ಕಾರವಾರ 08 : ಭೀಮಕೋಲ ಕೆರೆಯಲ್ಲಿ ಕಯಾಕಿಂಗ್ ಗಮ್ಮತ್ತು ಹೆಚ್ಚತೊಡಗಿದೆ. ಸಮಾಜಿಕ ಅರಣ್ಯ ವಿಭಾಗ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದು , ಮಳೆಗಾಲದಲ್ಲೂ ಭೀಮಕೋಲ ಪ್ರವಾಸಿಗರ ನೆಚ್ಚಿನ ಸ್ಪಾಟ್ ಆಗಿ ಬದಲಾಗಿದೆ. ಕಾರವಾರದ ಖಾಸಗಿ ಸಂಸ್ಥೆ ಇಲ್ಲಿ ಬೋಟಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಸ್ಥಳೀಯ ಪಂಚಾಯತಿಗೆ ಒಂದಿಷ್ಟು ಆದಾಯ ಸಂದಾಯವಾಗುತ್ತಿದೆ.ಅಸ್ನೋಟಿಗೆ ಸಮೀಪದ ಭೀಮಕೋಲ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳು ಆರಂಭವಾಗಿದ್ದು, ಪ್ರವಾಸೋದ್ಯಮ ಗರಿಗೆದರಿದೆ. ಅರಣ್ಯ ಇಲಾಖೆ ಕೆರೆಯ ದಡದಲ್ಲಿ, ಗುಡ್ಡದ ಬದಿಗೆ ಪರಿಸರ ಪೂರಕ ತಾತ್ಕಾಲಿಕ ಶೆಡ್, ವಸತಿ ಟೆಂಟ್ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಿದೆ. ಅಲ್ಲದೆ ಭೀಮಕೊಲ ಕೆರೆಯ ಮೂರು ಭಾಗ ಬೆಟ್ಟ ಹಾಗೂ ಗಿಡ ಮರಗಳಿಂದ ಆವರಿಸಿದ್ದು, ಬೆಟ್ಟದ ಹಾದಿಯಲ್ಲಿ ಸಣ್ಣ ಜಲಪಾತ ಸಹ ಇದೆ. ಜಲಪಾತ ತಲುಪಲು ಟ್ರಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಯೋಜನೆ ರೂಪಗೊಳಿಸಿದ್ದು, ಅನುಷ್ಠಾನಕ್ಕಾಗಿ ಇಲಾಖೆಯ ಸಿಸಿಎಫ್ ಅವರ ಅನುಮತಿಗೆ ಕಳುಹಿಸಲಾಗಿದೆ.
ಕೆರೆ ಅಭಿವೃದ್ಧಿಯ ಹಿನ್ನೆಲೆ : ಭೀಮಕೋಲ ಕೆರೆ ಪಾಳುಬಿದ್ದ ಪ್ರದೇಶವಾಗಿತ್ತು. ಈ ಕೆರೆಯನ್ನು ಅಭಿವೃದ್ಧಿ ಪಡಿಸಲು ಜಿಲ್ಲಾ ಪಂಚಾಯತ ಸಿಇಒ ಆಗಿದ್ದ ಪ್ರಿಯಾಂಕಾ ಆಸಕ್ತಿ ತೋರಿದ್ದರು. ನರೆಗಾ ಯೋಜನೆ ಅನುದಾನ ಬಳಸಿ ಕೆರೆಯ ದಡವನ್ನು ಅಭಿವೃದ್ಧಿ ಪಡಿಸಿದರು. ಅರಣ್ಯಾಧಿಕಾರಿ ಮಂಜುನಾಥ ನಾವಿ ಕೆರೆಯನ್ನು ಪ್ರವಾಸಿತಾಣ ಮಾಡುವ ಪ್ಲಾನ್ ಸಿದ್ಧಪಡಿಸಿದ್ದರು .