ಯೋಗದ ಅರಿವು ಆರೋಗ್ಯದ ಉಳಿವು: ಡಾ. ಯೋಗಿ ದೇವರಾಜ ಗೂರೂಜಿ

Awareness of Yoga is the key to health: Dr. Yogi Devaraj Guruji

ಲೋಕದರ್ಶನ ವರದಿ 

ಯೋಗದ ಅರಿವು ಆರೋಗ್ಯದ ಉಳಿವು: ಡಾ. ಯೋಗಿ ದೇವರಾಜ ಗೂರೂಜಿ  

ಬೆಳಗಾವಿ 16: ಪ್ರಸ್ತುತ ದಿನಮಾನದಲ್ಲಿ ಯೋಗ ಅಂದರೆ ಬರಿ ಆಸನವಲ್ಲ ಇದು ಪ್ರತಿಯೊಬ್ಬ ವ್ಯಕ್ತಿಯ ಇಡಿ ದೇಹದ ಭೌತಿಕ ಹಾಗೂ ಭೌಧ್ಧಿಕ ಚಟುವಟಿಕೆಗಳ ಚಾಲನಾ ಶಕ್ತಿಯನ್ನು ಹೊಂದಿರುವ ಅನೇಕ ರೋಗಗಳ ಮದ್ದು ಯೋಗಾ ಆಗಿದೆ ಎಂದು ಅಮೇರಿಕಾದ ಯೋಗ ವಿಶ್ವವಿದ್ಯಾಲಯ ಉಪಾಧ್ಯಕ್ಷ ಡಾ. ಯೋಗಿ ದೇವರಾಜ ಗೂರುಜಿ ತಿಳಿಸಿದರು. 

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ದಿ. 16ರಂದು ಸ್ಕೋಲ್ ಆಪ್ ಎಜುಕೇಶನ, ಎನ್‌. ಎಸ್‌. ಎಸ್ ಕೋಶ, ಕ್ರೀಡಾ ವಿಭಾಗ ಅಮೇರಿಕಾದ ಯೋಗಾ ವಿಶ್ವವಿದ್ಯಾಲಯ ಪ್ಲೋರಿಡಾ ಇವರ ಸಹಯೋಗದೊಂದಿಗೆ ಆಯೋಜಿಸಿದ ಯೋಗಾ - ಯುವ 2025 ಸಂಬಂಧಿಸಿದಂತೆ ಒಂದು ದಿನದ ಪರಿಚಯಾತ್ಮಕ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. 

 ಯೋಗದ ಅರಿವು - ಆರೋಗ್ಯದ ಉಳಿವು ಹಿನ್ನೆಲೆಯಲ್ಲಿ ನಮ್ಮಲ್ಲಿ ಇರುವ ಶಕ್ತಿಯನ್ನು ಮನಸ್ಸಿನ ಚಿತ್ತತೆಯನ್ನು ಸರಿಯಾದ ದಾರಿಯಲ್ಲಿ ಸಾಗಿಸಲು ಸಮಯ ಮತ್ತು ಆಸಕ್ತಿ ತುಂಬಾ ಮಹತ್ವದಾಗಿದೆ. ಯೋಗದಿಂದ ಮನಸ್ಸು ಬುದ್ಧಿಶಕ್ತಿ ಮತ್ತು ಭಾವನಾತ್ಮಕ ಶಕ್ತಿಗಳನ್ನು ಬೆಳೆಸುವುದಾಗಿದೆ ಎಂದರು.  

ಗೌರವ ಅತಿಥಿಯಾಗಿ ಪಾಲ್ಗೊಂಡ ಕುಲಸಚಿವ ಸಂತೋಷ ಕಾಮಗೌಡ ಅವರು ಯೋಗದಿಂದ ಯೋಗಿಗಳಾಗಿ ಯುವಕರಾಗಬೇಕೆಂದು ಕರೆ ನೀಡಿದರು. ಬದಲಾದ ಪರಿಸ್ಥಿತಿಯಲ್ಲಿ ಯೋಗದಿಂದ ಯಶಸ್ವಿ ದಾರಿಯನ್ನು ಕಂಡುಕೊಳ್ಳಬಹುದು ಎಂದರು.  

ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಪ್ರೊ. ತ್ಯಾಗರಾಜ ಅವರು ಮಾತನಾಡಿ ಪ್ರಸ್ತುತ ಬದಲಾವಣೆಯ ಈ ಕಾಲದಲ್ಲಿ ಶಿಕ್ಷಣದಲ್ಲಿ ಸಾಧನೆ ಬರವಣಿಗೆಗಳು ಉತ್ತಮವಾಗಬೇಕಾಗಿದೆ. ಯೋಗದಿಂದ ಪ್ರತಿಯೊಬ್ಬರು ತಮ್ಮ ಬದುಕನ್ನೆ ಬದಲಾಯಿಸಿಕೊಳ್ಳಬಹುದು. ಆಧಾರ, ಸಂಪನ್ಮೂಲ ಹಾಗೂ ಸಾರ್ವತ್ರಿಕರಣ ಈ ಮೂರು ಅಂಶಗಳು ಶ್ರೇಷ್ಠ ದಾರಿಗೆ ತಮ್ಮನ್ನು ತೆಗೆದುಕೊಂಡು ಹೋಗುತ್ತವೆ ಎಂದರು. 

 ವೇದಿಕೆ ಮೇಲೆ ಡಾ. ಎಸ್ ಎಸ್ ಹಿರೇಮಠ, ಅಮೇರಿಕಾ ಯೋಗ ವಿಶ್ವವಿದ್ಯಾಲಯ ಡೀನರು, ಪ್ರೊ. ಎಂ.ಸಿ ಯರ್ರಿಸ್ವಾಮಿ. ಶಿಕ್ಷಣ ನಿಕಾಯ, ಡಾ. ಜಗದೀಶ ಘಸ್ತಿ, ದೈಹಿಕ ಶಿಕ್ಷಣ ನಿರ್ದೇಶಕರು, ಕನಕಪ್ಪ ಪೂಜಾರ, ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಡಾ ರವಿ ಗೋಳ ಅವರು ಉಪಸ್ಥಿತರಿದ್ದರು.   

ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ನಿರ್ದೇಶಕರು, ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿಗಳು ಬಿ.ಇಡಿ ಕಾಲೇಜಿನ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಡಾ ರವಿ ಗೋಳ ನಿರೂಪಿಸಿದರು. ಆಕಾಶ ಪಾಟೀಲ ಪ್ರಾರ್ಥನೆ ಮಾಡಿದರು, ಪ್ರೊ. ಎಂ.ಸಿ ಯರ್ರಿಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಡಾ. ಸುಷ್ಮಾ ಆರ್ ವಂದಿಸಿದರು.