ತಾಂಬಾ 10: ಗ್ರಾಮದಲ್ಲಿ ಬುಧವಾರ ನಡೆಯುಲಿರುವ ಕಾರಹುಣ್ಣಿಮೆಯ "ಕರಿ ಹರಿಯುವ" ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತುಗಳಿಗೆ ಬೇಕಾದ ಅಲಂಕಾರ ಸಾಮಗ್ರಿಗಳನ್ನು ಖರೀದಿಸಿದರು.
ರೈತನ ಒಡನಾಡಿ ಮಿತ್ರ ಎಂದೆಲ್ಲ ಕರೆಸಿಕೊಳ್ಳುವ ಎತ್ತುಗಳಿಗೆ ವಿಶೇಷ ಹಬ್ಬದ ದಿನ ಕಾರಹುಣ್ಣಿಮೆ. ಈ ದಿನ ರೈತರು ತಮ್ಮ ಎತ್ತುಗಳಿಗೆ ಬಗೆ ಬಗೆಯ ವಸ್ತುಗಳಿಂದ ಶೃಂಗರಿಸಿ ಊರಿನೆಲ್ಲೆಡೆ ತಿರುಗಾಡಿಸಿ ಅಭಿಮಾನ ಹಾಗೂ ದೇವರ ಸ್ವರೂಪವಾಗಿರುವ ಎತ್ತುಗಳಿಗೆ ಗೌರವ ಸಲ್ಲಿಸುವ ಸಂಪ್ರದಾಯ ಮೊದಲಿನಿಂದಲು ನಡೆದು ಬಂದಿದೆ. ಅಂತೇಯೆ ಎತ್ತುಗಳ ಶೃಂಗಾರಕ್ಕೆ ಬೇಕಾಗುವ ಹಣೆಕಟ್ಟು, ಗೆಜ್ಜೆ ಸರ, ಗುಂಗರಿ ಸರ, ಬಾರಕೋಲ್, ಜತ್ತಿಗೆ, ಗೊಂಡೆ, ಕೊಮ್ಮಣಸು, ಹಿಡಿ ಹಗ್ಗ, ರಿಬ್ಬಿನ, ಕವಡಿ ಸರ, ಹಿತ್ತಾಳೆ, ಸರಪಣಿ, ಬಾಸಿಂಗ್, ಜೂಲ್ ಸೇರಿದಂತೆ ಹತ್ತು ಹಲವು ಬಗೆಯ ಶೃಂಗಾರ ಸಾಮಗ್ರಿಗಳನ್ನು ರೈತರು ಮಂಗಳವಾರ ಖರೀದಿಸುವಲ್ಲಿ ನಿರತರಾಗಿದ್ದರು.
ಗ್ರಾಮದ ವ್ಯಾಪಾರಿ ಸಂಗಯ್ಯ ಹಿರೇಮಠ ಪತ್ರಿಕೆಯೊಂದಿಗೆ ಮಾತಾನಾಡಿ, ಈ ಬಾರಿ ಕಾರಹುಣ್ಣಿಮೆ ಜೊರಾಗಿದ್ದು ಮುಂಗಾರು ಹಂಗಾಮು ಆರಂಭದಲ್ಲಿಯೇ ರೈತನ ಕೈ ಹಿಡಿಯುವ ಲಕ್ಷಣಗಳು ಕಂಡು ಬರುತ್ತಿದ್ದು ರೈತರು ಉತ್ಸಾಹದಿಂದಲೆ ಎತ್ತುಗಳ ಶೃಂಗಾರದ ಸಾಮಾನುಗಳನ್ನು ಕೊಳ್ಳುತ್ತಿದ್ದು ವ್ಯಾಪಾರ ಚೆನ್ನಾಗಿದೆ ಎಂದು ತಿಳಿಸಿದರು. ರೈತ ಬಿರ್ಪ ಮ್ಯಾಗೇರಿ ಮಾತನಾಡಿ ಕಳೆದ ವರ್ಷ ಬರಗಾಲದಿಂದ ರೈತರು ತತ್ತರಿಸಿದ್ದಾರೆ ಈ ವರ್ಷ ರೋಣಿ ಮಳೆ ಆಗಿರುವುದರಿಂದ ಹುರುಪಿನಿಂದಲೆ ಸಾಮಗ್ರಿಗಳನು ಕೊಳುತ್ತಿದೆವೆ.
ಕಳೆದ ವರ್ಷಕ್ಕಿಂತ ಈ ಬಾರಿ ಎತ್ತುಗಳಿಗೆ ಅಲಂಕಾರ ಮಾಡಲು ಬೇಕಾದ ಶೃಂಗಾರದ ಸಾಮಗ್ರಿಗಳ ಬೆಲೆ ದುಪಟ್ಟಾಗಿದೆ. ಯಾವುದು ಕೊಳ್ಳುವುದೊ ಎತ್ತುಗಳನ್ನು ಪೂಜಿಸಲು ಶೃಂಗಾರ ಸಾಮಗ್ರಿಗಳ ಬೆಲೆ ಹೆಚ್ಚಾದರು ಯಾವುದನ್ನು ಬಿಡುವುದೋ ಎಂದು ತಿಳಿಯುತಿಲ್ಲ. ಆದರು ಖರಿದಿಸುತ್ತಿರುವುದಾಗಿ ತಿಳಿಸಿದರು.