ಬುದ್ಧವಿಹಾರ ಗ್ರಂಥಾಲಯಕ್ಕೆ ಡಾ. ಅಂಬೇಡ್ಕರ್ ಸಂಪುಟಗಳ ಗ್ರಂಥದಾನ
ವಿಜಾಪುರ 08: ವಿಜಾಪುರ ನಗರದ ಸಾರಿಪುತ್ರ-ಬೋಧಧಮ್ಮ ಬೌದ್ಧವಿಹಾರ ಗ್ರಂಥಾಲಯಕ್ಕೆ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕ ಕಲ್ಲಪ್ಪ ತೊರವಿ ಅವರು 5000 ರೂ. ಮುಖಬೆಲೆಯ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳ ಇಂಗ್ಲಿಷ್ ಆವೃತ್ತಿಗಳ ಗ್ರಂಥದಾನ ಮಾಡಿದ್ದಾರೆ. ಇಂದು ಬುದ್ಧವಿಹಾರಕ್ಕೆ ಆಗಮಿಸಿದ ಕಲ್ಲಪ್ಪ ತೊರವಿಯವರು ಸಾಮೂಹಿಕ ಬುದ್ಧವಂದನೆಯ ನಂತರ ಬೌದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಯಡಹಳ್ಳಿ ಅವರಿಗೆ ಡಾ. ಅಂಬೇಡ್ಕರ್ ಸಂಪುಟಗಳನ್ನು ಅರ್ಿಸಿದರು. ರಾಜಶೇಖರ ಯಡಹಳ್ಳಿಯವರು ಮಾತನಾಡಿ ಭಗವಾನ ಬುದ್ಧ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ವಿಚಾರಗಳ ಪ್ರಚಾರ ಮತ್ತು ಪ್ರಸಾರದ ದೃಷ್ಟಿಯಿಂದ ಬುದ್ಧವಿಹಾರದಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲಾಗಿದ್ದು, ಈ ಗ್ರಂಥಾಲಯವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದ್ದು, ಎಲ್ಲರೂ ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿಸಿದರಲ್ಲದೆ ಉದಾರ ಮನಸ್ಸಿನಿಂದ ಗ್ರಂಥದಾನ ಮಾಡಿದ ಕಲ್ಲಪ್ಪ ತೊರವಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾಗಿ ಆಯ್ಕೆಯಾಗಿರುವ ಕಲ್ಲಪ್ಪ ತೊರವಿ ಅವರನ್ನು ಬುದ್ಧವಿಹಾರ ನಿರ್ಮಾಣ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬುದ್ಧವಿಹಾರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕರಾದ ಅನಿಲ ಹೊಸಮನಿ, ರಾಜೇಶ ತೊರವಿ, ಮನೋಜ ಕೋಟ್ಯಾಳಕರ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೆನ್ನು ಕಟ್ಟಿಮನಿ, ಮುಖಂಡರಾದ ಬಸವರಾಜ ಬ್ಯಾಳಿ, ಎಂ.ಬಿ. ಹಳ್ಳದಮನಿ, ಕೆ.ಎಂ. ಶಿವಶರಣ, ರಮೇಶ ಹಾದಿಮನಿ, ಪ್ರತಾಪ ಚಿಕ್ಕಲಕಿ ಮತ್ತಿತರರು ಉಪಸ್ಥಿತರಿದ್ದರು.