ಭೀಮಕೋಲ ಕೆರೆಯಲ್ಲಿ ಹೂಳೆತ್ತುವ ಕಾರ್ಯವನ್ನು ಮೊದಲು ಕೈಗೊಳ್ಳಲಾಗಿತ್ತು . ಕೆರೆ ಪಕ್ಕ ಹಾಗೂ ಇಳಿಜಾರಿನ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಲಾಗಿತ್ತು. ಇದೀಗ ಬೋಟಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಉದ್ಯಾನವನ ಹಾಗೂ ಬೋಟಿಂಗ್ ಚಟುವಟಿಕೆ ಪ್ರವಾಸಿಗರಿಗೆ ಲಭ್ಯವಾಗುತ್ತಿವೆ. ಕೆರೆಯ ಹಿನ್ನೀರು ,ನಿಸರ್ಗೆ ಸೊಬಗು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪ್ರವಾಸಿಗರು ಕಳೆದೊಂದು ವರ್ಷದಿಂದ ಭೇಟಿ ಕೊಡಲು ಪ್ರಾರಂಭಿಸಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆ ಕೆರೆ ಭಾಗದಲ್ಲಿ ಹೆಚ್ಚಾಗಿದ್ದು,ಜಿಲ್ಲಾ ಪಂಚಾಯತ್ ಅಮೃತ ಸರೋವರ ಯೋಜನೆಯಡಿ ಕೆಲ ಅಭಿವೃದ್ಧಿ ಕಾಮಗಾರಿ ಮಾಡಿದೆ. ಸಾಮಾಜಿಕ ಅರಣ್ಯ ವಿಭಾಗದಿಂದ 37 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸದ್ಯ ಕೆರೆ ನಿರ್ವಹಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಕೆರೆ ಅಭಿವೃದ್ಧಿ ಸಮಿತಿಯಿಂದ ಇಲ್ಲಿ ಆಗಮಿಸುವವರಿಗೆ ಪ್ರವೇಶ ಶುಲ್ಕ ಪಡೆಯಲಾಗುತ್ತದೆ.
ಟೆಂಡರ್ ಮೂಲಕ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಬೋಟಿಂಗ್ ಗೆಪ್ರತಿ ಅರ್ದ ತಾಸಿಗೆ ಒಬ್ಬರಿಗೆ 100 ರೂ. ಶ ಶುಲ್ಕ ಪಡೆಯಲು ನಿರ್ಧರಿಸಲಾಗಿದೆ. ಕೆರೆಯ ಬಳಿ ತೂಗು ಸೇತುವೆಯೊಂದನ್ನು ಮಾಡಲು ಯೋಜನೆ ಸಿದ್ಧವಾಗಿದೆ. ಭೀಮಕೊಲ ಕೆರೆಯನ್ನು ಪ್ರವಾಸಿ ತಾಣ ಮಾಡುವ ಬಯಕೆ ಅರಣ್ಯ ಇಲಾಖೆಯ ಯೋಜನೆಯಲ್ಲಿದೆ.ಕೋಟ್ ಅಣಶಿ, ಕುಳಗಿ ಮಾದರಿಯಲ್ಲಿ ಭೀಮಕೊಲ ಹಿನ್ನೀರು ಪ್ರದೇಶದಲ್ಲಿ ಟ್ರಕ್ಕಿಂಗ್ ಪ್ರವಾಸೋದ್ಯಮ ಮತ್ತು ವಸತಿ ವ್ಯವಸ್ಥೆಗೆ ಟೆಂಟ್ ನಿರ್ಮಿಸುವ ಯೋಜನೆ ಇದೆ. ಇಲಾಖೆಯ ಅನುಮತಿ ನಂತರ ಈ ಯೋಜನೆಗೆ ಒಂದು ದಿಕ್ಕು ಸಿಗಬಹುದು.-ಮಂಜುನಾಥ ನಾವಿ.ಡಿಎಫ್ ಒ. ಸಾಮಾಜಿಕ ಅರಣ್ಯ ವಿಭಾಗ. ಉತ್ತರ ಕನ್ನಡ.