ಗದಗ ಜಿಲ್ಲೆಯಲ್ಲಿ ಭಾರೀ ಪ್ರತಿಕ್ರಿಯೆ ಪಡೆದ ಉದ್ಯೋಗ ಮೇಳ : ಸಚಿವ ಎಚ್. ಕೆ. ಪಾಟೀಲ
ಗದಗ 03 : ಗದಗ ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಇತರೆ ಇಲಾಖೆಗಳಿಂದ ಆಯೋಜಿಸಿದ ಗದಗ ಜಿಲ್ಲಾ ಉದ್ಯೋಗ ಮೇಳ - 2025 ಪ್ರಭುತ್ವ ಉದ್ಯೋಗಾಕಾಂಕ್ಷಿಗಳಿಂದ ಭಾರೀ ಸ್ಪಂದನೆ ಕಂಡಿದೆ.ಉದ್ಯೋಗ ಮೇಳದ ಪ್ರಮುಖ ಅಂಕಿ ಅಂಶಗಳು: ಉದ್ಯೋಗ ಮೇಳಕ್ಕೆ ಆಪ್ ಲೈನ್ ಹಾಗೂ ಆನ್ ಲೈನ್ಮೂಲಕ 6243 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ಮೇಳದಲ್ಲಿ 4089 ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ಪೈಕಿ, 827 ಅಭ್ಯರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.ಸಂದರ್ಶನದಲ್ಲಿ 1067 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ಗೆ ಸೆಲೆಕ್ಟ್ ಆಗಿದ್ದಾರೆ. ಆಯ್ಕೆ ಹೊಂದಿದ ಅಭ್ಯರ್ಥಿಗಳ ಪೈಕಿ 12 ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗಲು ರವಿವಾರವೇ ಬೆಂಗಳೂರಿಗೆ ವಾಹನದಲ್ಲಿ ತೆರಳಿದರು. ಈ ವಾಹನಕ್ಕೆ ಸಚಿವ ಎಚ್. ಕೆ. ಪಾಟೀಲ ಅವರು ಚಾಲನೆ ನೀಡಿದರು.ಜನರಿಂದ ಉತ್ತಮ ಪ್ರತಿಕ್ರಿಯೆ:ಉದ್ಯೋಗ ಮೇಳಕ್ಕೆ ಗದಗ ಜಿಲ್ಲೆಯ ಯುವಕರು ಹಾಗೂ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಖಾಸಗಿ ಹಾಗೂ ಸರಕಾರಿ ಕಂಪನಿಗಳು ತಮ್ಮ ಉದ್ಯೋಗ ಅವಕಾಶಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದು, ಹಲವರು ತಕ್ಷಣವೇ ಉದ್ಯೋಗ ಪಡೆಯುವಂತಾಗಿದೆ.ಸ್ನಾತಕೋತ್ತರರಿಂದ ಐಟಿಐ ಪದವಿದಾರರು ತನಕ ಎಲ್ಲರಿಗೂ ಅವಕಾಶ: ಹತ್ತಾರು ಕಂಪನಿಗಳು ಪಾಲ್ಗೊಂಡು ವಿವಿಧ ಕ್ಷೇತ್ರಗಳ ಉದ್ಯೋಗಗಳಿಗಾಗಿ ಸಂದರ್ಶನ ನಡೆಸಿದವು. ಆಕರ್ಷಕ ವೇತನ, ತರಬೇತಿ ಹಾಗೂ ಕರಿಯರ್ ಗ್ರೋತ್ ಅವಕಾಶಗಳೊಂದಿಗೆ ಯುವ ಪ್ರತಿಭೆಗಳಿಗೆ ದಾರಿ ತೆರೆಯಲಾಯಿತು.ಗದಗ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳ ಪ್ರಶಂಸೆ:ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಹಾಗೂ ಜನಪ್ರತಿನಿಧಿಗಳು ಈ ಮೇಳ ಯಶಸ್ವಿಯಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ಈ ರೀತಿಯ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.ಸಚಿವ ಡಾ. ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಯಶಸ್ವಿ :ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮಾಜಿ ಶಾಸಕರಾದ ಡಿ ಆರ್ ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಾಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿಬಿ ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಪಾಟೀಲ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ್ ಪೋತದಾರ, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಡಾ. ಮಲ್ಲೂರ ಬಸವರಾಜ್ ಸೇರಿದಂತೆ ಇತರರು ಇದ್ದರು.