ತಾಳಿಕೋಟಿ 23: ಪಟ್ಟಣದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಸ್ಮರಣೀಯವನ್ನಾಗಿಸಲು ಹಾಗೂ ಸೈನಿಕರ ಮನೋಬಲ ಹೆಚ್ಚಿಸಲು ಪಟ್ಟಣದ ಸಮಸ್ತ ನಾಗರಿಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇ 26ರಂದು ತಿರಂಗಾ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು ಇದರ ಯಶಸ್ವಿಗೆ ನಮ್ಮ ಸಂಘದ ಸದಸ್ಯರು ಶಕ್ತಿ ಮೀರಿ ಪ್ರಯತ್ನಿಸಲಿದ್ದಾರೆ ಎಂದು ಮಾಜಿ ಅರೆ ಸೈನಿಕ ಪಡೆ ಸಂಘದ ಅಧ್ಯಕ್ಷ ರಾಮನಗೌಡ ಬಿರಾದಾರ(ಗೊಟಖಂಡಕಿ) ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಜಿ ಸೈನಿಕರ ಸಂಘದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಅಭೂತಪೂರ್ವ ಕಾರ್ಯಕ್ರಮದ ಯಶಸ್ವಿಗಾಗಿ ನಮ್ಮ ಸಂಘವು ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿರುವ ಸುಮಾರು ಎರಡು ನೂರು ಸೈನಿಕರ ಮನೆಗಳಿಗೆ ತಲುಪಿ ಅವರು ಕುಟುಂಬ ಸಮೇತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ನಾವು ತಂಡಗಳನ್ನು ರಚಿಸಿ ಕೆಲಸ ಮಾಡಲಿದ್ದೇವೆ. ಈ ಕಾರ್ಯಕ್ರಮದ ಮೂಲಕ ದೇಶದ ಪ್ರತಿ ನಮಗಿರುವ ಬದ್ಧತೆಯನ್ನು ಪ್ರದರ್ಶಿಸುವುದರ ಜೊತೆಗೆ ರಾಷ್ಟ್ರೀಯತೆಯನ್ನು ಜಾಗೃತಿಗೊಳಿಸುವ ಹಾಗೂ ನಮ್ಮ ಯುವಕರಲ್ಲಿ ದೇಶಕ್ಕಾಗಿ ತಮ್ಮನ್ನು ತಾವು ಸಮರ್ಿಸಲು ಸಿದ್ಧವಾಗುವಂತೆ ಮಾಡುವ ಉದ್ದೇಶ ನಮ್ಮದಾಗಿದೆ. ನಮ್ಮ ಈ ಕಾರ್ಯವು ಮೇ 23 ರಿಂದ ಆರಂಭವಾಗಿದ್ದು, 25 ರವರೆಗೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಪಾಲ ಸಂಗಮಿ, ಎಸ್.ಎಸ್. ಅಂಗಡಿ, ನೀಲಪ್ಪ ವಾಲಿ, ಎಸ್.ಜಿ.ಬಿರಾದಾರ, ಸಂಭಾಜಿ ಡಿಸಲೆ, ಕೆ.ಐ.ಸಜ್ಜನ, ಬಾಪುಗೌಡ, ಬಿ.ಎಸ್.ದೋರನಹಳ್ಳಿ ಇದ್ದರು.