಕ್ಕೆ ತಕ್ಕ ಪಾಠ ಕಲಿಸುವ ಇನ್ನೊಂದು ರೌದ್ರ ಮುಖವಾಗಿದೆ. ನಾವು ಒಂದು ಕೈಯಲ್ಲಿ ಪರಿಸರಕ್ಕೆ ಏನನ್ನು ಕೊಡುತ್ತೇವೋ ಅದೇ ನಮಗೆ ಮರಳಿ ಬರುವುದು. ಅಂದರೆ, ನಾವು ಪರಿಸರಕ್ಕೆ ಒಳಿತು ಮಾಡಿದರೆ, ಶಾಂತವಾಗಿರುವ ಪಕೃತಿಯು ನಮಗೊಲಿಯುತ್ತದೆ. ಕೇಡು ಬಯಸಿದರೆ, ಅದೇ ಪ್ರಕೃತಿಯ ರೌದ್ರಾವತಾರವನ್ನು ಕಾಣಬಹುದಾಗಿದೆ. ಆಯ್ಕೆ ನಮ್ಮದಾಗಿದೆ ಅದಕ್ಕಾಗಿ ಪರಿಸರ ಕಾಪಾಡುವ ಕಾರ್ಯವಾಗಬೇಕಿದೆ ಎಂದರು.
ಕಾಲೇಜು ಅಭಿವೃದ್ಧಿ ಸದಸ್ಯ ಹಾಗೂ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತಪ್ಪ ಎಚ್. ಅಬ್ಬಿಗೇರಿ ಮಾತನಾಡಿ, ಕೃಷಿ, ಪರಿಸರವನ್ನು ಅರ್ಥ ಮಾಡಿಕೊಂಡು ಅದರ ಉಳಿವಿಗಾಗಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ನೆಲ- ಜಲವನ್ನು ಸಂರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದರು. ಭೂಮಿಯ ಪ್ರತಿಯೊಂದು ಘಟಕವೂ ಸಹ ಭೌತಿಕ ಪರಿಸರದ ಮೇಲೆ ಅವಲಂಬಿತವಾಗಿದೆ. ಸಸ್ಯ, ಪ್ರಾಣಿ ಸೂಕ್ಷ್ಮಜೀವಿಗಳು ಮಳೆ, ಗಾಳಿ, ಮಣ್ಣು ಪ್ರತಿಯೊಂದು ಜತೆಗೂಡಿ ಒಂದು ಸುಂದರವಾದ ಪರಿಸರದ ನಿರ್ಮಾಣವಾಗಿದೆ. ಆದ್ದರಿಂದ ಎಲ್ಲರೂ ಸಸಿ ನೆಡುವುದು, ನೆಟ್ಟ ಸಸಿಗಳನ್ನು ಪೋಷಿಸಿ ಬೆಳೆಸುವುದು ಹಾಗೂ ವಿದ್ಯಾರ್ಥಿಗಳು ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ಎಲ್ಲರಿಗೂ ಜಾಗೃತಿ ಮೂಡಿಸುವುದು ಅವಶ್ಯಕ ಎಂದರು.
ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಮಾತನಾಡಿ,ಬೀದಿಗಳಲ್ಲಿ ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳನ್ನು ಎಸೆಯದಂತೆ ಮತ್ತು ಅನವಶ್ಯಕ ಪ್ಲಾಸ್ಟಿಕ್ ಬಳಕೆಗೆ ನಿಯಂತ್ರಣ ಹೇರಬೇಕಿದೆ. ವಾಹನಗಳ ಅತಿಯಾದ ಬಳಕೆಯಿಂದಾಗಿ ಹಸಿರುಮನೆ ಪರಿಣಾಮವುಂಟಾಗುತ್ತಿದ್ದು ಓಝೇನ್ ಪದರದಲ್ಲಿ ರಂಧ್ರವಾಗುತ್ತಿದ್ದು ಸೂರ್ಯನ ನೇರಳಾತೀತ ಕಿರಣಗಳಿಂದ ಮನುಕುಲಕ್ಕೆ ಕಂಟಕ ಕಾದಿದೆ. ಹೀಗಾಗಿ ಪರಿಸರ ರಕ್ಷ ಣೆ ಎಲ್ಲರ ಜವಾಬ್ದಾರಿ ಎಂದರು. ಒಳ್ಳೆಯ ಪರಿಸರದಿಂದ ಮಾತ್ರ ಜೀವ ಸಂಕುಲ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಾಕೃತಿಕ ಸಂಪತ್ತು ನಮಗಾಗಿ ಇರುವುದು. ಇವುಗಳನ್ನು ಸಮರ್ಕವಾಗಿ ಬಳಕೆ ಮಾಡಿಕೊಂಡು ಹಾಗೆಯೇ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವು ಪ್ರಮುಖವಾಗಿ ಆಗಬೇಕು. ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆಯನ್ನು ಬೆಳೆಸಿ, ಹಸಿರು ಸಂಪತ್ತನ್ನು ಉಳಿಸಲು ಮುಂದಾಗುವಂತೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಮೊದಲು ನಡೆದ ಸಿಡಿಸಿ ಸದಸ್ಯರ ಸಭೆಯಲ್ಲಿ ಕಾಲೇಜು ಪ್ರವೇಶಾತಿ ಹೆಚ್ಚಳ್ಳ, ಮಕ್ಕಳ ಶೈಕ್ಷಣಿಕ ಪ್ರಗತಿ, ಸೌಕರ್ಯಗಳ ಕೊರತೆ, ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಕಾಲೇಜು ಅಭಿವೃದ್ದಿ ಸದಸ್ಯರಾದ ಬಸೀರಾಬಾನು ಅಲ್ಲಾಬಕ್ಷಿ ನದಾಫ್, ಶರಣಪ್ಪ ಕುರಿ, ದಾವುದ್ ಅಲಿ ಕುದರಿ, ವೀರ್ಪ ಜೀರ್ಲ, ಆನಂದ ನಡುವಲಕೇರಿ, ಕಾಲೇಜಿನ ಸಿಬ್ಬಂದಿಗಳು ಇದ್ದರು.