10 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವ ಗುರಿ: ಶಾಂತೇಶ ಕಳಸಗೊಂಡ

Goal to provide jobs to 10,000 youth: Shantesh Kalasgonda

ವಿಜಯಪುರ 10: ಉತ್ತರ ಕರ್ನಾಟಕದ 10 ಸಾವಿರ ಯುವಕರಿಗೆ ಹೊಟೇಲ್ ಉದ್ಯಮದಲ್ಲಿ ಉದ್ಯೋಗ ಕೊಡಿಸುವ ಗುರಿ ಹೊಂದಿದ್ದೇನೆ. ಅಲ್ಲದೇ, ಈ ಭಾಗದ ಯುವಕರನ್ನು ಹೊಟೇಲ್ ಉದ್ಯಮದತ್ತ ಸೆಳೆಯಲು ಹೊಟೇಲ್ ಮ್ಯಾನೇಜಮೆಂಟ್ ಕೋರ್ಸ್‌ ತರಬೇತಿ ನೀಡಲು ಕಾರ್ಯೋನ್ಮುಖರಾಗಿರುವುದಾಗಿ ಉದ್ಯೋಗ ರತ್ನ ಪ್ರಶಸ್ತಿ ಪುರಸ್ಕೃತ ನಗರದ ಶುಭಶ್ರೀ ಗ್ರುಪ್ಸ್‌ ವ್ಯವಸ್ಥಾಪಕ ನಿರ್ದೇಶಕ ಶಾಂತೇಶ ಕಳಸಗೊಂಡ ಹೇಳಿದರು.  

ಇಂದು ಮಂಗಳವಾರ ನಗರದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   

ಕರ್ನಾಟಕ ಪ್ರದೇಶ ಹೊಟೇಲ್ ಮಾಲೀಕರ ಸಂಘ ತಮಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿರುವುದು ಇಡೀ ಉತ್ತರ ಕರ್ನಾಟಕದ ಹೊಟೇಲ್ ಉದ್ಯಮಕ್ಕೆ ಸಂದ ಗೌರವವಾಗಿದೆ. ಕೊಲ್ಹಾಪುರದಲ್ಲಿ ಚಹಾ ಮಾರಾಟದಿಂದ ಹೊಟೇಲ್ ಕ್ಷೇತ್ರಕ್ಕೆ ಕಾಲಿಟ್ಟ ನಾನು ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಇಂದು ಈ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯವಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮಿಗಳ ಆಶಯದಂತೆ ಕಾಯಕ ಮುಂದುವರೆಸಿದ್ದೇನೆ. ಅಲ್ಲದೇ, ಸ್ವಾಮಿ ವಿವೇಕಾನಂದರ ‘ಶಕ್ತಿಯೆ ಜೀವನ ದೌರ್ಬಲ್ಯವೇ ಮರಣ’ ನುಡಿಗಳು ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿವೆ. ಅಷ್ಟೇ ಅಲ್ಲ, ಕಾಖಂಡಕಿ ಗುರುದೇವಾಶ್ರಮದ ಶಿವಯೋಗಿಶ್ವರ ಸ್ವಾಮಿಗಳ ಮಾರ್ಗದರ್ಶನ ಮುನ್ನೆಡೆಯುತ್ತಿದ್ದೇನೆ ಎಂದು ಅವರು ಹೇಳಿದರು.  

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ, ಉತ್ತರ ಕರ್ನಾಟಕದಲ್ಲಿ ಯುವಕರಿಗೆ ಹೊಟೇಲ್ ಉದ್ಯಮದಲ್ಲಿರುವ ಹೇರಳ ಅವಕಾಶಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಇದನ್ನು ಹೋಗಲಾಡಿಸಿ, ಹೊಟೇಲ್ ಉದ್ಯಮದತ್ತ ಅವರನ್ನು ಸೆಳೆಯಲು ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು.   

ಸೈಕ್ಲಿಂಗ್ ಗ್ರುಪ್ ಸಂಸ್ಥಾಪಕ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಶಾಂತೇಶ ಕಳಸಗೊಂಡ ಅವರು ಸಾಮಾನ್ಯ ಬಡಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಕಷ್ಟಪಟ್ಟು ಹಂತ ಹಂತವಾಗಿ ಉದ್ಯಮದಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ತಮ್ಮ ಸತತ ಪ್ರಯತ್ನದ ಮೂಲಕ ‘ಅಣ್ಣಾ ಇಡ್ಲಿ’ ಬ್ರ್ಯಂಡ್ ಪ್ರಾರಂಭಿಸಿ, ಕರ್ನಾಟಕ ಮಾತ್ರವಲ್ಲ ನೆರೆಯ ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ‘ಅಣ್ಣಾ ಇಡ್ಲಿ’ ಶಾಖೆಗಳನ್ನು ಪ್ರಾರಂಭಿಸಿದ್ದಾರೆ. ಶೀಘ್ರದಲ್ಲಿ ವಿದೇಶಗಳಿಗೂ ತಮ್ಮ ಉದ್ಯಮವನ್ನು ವಿಸ್ತರಿಸಲಿದ್ದಾರೆ. ಮುಂಚೆಯಿಂದಲೂ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡಿರುವ ಅವರು, ವಿಜಯಪುರದಲ್ಲಿ ಆರೋಗ್ಯಕ್ಕಾಗಿ ಸೈಕ್ಲಿಂಗ್ ಪ್ರಾರಂಭಿಸಿದ ಮೊದಲಿಗರಾಗಿದ್ದಾರೆ ಎಂದು ಹೇಳಿದರು.  

ಸೈಕ್ಲಿಂಗ್ ಗ್ರುಪ್ ಸದಸ್ಯರಾದ ಡಾ. ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಓರಸಂಗ, ಶಂಭು ಕಪೂರಮಠ, ಸುರೇಶ ಘೊಣಸಗಿ, ಡಾ.ರಾಜು ಯಲಗೊಂಡ, ಅಪ್ಪು ಭೈರಗೊಂಡ, ಡಾ. ಪ್ರವೀಣ ಚೌರ, ಅಶ್ಪಾಕ ಮನಗೂಳಿ, ಸಮೀರ ಬಳಗಾರ, ಡಿ.ಕೆ.ತಾವಸೆ, ಗುರುಶಾಂತ ಕಾಪಸೆ, ಶಿವಾನಂದ ಯರನಾಳ, ಗಜಾನನ ಮಂದೋಲಿ, ಸಚೀನ ಪಾಟೀಲ, ಜಗದೀಶ ಪಾಟೀಲ, ಸಂದೀಪ ಮಡಗೊಂಡ, ನವೀದ ನಾಗಠಾಣ, ವೀಣಾ ದೇಶಪಾಂಡೆ, ಎಂ.ಪಿ.ಕುಪ್ಪಿ, ಪ್ರದೀಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.