ಹೊಂದಾಣಿಕೆಯೇ ಬದುಕಿನ ಬಹುದೊಡ್ಡ ಮೌಲ್ಯ: ಡಾ. ಗುರುರಾಜ ಕರಜಗಿ

Adaptability is the greatest value in life: Dr. Gururaja Karajagi

ಬೆಳಗಾವಿ 03: ಜೀವನದ ಬಹುದೊಡ್ಡ ಮೌಲ್ಯವೆಂದರೆ ಹೊಂದಿಕೊಂಡು ಹೋಗುವುದು. ಕುಟುಂಬದಲ್ಲಿ ತಂದೆ, ತಾಯಿ, ಮಡದಿ ಮಕ್ಕಳೊಂದಿಗೆ. ಸಮಾಜದಲ್ಲಿ ಜನರೊಂದಿಗೆ ಹೀಗೆ ಹೊಂದಾಣಿಕೆಯೇ ಜೀವನದ ಬಹುದೊಡ್ಡ ಮೌಲ್ಯ ಎಂದು ಖ್ಯಾತ ವಾಗ್ಮಿ, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿಯವರು ಇಂದಿಲ್ಲಿ ಹೇಳಿದರು.  

ಬೆಳಗಾವಿಯ ರಂಗಸಂಪದ ತಂಡದವರು ಆಯ್‌.ಎಂ.ಇ. ಆರ್‌. ಸಭಾಭವನದಲ್ಲಿ ನಿನ್ನೆ ದಿ. 2 ಸೋಮವಾರದಂದು ಖ್ಯಾತ ಶಿಕ್ಷಣ ತಜ್ಞ, ವಾಗ್ಮಿ ಡಾ. ಗುರುರಾಜ ಕರಜಗಿಯವರಿಂದ ‘ಬದುಕಿನಲ್ಲಿ ಮಾನವೀಯ ಮೌಲ್ಯಗಳು’ ಎಂಬ ವಿಷಯ ಕುರಿತಂತೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯಪಟ್ಟರು.  

ಡಾ. ಗುರುರಾಜ ಅವರು ಬಾಲ್ಯದಲ್ಲಿ ತಂದೆ ತಾಯಿಗಳು ಮುಂದೆ ಶಾಲಾಶಿಕ್ಷಕರು ಇವರಿಬ್ಬರೂ ಮಕ್ಕಳಿಗೆ ನಿಜವಾದ ಮಾರ್ಗದರ್ಶಿಗಳು. ತಂದೆ ತಾಯಿ ಬಳೆಸುವ ಭಾಷೆ ಮಕ್ಕಳಿಗೆ ಮಾರ್ಗದರ್ಶಿಯಾಗಬೇಕು. ಬದುಕಿನ ದೊಡ್ಡ ಮೌಲ್ಯವೆಂದರೆ ಬೇರೆಯವರ ದೋಷಗಳನ್ನು ಎಣಿಸದಿರುವುದು. ಪ್ರಪಂಚದಲ್ಲಿಯ ಎಲ್ಲ ವಸ್ತುಗಳ ಬೆಲೆಯನ್ನು ದುಡ್ಡಿನಲ್ಲಿ ಅಳೆಯುವಂತಹವು. ಆದರೆ ಮನುಷ್ಯ ಜೀವನದ ಬೆಲೆಯನ್ನು ಮಾತ್ರ ದುಡ್ಡಿನಲ್ಲಿ ಅಳೆಯಲಾಗದು ಅದಕ್ಕೆ ಇವುಗಳಿಗೆ ಮಾನವೀಯ ಮೌಲ್ಯಗಳು ಅಂತಾ ಕರೆಯುತ್ತಾರೆ. ಈ ಮೌಲ್ಯಗಳಿಗೆ ಬೆಲೆ ಕಟ್ಟಲಾಗದು ಎಂದು ಡಾ. ಗುರುರಾಜ ಅವರು ಹೇಳಿದರು.  

