ನವದೆಹಲಿ, ಫೆ ೨೮ : ದ್ವೇಷ ಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಮತ್ತಿತರರ ವಿರುದ್ದ ಎಫ್ ಐ ಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಆರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ, ದೆಹಲಿ ರಾಜ್ಯ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ಶುಕ್ರವಾರ ನೊಟೀಸ್ ನೀಡಿದೆ.
ವಾಯ್ಸ್ ಆಫ್ ಲಾಯರ್ಸ್ ಸಲ್ಲಿಸಿದ್ದ ಆರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಾಟೀಲ್ ಹಾಗೂ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರರನ್ನು ಒಳಗೊಂಡ ವಿಭಾಗೀಯ ಪೀಠ, ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್ ೧೩ಕ್ಕೆ ಮುಂದೂಡಿತು.
ದ್ವೇಷದ ಭಾಷಣಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಆರ್ಜಿಯಲ್ಲಿ ಕೋರಲಾಗಿದೆ.
ಆಮ್ ಆದ್ಮಿ ಪಕ್ಷದ ನಾಯಕರಾದ ಮನೀಷ್ ಸಿಸೋಡಿಯ, ಅಮಾನುಲ್ಲಾ ಖಾನ್, ಎ ಐ ಎಂ ಐ ಎಂ ನಾಯಕರಾದ ಅಕ್ಬರುದ್ದೀನ್ ಓವೈಸಿ, ವಾರೀಸ್ ಪಠಾಣ್ ಹಾಗೂ ವಕೀಲ ಮೆಹಮೂದ್ ಪರೇಚಾ ವಿರುದ್ದ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಆರ್ಜಿಯಲ್ಲಿ ಕೋರಲಾಗಿದೆ.
ಕೆಲ ನಿರ್ಧಿಷ್ಟ ರಾಜಕೀಯ ಪಕ್ಷಗಳ ನಾಯಕರ ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಹಲವು ಆರ್ಜಿಗಳನ್ನು ಗುರುವಾರ ಹೈಕೋರ್ಟ್ ನಲ್ಲಿ ನಲ್ಲಿಸಲಾಗಿತ್ತು.
ಈ ರಾಜಕೀಯ ನಾಯಕರ ದ್ವೇಷ ಪೂರಿತ ಭಾಷಣಗಳಿಂದಾಗಿ ಕೋಮು ಗಲಭೆಗಳು ಭುಗಿಲೆದ್ದಿದ್ದು, ಇದರಿಂದಾಗಿ ಈಶಾನ್ಯ ದೆಹಲಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರ್ಜಿಯಲ್ಲಿ ಹೇಳಲಾಗಿದೆ.