ವಿಶ್ವ ಪರಿಸರ ದಿನಾಚರಣೆ: ಸಂಡೂರು ಪಟ್ಟಣದ ಮರು ಬಳಕೆಯಾಗದ ಪ್ಲಾಸ್ಟಿಕ್ ಕಲಬುರ್ಗಿಗೆ ರವಾನೆ
ಬಳ್ಳಾರಿ 06: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ಎಂಬ ಶೀರ್ಷಿಕೆಯಡಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಂಡೂರು ಪುರಸಭೆ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಸಂಡೂರು ಪಟ್ಟಣದ ಘನ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಶೇಖರಣೆಯಾಗಿರುವ ಮರು ಬಳಕೆಯಾಗದ ಪ್ಲಾಸ್ಟಿಕ್ ನ್ನು ಕಲಬುರ್ಗಿ ಜಿಲ್ಲೆಯ ವಾಡಿಯಲ್ಲಿರುವ ಎಸಿಸಿ ಸಿಮೆಂಟ್ ಕಾರ್ಖಾನೆಗೆ ರವಾನಿಸುವ ವಾಹನಕ್ಕೆ ಗುರುವಾರ ಚಾಲನೆ ದೊರೆಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕೊಂಡೊಯ್ಯುವ ವಾಹನಕ್ಕೆ ಸಂಡೂರು ಪುರಸಭೆಯ ಅಧ್ಯಕ್ಷ ಸಿರಾಜ್ ಹುಸೇನ್ ಅವರು ಹಸಿರು ನಿಶಾನೆ ತೋರಿಸಿದರು.
ಇದೇ ವೇಳೆ ಸ್ವಚ್ಛ ಭಾರತ ಹಸಿರು ಭಾರತ- ಹಸಿರು ಪ್ರತಿಜ್ಞೆ ಭೋಧಿಸಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಘವೇಂದ್ರ, ಕಾರ್ಯಪಾಲಕ ಅಭಿಯಂತರ ಅರುಣ್ ಪಾಟೀಲ್, ಪರಿಸರ ಅಭಿಯಂತರ ಅನ್ನಪೂರ್ಣ, ಸಂಡೂರು ಪುರಸಭೆ ಮುಖ್ಯಾಧಿಕಾರಿ ಜಯಣ್ಣ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.