ಸಾವು ಎನ್ನುವ ಶಬ್ಧದ ಅರ್ಥವೆ ನಶಿಸಿ ಹೋಗುವುದು ಎಂದು. ಪ್ರತಿ ಕ್ಷಣವೂ ನಶಿಸಿ ಇಲ್ಲವಾಗುವುದೇ ಶರೀರದ ಲಕ್ಷಣ. ಸಾವನ್ನು ಗೆಲ್ಲಬಹುದು ಆದರೆ ದೇಹದಿಂದ ಸಾಧ್ಯವಿಲ್ಲ. ನಾವು ಮಾಡುವ ಮೌಲ್ಯಯುತ ಕಾರ್ಯಗಳಿಂದ ಗೆಲ್ಲಬಹುದು. ಶಾಶ್ವತವಾಗಿ ಉಳಿಯಬಹುದು. ರಾಮ, ಕೃಷ್ಣ, ಬುದ್ಧ, ಮಹಾವೀರ, ಕ್ರಿಸ್ತ ಇಂದು ದೇವರೆಂದೆನ್ನಿಸಿಕೊಂಡವರು. ಇಂದು ಅವರು ದೇಹದಿಂದ ಇಲ್ಲದಿರಬಹುದು ಆದರೆ ಅವರು ಮಾಡಿರುವ ಕಾರ್ಯಗಳಿಂದ ಶಾಶ್ವತವಾಗಿ ಉಳಿದಿಕೊಂಡಿದ್ದಾರೆ ಎಂದು ಹೇಳಿದರು.  

ರಾಮ, ಕೃಷ್ಣ, ಬುದ್ಧ, ಮಹಾವೀರ, ಕ್ರಿಸ್ತ ಇವರಾರೂ ಹಣ ರಾಜ್ಯ ಶ್ರೀಮಂತಿಕೆಯ ಬೆನ್ನು ಹತ್ತಿದವರಲ್ಲ. ಇವರೆಲ್ಲ ಜಗತ್ತಿಗೆ ಕೊಟ್ಟವರೆ ಹೊರತು ಪಡೆದುಕೊಂಡವರಲ್ಲ. ಜಗತ್ತು ಸ್ವಂತ ಸುಖಕ್ಕಾಗಿ ಪಡೆದುಕೊಂಡವರನ್ನು  ನೆನೆಯುವುದಿಲ್ಲ; ಕೊಟ್ಟವರನ್ನ ಮರೆಯುವುದಿಲ್ಲ. ಜಗತ್ತಿಗೆ ಕೊಡುವಂತಹ ಮೌಲ್ಯವನ್ನು ಯಾವುದೇ ರೀತಿಯಲ್ಲಿಯೂ ತೋರಿಸಲು ಬರದು. ಆ ರೀತಿ ಬದುಕಿ ತೋರಿಸಬೇಕಾಗುತ್ತದೆ ಎಂದು ಡಾ. ಗುರುರಾಜ ತಮ್ಮ ಮಾತುಗಳಲ್ಲಿ ಹೇಳಿದರು.  

ಪ್ರಾಸ್ತಾವಿಕ ನುಡಿಯಲ್ಲಿ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ರಂಗಸಂಪದವು ಪ್ರತಿವರ್ಷವೂ ಬೆಳಗಾವಿ ಜನರಿಗಾಗಿ ತಾವು ಒಂದು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಅದಕ್ಕೆ ಡಾ. ಗುರುರಾಜ  ಕರಜಗಿಯವರು ದಯವಿಟ್ಟು ಬರಬೇಕೆಂದು ಕೇಳಿಕೊಂಡರು. ಅದಕ್ಕೆ ಡಾ.ಕರಜಗಿಯವರು ಒಪ್ಪಿಕೊಂಡರು.  

ಧಾರವಾಡದ  ಸ್ನೇಹ ಪ್ರಕಾಶನದ ಹರ್ಷ ಡಂಬಳ ಉಪಸ್ಥಿತರಿದ್ದರು. ಬೆಳಗಾವಿಯ ಸಮೃದ್ಧ ವಿಕಲ ಚೇತನರ ಸಂಸ್ಥೆಯ ಅಂಧ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪಿ.ಯು.ಸಿ., ವಾಣಿಜ್ಯ ರಾಜ್ಯಕ್ಕೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ರಂಗಸಂಪದ ಕಲಾವಿದೆಯರಾದ ಅಂತರಾ ಕುಲಕರ್ಣಿ ಮತ್ತು ಪೂರ್ವಿ ರಾಜಪುರೋಹಿತ  ಇವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.